ಮಹಾರಾಷ್ಟ್ರ ಸರ್ಕಾರ ರಚನೆ; ಎನ್ಸಿಪಿ-ಕಾಂಗ್ರೆಸ್ ಮಹತ್ವದ ಸಭೆ
ಮುಂಬೈ, ನವೆಂಬರ್ 12 : ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಎನ್ಸಿಪಿ ಇಂದು ಮಹತ್ವದ ಸಭೆ ನಡೆಸಲಿದ್ದು, ಸರ್ಕಾರ ರಚನೆ ಮಾಡುವ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲಿವೆ.
ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದ ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ. 54 ಶಾಸಕರನ್ನು ಹೊಂದಿರುವ ಎನ್ಸಿಪಿಗೆ ರಾಜ್ಯಪಾಲರು ಸರ್ಕಾರ ರಚನೆ ಮಾಡಲು ಆಹ್ವಾನ ನೀಡಿದ್ದಾರೆ.
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್ಗೆ ದೇವೇಗೌಡರ ಕಿವಿಮಾತು
ಎನ್ಸಿಪಿ ನಾಯಕ ಅಜಿತ್ ಪವಾರ್ ಮಾಧ್ಯಮಗಳ ಜೊತೆ ಮಾತನಾಡಿದ್ದು, "ಎನ್ಸಿಪಿ ಮತ್ತು ಕಾಂಗ್ರೆಸ್ ನವೆಂಬರ್ 12ರಂದು ಸಭೆ ನಡೆಸಲಿದ್ದು, ಶಿವಸೇನೆಗೆ ಬೆಂಬಲ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಿದ್ದೇವೆ" ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಕುತೂಹಲ ಮೂಡಿಸಿದ ರಾಜಕೀಯ ಬೆಳವಣಿಗೆ: ಶಿವಸೇನಾ-ಎನ್ಸಿಪಿ ಮೈತ್ರಿ?
ಸೋಮವಾರ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಶಿವಸೇನೆ ನಾಯಕರು ಸರ್ಕಾರ ರಚನೆ ಮಾಡಲು ಎರಡು ದಿನಗಳ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ, ಪಕ್ಷದ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ.
ಶಿವಸೇನೆ-ಎನ್ಸಿಪಿ ಸರಕಾರ ಸಾಧ್ಯತೆ: ಅದೆಷ್ಟು ವ್ಯಥೆ ಪಡುತ್ತಿದೆಯೋ ಬಾಳಾ ಠಾಕ್ರೆ ಆತ್ಮ!
ಎನ್ಸಿಪಿಗೆ ಮಂಗಳವಾರ ರಾತ್ರಿ 8.30ರ ತನಕ ಸರ್ಕಾರ ರಚನೆ ಮಾಡಲು ಅವಕಾಶ ನೀಡಲಾಗಿದೆ. ಎನ್ಸಿಪಿ 54 ಸ್ಥಾನಗಳಲ್ಲಿ ಜಯಗಳಿಸಿದ್ದು, ಕಾಂಗ್ರೆಸ್ 44 ಸ್ಥಾನಗಳಲ್ಲಿ ಗೆದ್ದಿದೆ. ಎರಡೂ ಪಕ್ಷಗಳು ಸೇರಿ 56 ಸ್ಥಾನಗಳಿಸಿರುವ ಶಿವಸೇನೆ ಜೊತೆ ಸೇರಿ ಸರ್ಕಾರ ರಚನೆ ಮಾಡಲಿವೆಯೇ? ಕಾದು ನೋಡಬೇಕು.
ಬಿಜೆಪಿ-ಶಿವಸೇನೆ ಮೈತ್ರಿ ಮುರಿದು ಬಿದ್ದಿದೆ. ಚುನಾವಣೆಯಲ್ಲಿ 105 ಸ್ಥಾನಗಳಿಸಿ, ದೊಡ್ಡ ಪಕ್ಷವಾಗಿರುವ ಬಿಜೆಪಿ ಸರ್ಕಾರ ರಚನೆ ಮಾಡುವುದಿಲ್ಲ ಎಂದು ಹೇಳಿದೆ. "ಕಾದು ನೋಡುವ ತಂತ್ರ ಅನುಸರಿಸುತ್ತೇವೆ" ಎಂದು ಪಕ್ಷದ ನಾಯಕ ಸುಧೀರ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತೆಗೆದುಕೊಳ್ಳುವ ತೀರ್ಮಾನದ ಮೇಲೆ ಮಹಾರಾಷ್ಟ್ರದಲ್ಲಿ ಯಾರು ಸರ್ಕಾರ ರಚನೆ ಮಾಡಲಿದ್ದಾರೆ? ಎಂಬುದು ತೀರ್ಮಾನವಾಗಲಿದೆ. ಎನ್ಸಿಪಿಯೂ ಸರ್ಕಾರ ರಚನೆ ಮಾಡಲು ವಿಫಲವಾದರೆ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದೆ.
ಬಿಜೆಪಿ ಮತ್ತು ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಶೀವಸೇನೆ ಮುಖ್ಯಮಂತ್ರಿ ಪಟ್ಟಕ್ಕೆ ಬೇಡಿಕೆ ಇಟ್ಟ ಕಾರಣದಿಂದಾಗಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ರಚನೆಗೆ ಬಿಜೆಪಿ ಒಪ್ಪಿಗೆ ಕೊಟ್ಟಿಲ್ಲ.