ಅಯ್ಯಯ್ಯೋ...ಬಿಜೆಪಿ ಲೆಕ್ಕಾಚಾರ ಎಲ್ಲಾ ಉಲ್ಟಾ ಆಯಿತಲ್ಲಾ!
ಮುಂಬೈ, ನವೆಂಬರ್.26: ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂದ ಮಿತ್ರಪಕ್ಷಗಳ ಪ್ರಯತ್ನ ಫಲಿಸಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ ಸಲ್ಲಿಸಿದ್ದು, ಸರ್ಕಾರ ರಚಿಸಬೇಕು ಎಂದುಕೊಂಡಿದ್ದ ಬಿಜೆಪಿ ಪ್ಲಾನ್ ಎಲ್ಲವೂ ಉಲ್ಟಾ ಹೊಡೆದಿದೆ.
ಬಿಜೆಪಿ ವಿರುದ್ಧ ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿವೆ. ಕೇಸರಿ ಪಡೆ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ದೂರಿವೆ.
ಮಹಾರಾಷ್ಟ್ರ ವಿಧಾನಸಭೆಗೆ ನೂತನ ಸಾರಥಿ: ಬೆಳಗ್ಗೆ 8 ಗಂಟೆಗೆ ಕಲಾಪ!
ಭಾರತೀಯ ಜನತಾ ಪಕ್ಷವೊಂದು ಕಮ್ಯೂನಲ್ ಪಾರ್ಟಿ ಆಗಿದ. ಶಿವಸೇನೆ ಬಿಜೆಪಿಯಂತೆ ಅಲ್ಲವೇ ಅಲ್ಲ. ಇಷ್ಟುದಿನ ಸಹವಾಸದಿಂದ ಶಿವಸೇನೆ ತನ್ನನ್ನು ತಾನೇ ಸುಟ್ಟುಕೊಂಡಿತ್ತು ಎಂದು ಎನ್ ಸಿಪಿ ಮುಖಂಡ ನವಾಬ್ ಮಲ್ಲೀಕ್ ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಇರುವ ಶಿವಸೇನೆ ಬಿಜೆಪಿಯಂತೆ ಕಮ್ಯೂನಲ್ ಪಕ್ಷವಲ್ಲ. ಶಿವಸೇನೆ ಮಹಾರಾಷ್ಟ್ರದ ಜನರ ಸೇವೆಗಾಗಿ ಅಸ್ತಿತ್ವಕ್ಕೆ ಬಂದಿದೆಯೇ ವಿನಃ ಬೇರೆ ಉದ್ದೇಶಗಳಿಗೆ ಅಲ್ಲವೇ ಅಲ್ಲ. ಇಷ್ಟುದಿನ ಬಿಜೆಪಿ ಜೊತೆ ಸೇರಿಕೊಂಡು ಶಿವಸೇನೆ ಕೂಡ ತನ್ನ ಹೆಸರನ್ನು ಹಾಳು ಮಾಡಿಕೊಂಡಿತು. ಈಗ ಶಿವಸೇನೆ ಮೊದಲಿನಂತಿಲ್ಲ ಎಂದು ನವಾಬ್ ಮಲ್ಲೀಕ್ ಹೇಳಿದ್ದಾರೆ.
ಸದ್ಯ ರಾಜ್ಯದಲ್ಲಿ ಒಂದಾಗಿರುವ ಶಿವಸೇನೆ-ಕಾಂಗ್ರೆಸ್- ಎನ್ ಸಿಪಿ ಮೈತ್ರಿ ದೀರ್ಘಾವಧಿವರೆಗೂ ಮುಂದುವರಿಯಲಿದೆ. ಮುಂದಿನ ಐದು ವರ್ಷಗಳಲ್ಲಿ ಮೈತ್ರಿ ಸರ್ಕಾರ ಮಹಾರಾಷ್ಟ್ರದಲ್ಲಿ ಉತ್ತಮ ಆಡಳಿತ ನಡೆಸಲಿದೆ. ಅಹಂಕಾರದಿಂದ ಮೆರೆಯುತ್ತಿದ್ದ ಬಿಜೆಪಿಗೆ ಇಲ್ಲಿಂದಲೇ ಅಂತ್ಯ ಶುರುವಾಗಿದೆ ಎಂದು ನವಾಬ್ ಮಲ್ಲೀಕ್ ಗುಡುಗಿದ್ದಾರೆ.