ಮಹಾರಾಷ್ಟ್ರ ಸರ್ಕಾರದ ಲಾಕ್ಡೌನ್ ಕ್ರಮ ಸ್ವಾಗತಿಸಿದ ವಿಪಕ್ಷ ಬಿಜೆಪಿ
ಮುಂಬೈ, ಏಪ್ರಿಲ್ 5: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾಗಶಃ ಲಾಕ್ಡೌನ್ ಮಾಡಲು ಉದ್ಧವ್ ಠಾಕ್ರೆ ಸರ್ಕಾರ ನಿರ್ಧರಿಸಿದೆ.
ಸೋಮವಾರ (ಏಪ್ರಿಲ್ 5) ದಿಂದ ಸಂಜೆ 8 ಗಂಟೆಯಿಂದ ಬೆಳಿಗ್ಗೆ 7 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ. ವಾರದ ಕೊನೆಯಲ್ಲಿ ಅಂದರೆ ಭಾನುವಾರ ಸಂಪೂರ್ಣ ಲಾಕ್ಡೌನ್ ಇರಲಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಲಾಕ್ಡೌನ್ ಭೀತಿ; ಮತ್ತೆ ಊರಿನತ್ತ ಗಂಟುಮೂಟೆ ಕಟ್ಟುತ್ತಿರುವ ಕಾರ್ಮಿಕರು
ಅಲ್ಲದೇ ಇನ್ನೊಂದು ವಾರ ನೋಡಿಕೊಂಡು ಸಂಪೂರ್ಣ ಲಾಕ್ಡೌನ್ ಮಾಡಬೇಕೋ ಬೇಡವೋ ಎಂದು ತೀರ್ಮಾನಿಸಲಾಗುವುದು ಎಂದು ಮಹಾ ಸಿಎಂ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಸಿಎಂ ಉದ್ಧವ್ ಠಾಕ್ರೆ ಅವರ ಲಾಕ್ಡೌನ್ ನಿರ್ಧಾರವನ್ನು ಸ್ವಾಗತಿಸಿರುವ ಮಹಾರಾಷ್ಟ್ರದ ವಿರೋಧ ಪಕ್ಷ ಬಿಜೆಪಿ, ಲಾಕ್ಡೌನ್ನಲ್ಲಿ ಬಡವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದೆ.
ಈ ಕುರಿತು ಮಾತನಾಡಿರುವ ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು, ಹೆಚ್ಚುತ್ತಿರುವ ವೈರಸ್ ತಡೆಗೆ ಲಾಕ್ಡೌನ್ ನಿರ್ಧಾರ ಉತ್ತಮ. ಆದರೆ, ಲಾಕ್ಡೌನ್ನಿಂದ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ತೊಂದರೆ ಆಗಬಾರದು ಎಂದು ಎಚ್ಚರಿಸಿದ್ದಾರೆ.