ರೈತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ ಮಹಾರಾಷ್ಟ್ರ ಸರ್ಕಾರ
ಮುಂಬೈ, ಡಿಸೆಂಬರ್ 21: ಮಹಾರಾಷ್ಟ್ರದ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರವು ರೈತರ ಎರಡು ಲಕ್ಷ ರೂಪಾಯಿ ಬೆಳೆ ಸಾಲಮನ್ನಾ ಮಾಡುವುದಾಗಿ ಘೊಷಿಸಿದೆ.
ಮಹಾರಾಷ್ಟ್ರ ವಿಧಾನಸಭೆ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಘೋಷಣೆ ಮಾಡಿದ್ದಾರೆ.
ಸೆಪ್ಟೆಂಬರ್ 2019 ರ ವರೆಗಿನ ಎರಡು ಲಕ್ಷ ರೂಪಾಯಿ ಬೆಳೆಸಾಲವನ್ನು ಮನ್ನಾ ಮಾಡುವುದಾಗಿ ಹೇಳಿಸ ಸಿಎಂ ಉದ್ಧವ್ ಠಾಕ್ರೆ, ಈ ಸಾಲಮನ್ನಾ ಯೋಜನೆಗೆ 'ಮಹಾತ್ಮಾ ಜ್ಯೋತಿರಾವ್ ಫುಲೆ ಸಾಲಮನ್ನಾ ಯೋಜನೆ' ಎಂದು ಹೆಸರು ಎಂದರು.
ಈ ಬೆಳೆಸಾಲವು ಬೇಷರತ್ ಆಗಿದ್ದು, ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು ಎಂದು ಮಹಾರಾಷ್ಟ್ರ ಹಣಕಾಸು ಮಂತ್ರಿ ಜಯಂತ್ ಪಾಟೀಲ್ ಹೇಳಿದ್ದಾರೆ.
ಕೇವಲ 10 ರೂ.ಗೆ ಊಟ: ಯೋಜನೆ ಜಾರಿಗೊಳಿಸಿದ ಶಿವಸೇನಾ
ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ದೇವೇಂದ್ರ ಫಡ್ಣವೀಸ್, 'ಸರ್ಕಾರವು ಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿತ್ತು. ಆದರೆ ಅದನ್ನು ಈಡೇರಿಸಿಲ್ಲ' ಎಂದು ಹೇಳಿ, ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು.