ಶಿವಸೇನಾಗೆ ಕಾಲಾವಕಾಶ ನೀಡಲು ರಾಜ್ಯಪಾಲರ ನಕಾರ
ಮುಂಬೈ, ನವೆಂಬರ್ 11: ಶಿವಸೇನಾಗೆ ಎನ್ಸಿಪಿ ಮತ್ತು ಕಾಂಗ್ರೆಸ್ ಬೆಂಬಲ ನೀಡಲಿದ್ದು, ಕೊನೆಗೂ ಸರ್ಕಾರ ರಚನೆಯ ಬಿಕ್ಕಟ್ಟು ಕೊನೆಯಾಗಲಿದೆ ಎಂಬ ಜನರ ನಂಬಿಕೆ ಹುಸಿಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಅತ್ತ ಶಿವಸೇನಾ-ಎನ್ಸಿಪಿ ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಲಿದೆ ಎಂದು ಹೇಳಲಾಗಿತ್ತು. ಆದರೆ ಕಾಂಗ್ರೆಸ್ ಅದನ್ನು ಇನ್ನೂ ತೀರ್ಮಾನಿಸಿಲ್ಲ ಎಂದು ಹೇಳುವ ಮೂಲಕ ಬಿಕ್ಕಟ್ಟು ಮುಂದುವರಿದಿದೆ.
ಇತ್ತ ಕಾಂಗ್ರೆಸ್ ಬಾಹ್ಯ ಬೆಂಬಲ ದೊರೆಯುವವರೆಗೆ ಕಾಯಬೇಕಿರುವುದರಿಂದ ರಾಜ್ಯಪಾಲರ ಬಳಿ 48 ಗಂಟೆಗಳ ಕಾಲ ಸಮಯಾವಕಾಶ ಕೇಳಿದ್ದ ಶಿವಸೇನಾಗೆ ನಿರಾಸೆಯಾಗಿದೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಲು ನೀಡಿದ್ದ ಸೋಮವಾರ ಸಂಜೆ 7.30ರ ಗಡುವು ದಾಟಿದೆ. ಹೀಗಾಗಿ ಸರ್ಕಾರ ರಚನೆಗೆ ಸರ್ಕಸ್ ನಡೆಸಿದ್ದ ಶಿವಸೇನಾ ಪ್ರಯತ್ನ ನೀರಿನಲ್ಲಿ ಮಾಡಿದ ಹೋಮದಂತಾಗುವ ಸೂಚನೆ ದೊರೆತಿದೆ.
Breaking: ಮಹಾರಾಷ್ಟ್ರಕ್ಕೆ ಉದ್ಧವ್ ಠಾಕ್ರೆ ಸಿಎಂ, ಅಜಿತ್ ಪವಾರ್ ಡಿಸಿಎಂ?
ಮಹಾರಾಷ್ಟ್ರದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ತಲೆದೋರಿದರೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆ ಇದೆ. ಕಡೆಪಕ್ಷ 24 ಗಂಟೆಗಳ ಹೆಚ್ಚುವರಿ ಸಮಯ ನೀಡಲು ಸಹ ರಾಜ್ಯಪಾಲರು ನಿರಾಕರಿಸಿರುವುದು ಶಿವಸೇನಾಗೆ ತಲೆನೋವಾಗಿ ಪರಿಣಮಿಸಿದೆ.
ಶಿವಸೇನಾದ ನಾಯಕರ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಆಸಕ್ತಿ ಪ್ರದರ್ಶಿಸಿತು. ಆದರೆ ಉಳಿದ ಪಕ್ಷಗಳ ಬೆಂಬಲವಿರುವ ಪತ್ರ ನೀಡುವಲ್ಲಿ ವಿಫಲವಾಯಿತು.
ರಾಜ್ಯಪಾಲರ ಭೇಟಿಯ ಬಳಿಕ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಸೇನಾ ಶಾಸಕ ಆದಿತ್ಯ ಠಾಕ್ರೆ, 'ರಾಜ್ಯಪಾಲರು ಸರ್ಕಾರ ರಚನೆಯ ತಮ್ಮ ಹಕ್ಕು ಪ್ರತಿಪಾದನೆಯನ್ನು ತಿರಸ್ಕರಿಸಿಲ್ಲ. ಅದರ ಬದಲು ಸರ್ಕಾರ ರಚನೆಗೆ ಎರಡು ದಿನ ಹೆಚ್ಚುವರಿ ಸಮಯದ ಕೋರಿಕೆಯನ್ನು ನಿರಾಕರಿಸಿದ್ದಾರೆ' ಎಂದರು.
ಮಾತುಕತೆ ಬಾಕಿ ಇದೆ ಎಂದ ಕಾಂಗ್ರೆಸ್: ಸರ್ಕಾರ ರಚನೆ ಇನ್ನೂ ಅತಂತ್ರ
ನಾವು ಸರ್ಕಾರ ರಚನೆಗೆ ಆಸಕ್ತರಾಗಿದ್ದೇವೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿದ್ದೇವೆ. ಎರಡು ದಿನಗಳ ಸಮಯ ಕೇಳಿದ್ದೆವು. ಆದರೆ ಅವರು ನೀಡಿಲ್ಲ. ನಿನ್ನೆ ಸಂಜೆ ಪಕ್ಷದ ಮುಖಂಡ ಏಕನಾಥ್ ಶಿಂಧೆ ಅವರಿಗೆ ರಾಜ್ಯಪಾಲರ ಪತ್ರ ಬಂದಿದ್ದು, 24 ಗಂಟೆಗಳ ಒಳಗೆ ಹಕ್ಕು ಮಂಡಿಸಲು ಸೂಚಿಸಿದ್ದರು. ನಾವು ಇತರೆ ಪಕ್ಷಗಳೊಂದಿಗೆ ಚರ್ಚಿಸಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಉತ್ಸುಕರಾಗಿರುವುದಾಗಿ ಹೇಳಿದ್ದೆವು. ನಮಗೆ ಇನ್ನೂ ಎರಡು ಪಕ್ಷಗಳ (ಎನ್ಸಿಪಿ ಮತ್ತು ಕಾಂಗ್ರೆಸ್) ಬೆಂಬಲದ ಪತ್ರಗಳು ದೊರೆತಿಲ್ಲ ಎಂದು ಹೇಳಿದರು.