ಮಹಾರಾಷ್ಟ್ರ ಬೆಳವಣಿಗೆ ಪರಿಣಾಮ: ರಾಜ್ಯಪಾಲರ ತಲೆದಂಡ?
ಮುಂಬೈ, ನವೆಂಬರ್ 27: ಮಹಾರಾಷ್ಟ್ರದಲ್ಲಿ ಉಂಟಾದ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ರಾಜ್ಯಪಾಲರ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಮುಂಜಾನೆ ರಾಷ್ಟ್ರಪತಿ ಆಡಳಿತ ತೆರವುಗೊಳಿಸಿ ಬಿಜೆಪಿ-ಎನ್ಸಿಪಿ ಸರ್ಕಾರ ರಚನೆಗೆ ತರಾತುರಿಯಲ್ಲಿ ಅವಕಾಶ ನೀಡಿ ಪ್ರಮಾಣವಚನ ಕೂಡ ಬೋಧಿಸುವ ಮೂಲಕ ವಿವಾದ ಸೃಷ್ಟಿಸಿದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಬದಲಿಸುವ ಮೂಲಕ ಕೇಂದ್ರ ಸರ್ಕಾರ ಉಂಟಾಗಿರುವ ಆಕ್ರೋಶವನ್ನು ತಣ್ಣಗಾಗಿಸಲು ಮುಂದಾಗಿದೆ ಎಂದು 'ಲೈವ್ ಮಿಂಟ್' ವರದಿ ಮಾಡಿದೆ.
ಕೋಶ್ಯಾರಿ ಅವರನ್ನು ವರ್ಗಾವಣೆ ಮಾಡಿ ಅವರ ಜಾಗಕ್ಕೆ ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ನೇಮಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದಲ್ಲಿ ರಾಜ್ಯಪಾಲರ ವಿರುದ್ಧವೇ ಸಮರ ಸಾರಿದ ಮಿತ್ರಪಕ್ಷಗಳು!
ಬಿಜೆಪಿಯ ಪರವಾಗಿ ಅನುಕೂಲಗಳನ್ನು ಮಾಡಿಕೊಡುವ ಮೂಲಕ ಕೋಶ್ಯಾರಿ ತೀವ್ರ ಟೀಕೆಗೆ ಗುರಿಯಾಗಿದ್ದರು. ವಿರೋಧಪಕ್ಷಗಳು ಅವರ ವಿರುದ್ಧ ಪ್ರತಿಭಟನೆ ಕೂಡ ನಡೆಸಿದ್ದರು. ಬಿಜೆಪಿ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಆರೋಪಿಸಿದ್ದರು. ಮಹಾರಾಷ್ಟ್ರದ ಘಟನೆಯಿಂದ ಬಿಜೆಪಿ ಮುಖಭಂಗಕ್ಕೆ ಒಳಗಾಗಿದೆ. ಹೀಗಾಗಿ ರಾಜ್ಯಪಾಲರನ್ನು ಬದಲಿಸುವ ಅನಿವಾರ್ಯತೆಗೆ ಒಳಗಾಗಿದೆ ಎಂದು ಹೇಳಲಾಗಿದೆ.
ರಾಜಸ್ಥಾನದ ರಾಜ್ಯಪಾಲ
ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಜುಲೈ 22ರಂದು ನೇಮಕವಾಗಿದ್ದ ಕಲ್ರಾಜ್ ಮಿಶ್ರಾ, ಸೆ.9ರಂದು ರಾಜಸ್ಥಾನದ ರಾಜ್ಯಪಾಲರಾಗಿ ವರ್ಗಾವಣೆಗೊಂಡಿದ್ದರು. ಉತ್ತರ ಪ್ರದೇಶದ ಹಿರಿಯ ಬಿಜೆಪಿ ನಾಯಕರಾಗಿದ್ದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಸಚಿವರಾಗಿದ್ದರು. ಜತೆಗೆ ಉತ್ತರ ಪ್ರದೇಶದ ಬಿಜೆಪಿ ಘಟಕದ ಅಧ್ಯಕ್ಷರಾಗಿ, ರಾಷ್ಟ್ರೀಯ ಘಟಕದ ಉಪಾಧ್ಯಕ್ಷರಾಗಿ ಸಹ ಕಾರ್ಯ ನಿರ್ವಹಿಸಿದ್ದರು.
ಉತ್ತರಾಖಂಡದ ಮುಖ್ಯಮಂತ್ರಿ
ರಾಜ್ಯಸಭೆಯ ಸದಸ್ಯರಾಗಿದ್ದ ಕೋಶ್ಯಾರಿ, ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದರು. ಆರೆಸ್ಸೆಸ್ನ ಹಿರಿಯ ಸದಸ್ಯರಾದ ಅವರು, ಪಕ್ಷದ ರಾಷ್ಟ್ರೀಯ ಘಟಕದ ಉಪಾಧ್ಯಕ್ಷರಾಗಿ ಮತ್ತು ಉತ್ತರಾಖಂಡ ಮೊದಲ ಬಿಜೆಪಿ ಅಧ್ಯಕ್ಷರಾಗಿದ್ದರು. 2019ರ ಸೆ.5ರಂದು ಮಹಾರಾಷ್ಟ್ರದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು. ಎರಡೂವರೆ ತಿಂಗಳಿನಲ್ಲಿಯೇ ಅವರನ್ನು ಬದಲಿಸಲು ಕೇಂದ್ರ ಚಿಂತನೆ ನಡೆಸಿದೆ. ಅವರನ್ನು ರಾಜಸ್ಥಾನಕ್ಕೆ ವರ್ಗಾಯಿಸುವ ಸಾಧ್ಯತೆ ಇದೆ.
ಮಹಾರಾಷ್ಟ್ರ ರಾಜ್ಯಪಾಲರ ವಿರುದ್ಧ ಸುಪ್ರೀಂ ಮೊರೆ ಹೋದ ಶಿವಸೇನಾ
ವಿರೋಧಕ್ಕೆ ಕಾರಣವಾಗಿದ್ದ ಕೋಶ್ಯಾರಿ
ಮಹಾರಾಷ್ಟ್ರ ರಾಜಕೀಯದ ವಿಚಾರದಲ್ಲಿ ಕೋಶ್ಯಾರಿ ಅವರ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಸರ್ಕಾರ ರಚನೆಗೆ ಆರಂಭದಲ್ಲಿ ಕಾಲಾವಕಾಶ ನೀಡದೆ ಇರುವುದು, ರಾತ್ರೋರಾತ್ರಿ ರಾಷ್ಟ್ರಪತಿ ಆಳ್ವಿಕೆ ತೆಗೆದುಹಾಕಿ ಬಿಜೆಪಿ ಮುಖ್ಯಮಂತ್ರಿಗೆ ಪ್ರಮಾಣವಚನ ಬೋಧಿಸುವ ಮೂಲಕ ಸರ್ಕಾರ ರಚನೆಗೆ ನೆರವು ನೀಡಿದ್ದು ವ್ಯಾಪಕ ಚರ್ಚೆಗೆ ಒಳಗಾಗಿದೆ.
ರಾಜ್ಯಪಾಲರನ್ನು ಬದಲಿಸಿ
ಮೂಲತಃ ಯಾವುದೇ ಪಕ್ಷಕ್ಕೆ ಸೇರಿದ್ದರೂ ಅವರು ರಾಜ್ಯಪಾಲರಾಗಿ ನೇಮಕವಾದ ಬಳಿಕ ಸಂವಿಧಾನದ ಅಡಿಯಲ್ಲಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಪಕ್ಷದ ವಕ್ತಾರರಂತೆ ಅವರು ವರ್ತಿಸುವುದು ಖಂಡನೀಯ. ರಾಷ್ಟ್ರಪತಿಯ ಅನುಮೋದನೆ ಪಡೆದು ಕೂಡಲೇ ರಾಜ್ಯಪಾಲರನ್ನು ಬದಲಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತ್ತು.