ಏಕನಾಥ್ ಶಿಂಧೆ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದ ಆದಿತ್ಯ ಠಾಕ್ರೆ
ಔರಂಗಾಬಾದ್, ಜುಲೈ22: ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಶುಕ್ರವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು, ಬಿಜೆಪಿ-ಏಕನಾಥ್ ಶಿಂಧೆ ಮೈತ್ರಿ ಸರ್ಕಾರವು ಅಸಾಂವಿಧಾನಿಕ ಮತ್ತು ರಾಕ್ಷಸ ಮಹತ್ವಾಕಾಂಕ್ಷೆಯಿಂದ ರಚನೆಯಾಗಿದೆ ಎಂದು ಆದಿತ್ಯ ಠಾಕ್ರೆ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
"ರಾಕ್ಷಸ ಮಹತ್ವಾಕಾಂಕ್ಷೆಯಿಂದ ರಚನೆಯಾದ ಈ ಸರ್ಕಾರವು ಅಸಾಂವಿಧಾನಿಕ ಮತ್ತು ಕಾನೂನುಬಾಹಿರವಾಗಿದೆ. ಇದು ತಾತ್ಕಾಲಿಕ ಸರ್ಕಾರವಾಗಿದ್ದು ಅತಿ ಶೀಘ್ರದಲ್ಲೇ ಪತನಗೊಳ್ಳುತ್ತದೆ" ಎಂದು ಮಹಾರಾಷ್ಟ್ರದ ಮಾಜಿ ಸಚಿವ ಆದಿತ್ಯ ಠಾಕ್ರೆ ಔರಂಗಾಬಾದ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.
"ಏಕನಾಥ್ ಶಿಂಧೆ ಬಣದ ಶಾಸಕರು ಮಾಡಿದ್ದು ಮಾನವೀಯತೆಗೆ ವಿರುದ್ಧವಾಗಿದೆ. ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಕೊರೊನಾ ವೈರಸ್ ಸೋಂಕಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದಾಗ ಬಂಡಾಯ ಶಾಸಕರು ಸೂರತ್ಗೆ ಹೋಗಿದ್ದರು" ಎಂದು ಶಿಂಧೆ ಬಣದ ಶಾಸಕರ ವಿರುದ್ಧ ಹರಿಹಾಯ್ದರು.
ತನ್ನ ತಂದೆ ಉದ್ಧವ್ ಠಾಕ್ರೆ ನೇತೃತ್ವದ ಹಿಂದಿನ ಮಹಾ ವಿಕಾಸ್ ಅಘಾಡಿ ಸರ್ಕಾರವು ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಮರುನಾಮಕರಣ ಮಾಡುವ ಪ್ರಕ್ರಿಯೆಗೆ ತಡೆ ನೀಡುವ ನಿರ್ಧಾರದ ಬಗ್ಗೆ ಆದಿತ್ಯ ಠಾಕ್ರೆ ಶಿಂಧೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಂಡಾಯ ಶಾಸಕರು ವಾಪಸ್ ಬಂದರೆ ಸ್ವಾಗತಿಸುತ್ತೇವೆ
ಬಿಟ್ಟು ಹೋಗಿರುವ ಶಾಸಕರಿಗೆ ಮಾತೋಶ್ರೀಯ ಬಾಗಿಲು ತೆರೆದಿರುತ್ತದೆ. ಚುನಾವಣೆಯಲ್ಲಿ ಜನರೇ ಯಾವುದು ಸರಿ, ತಪ್ಪು ಎಂದು ನಿರ್ಧರಿಸಲಿ ಎಂದು ಬಂಡಾಯ ಶಾಸಕರ ಕುರಿತು ಹೇಳಿಕೆ ನೀಡಿದರು.
ಆದಿತ್ಯ ಠಾಕ್ರೆ ಮತ್ತೊಮ್ಮೆ ಪಕ್ಷಾಂತರಿಗಳನ್ನು 'ದೇಶದ್ರೋಹಿಗಳು' ಎಂದು ಕರೆದಿದ್ದರು. ಪಕ್ಷವನ್ನು ತೊರೆದವರು ವಾಪಸ್ ಶಿವಸೇನೆಗೆ ಬರಲು ಬಯಸಿದರೆ ಸ್ವಾಗತ ಎಂದು ಹೇಳಿದ ಒಂದು ದಿನದ ನಂತರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆದಿತ್ಯ ಠಾಕ್ರೆ ಗುರುವಾರ ಬಂಡಾಯ ಶಾಸಕರ ಬಗ್ಗೆ ಹೇಳಿಕೆ ನೀಡುವ ಸಂದರ್ಭದಲ್ಲಿ, "ಬಿಟ್ಟು ಹೋದ ಶಾಸಕರು ದೇಶ್ರೋಹಿಗಳು, ನಾವು ಅವರನ್ನು ನಂಬಿ ಅಪ್ಪಿಕೊಂಡಿದ್ದೆವು ಆದರೆ ಅವರು ನಮ್ಮ ಬೆನ್ನಿಗೆ ಚೂರಿ ಹಾಕಿದರು. ಶಾಸಕರ ನಡೆಯಿಂದ ನಮಗೆ ತೀವ್ರವಾದ ನೋವಾಗಿದೆ. ಅವರು ಪಕ್ಷಕ್ಕೆ ಮರಳಿ ಬಂದರೆ ಸ್ವಾಗತಿಸುತ್ತೇವೆ" ಎಂದು ಹೇಳಿದ್ದರು.
ಉದ್ಧವ್ ಠಾಕ್ರೆ ಸರ್ಕಾರ ಪತನಗೊಳಿಸಿದ್ದ ಶಿಂಧೆ ಬಣ
ಉದ್ಧವ್ ಠಾಕ್ರೆ ನಾಯಕತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ದಂಗೆಯಿದ್ದಿದ್ದ ಏಕನಾಥ್ ಶಿಂಧೆ ನೇತೃತ್ವದ 40 ಶಾಸಕರು ಮಹಾ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದರು. ಶಾಸಕರ ವಿಶ್ವಾಸ ಕಳೆದುಕೊಂಡ ಉದ್ಧವ್ ಠಾಕ್ರೆ ಜೂನ್ 29ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಪರಂಪರೆಯನ್ನು ಪ್ರತಿಪಾದಿಸಲು ಸರ್ಕಾರ ಬೀಳಿಸಿದ್ದು ಬಿಜೆಪಿ ಜೊತೆ ಕೈ ಜೋಡಿಸಿರುವುದಾಗಿ ಏಕನಾಥ್ ಶಿಂಧೆ ಬಣ ಹೇಳಿಕೊಂಡಿದೆ. ತಾವೇ ನಿಜವಾದ ಶಿವಸೇನೆ ಎಂದು ಶಿಂಧೆ ಬಣ ವಾದಿಸಿದೆ. ಮುಖ್ಯಮಂತ್ರಿಗಳ ಬಣವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಪಕ್ಷದ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಅದಕ್ಕೆ ನಿಗದಿಪಡಿಸುವಂತೆ ಕೋರಿದೆ ಎಂದು ಪಿಟಿಐ ವರದಿ ಮಾಡಿದೆ.
ಚುನಾವಣಾ ಆಯೋಗಕ್ಕೆ ನೀಡಿದ ಸಂವಹನದಲ್ಲಿ, ಶಿಂಧೆ ಬಣವು ನಿಜವಾದ ಶಿವಸೇನೆ ಎಂದು ಹೇಳಿಕೊಂಡಿದೆ ಮತ್ತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮತ್ತು ಮಹಾರಾಷ್ಟ್ರ ಅಸೆಂಬ್ಲಿ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ನೀಡಿದ ಮಾನ್ಯತೆಯನ್ನು ಉಲ್ಲೇಖಿಸಿದೆ.