ನಿಮ್ಮ ಸಾಲಕ್ಕೂ, ನಮ್ಮ ಸರ್ಕಾರಕ್ಕೂ ಸಂಬಂಧವಿಲ್ಲ: 'ಮಹಾ' ಪೆಟ್ಟು!
ಮುಂಬೈ, ಡಿಸೆಂಬರ್.05: ಮಹಾರಾಷ್ಟ್ರದಲ್ಲಿ ರಚನೆಯಾಗಿರುವ ಮೈತ್ರಿ ಸರ್ಕಾರ ಬಿಜೆಪಿ ವಿರುದ್ಧ ಸಮರ ಸಾರಿದಂತೆ ಕಾಣುತ್ತಿದೆ. ಭಾರತೀಯ ಜನತಾ ಪಕ್ಷದ ಸಖ್ಯ ತೊರೆದ ಶಿವಸೇನೆ ಮಾಜಿ ದೋಸ್ತಿಗೆ ಮುಟ್ಟಿ ನೋಡಿಕೊಳ್ಳುವಂತೆ ಪೆಟ್ಟು ಕೊಡುತ್ತಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ನೀಡುತ್ತಿರುವ ಪೆಟ್ಟಿಗೆ ಬಿಜೆಪಿ ನಾಯಕರು ಪೆಚ್ಚಾಗಿ ಹೋಗಿದ್ದಾರೆ. ಈಗದೇ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಇಷ್ಟುದಿನ ಏಳು ಸಕ್ಕರೆ ಕಾರ್ಖಾನೆಗೆ ಸರ್ಕಾರದಿಂದ ನೀಡುತ್ತಿದ್ದ ಜಾಮೀನನ್ನು ವಾಪಸ್ ಪಡೆದುಕೊಳ್ಳಲಾಗಿದೆ.
ಬುಲೆಟ್ ರೈಲು: ಯೋಜನೆ ಮರುಪರಿಶೀಲಿಸಲು ಮುಂದಾದ 'ಮಹಾ' ಸಿಎಂ
ಹೌದು, ಖಾಸಗಿ ಬ್ಯಾಂಕ್ ನೀಡುತ್ತಿದ್ದ ಸಾಲಕ್ಕೆ ರಾಜ್ಯ ಸರ್ಕಾರವೇ ಜಾಮೀನು ಆಗಿತ್ತು. ಆದರೆ, ಇನ್ನುಮುಂದೆ ಹೀಗೆ ಆಗುವುದಿಲ್ಲ. ಏಳು ಕಾರ್ಖಾನೆಗಳಿಗೆ ನೀಡಿದ್ದ 300 ಕೋಟಿ ರೂಪಾಯಿ ಸಾಲದ ಮೇಲಿನ ಗ್ಯಾರಂಟಿಯನ್ನು ವಾಪಸ್ ಪಡೆಯಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ತೀರ್ಮಾನಿಸಿದೆ.
ನಿಮ್ಮ ಸಾಲಕ್ಕೂ ನಮ್ಮ ಸರ್ಕಾರಕ್ಕೂ ಸಂಬಂಧವಿಲ್ಲ!
ಮಹಾರಾಷ್ಟ್ರದ ಏಳು ಸಕ್ಕರೆ ಕಾರ್ಖಾನೆಗಳಿಗೆ ಈ ಹಿಂದೆ ಸರ್ಕಾರದಿಂದಲೇ 300 ಕೋಟಿ ರೂಪಾಯಿ ಜಾಮೀನು ನೀಡಲಾಗಿತ್ತು. ಆದರೆ, ಈಗ ಸರ್ಕಾರ ಬದಲಾಗಿದೆ. ಕಾಲವೂ ಬದಲಾಗಿದೆ. ಬಿಜೆಪಿ ಪಾಲಿಗೆ ಟೈಮ್ ಸರಿಯಾಗೇ ಕೈ ಕೊಟ್ಟಿದೆ. ಏಕೆಂದರೆ ಬಿಜೆಪಿ ನಾಯಕರ ಒಡೆತನದ ಸಕ್ಕರೆ ಕಾರ್ಖಾನೆಗಳಿಗೆ ನೀಡಿದ್ದ 300 ಕೋಟಿ ಸಾಲದ ಗ್ಯಾರಂಟಿಯನ್ನು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಹಿಂಪಡೆದಿದೆ.
ಸರ್ಕಾರಕ್ಕೂ ಕಾರ್ಖಾನೆ ಸಾಲಕ್ಕೂ ಏನು ಲಿಂಕ್?
ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ವತಿಯಿಂದ ಮಹಾರಾಷ್ಟ್ರದಲ್ಲಿ ಖಾಸಗಿ ಕಾರ್ಖಾನೆಗಳಿಗೆ ಸಾಲಸೌಲಭ್ಯ ಒದಗಿಸಲಾಗುತ್ತದೆ. ಹೀಗೆ ಸಾಲ ಪಡೆಯುವ ಕಾರ್ಖಾನೆಗಳಿಗೆ ಕೆಲವು ಷರತ್ತುಗಳ ಮೇಲೆ ಸರ್ಕಾರವೇ ಜಾಮೀನು ನೀಡುತ್ತದೆ. ಈ ರೀತಿಯಾಗಿ ಮಹಾರಾಷ್ಟ್ರದಲ್ಲಿ ಏಳು ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರದಿಂದ ಜಾಮೀನು ನೀಡಲಾಗಿತ್ತು. ಅದರ ಮೊತ್ತ ಬರೋಬ್ಬರಿ 300 ಕೋಟಿ ರೂಪಾಯಿ ಆಗಿತ್ತು. ಇನ್ನು, ಬಿಜೆಪಿಯ ಮಾಜಿ ಸಚಿವ ಪಂಕಜ್ ಮುಂಡೆ ಸೇರಿದ ಒಂದು ಕಾರ್ಖಾನೆ ಸೇರಿದಂತೆ ಸಾಲ ಪಡೆದ ಏಳು ಕಾರ್ಖಾನೆಗಳು ಕೂಡಾ ಬಿಜೆಪಿ ನಾಯಕರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.
ರಾಜ್ಯ ಸಂಪುಟ ಸಭೆಯಲ್ಲಿ ಹೊರ ಬಿತ್ತು ಮಹತ್ವದ ತೀರ್ಮಾನ
ಡಿಸೆಂಬರ್.04ರಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸಂಪುಟ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ನಾಯಕರ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ನೀಡಿದ್ದ ಸಾಲದ ಮೇಲಿನ ಜಾಮೀನನ್ನು ವಾಪಸ್ ಪಡೆಯಲು ತೀರ್ಮಾನಿಸಲಾಯಿತು. ಇದರ ಜೊತೆಗೆ ಹಿಂದಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದಲ್ಲಿ ತೆಗೆದುಕೊಂಡ 34 ನಿರ್ಣಯಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು ಎಂದು ತಿಳಿದು ಬಂದಿದೆ.
ಸರ್ಕಾರ ಕಾರ್ಖಾನೆಗೆ ಜಾಮೀನು ನೀಡಿದ್ದು ಯಾವಾಗ?
ಇನ್ನು, ಏಳು ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರದಿಂದ ಜಾಮೀನು ಸಿಕ್ಕು ಬಹಳ ತಿಂಗಳುಗಳೂ ಕೂಡಾ ಕಳೆದಿಲ್ಲ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಅಂದರೆ ಕಳೆದ ಸೆಪ್ಟೆಂಬರ್-2019ರ ವೇಳೆಗೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದಿಂದ ಬಿಜೆಪಿಯ ಏಳು ನಾಯಕರ ಸಕ್ಕರೆ ಕಾರ್ಖಾನೆಗೆ ಜಾಮೀನು ನೀಡಲಾಗಿತ್ತು.