ಮಹಾರಾಷ್ಟ್ರ ವಿಧಾನಸಭೆಗೆ ನೂತನ ಸಾರಥಿ: ಬೆಳಗ್ಗೆ 8 ಗಂಟೆಗೆ ಕಲಾಪ!
ಮುಂಬೈ, ನವೆಂಬರ್,26: ಮಹಾರಾಷ್ಟ್ರದಲ್ಲಿ ನಿನ್ನೆವರೆಗೂ ಇದ್ದ ಸರ್ಕಾರ ಇಂದು ಇಲ್ಲ. ಸುಪ್ರೀಂಕೋರ್ಟ್ ನೀಡಿದ ಡೆಡ್ ಲೈನ್ ಗೆ ಬೆದರಿಯೋ ಅಥವಾ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ವಿಫಲವಾಗಿಯೋ ಏನೋ ಬಿಜೆಪಿ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ.
ಶಾಸಕರ ಬೆಂಬಲವಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ ಸಲ್ಲಿಸಿದ್ದು ಆಗಿದೆ. ಅಜಿತ್ ಪವಾರ್ ಕೂಡಾ ಉಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಬ್ಯಾಕ್ ಟು ಪೆವಿಲಿಯನ್ ಎಂಬಂತೆ ಎನ್ ಸಿಪಿಗೆ ವಾಪಸ್ ಆಗುವ ಲಕ್ಷಣಗಳು ಎದ್ದು ಕಾಣುತ್ತಿವೆ.
ಬಿಜೆಪಿಗೆ ಠಕ್ಕರ್ ಕೊಟ್ಟ ಠಾಕ್ರೆ, ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ
ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಪಕ್ಷಗಳು ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲ ಭಗತ್ ಸಿಂಗ್ ಕೌಶಿಯಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ನವೆಂಬರ್.27ರಂದು ಉದ್ಧವ್ ಠಾಕ್ರೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಸಂಜೆ 7 ಗಂಟೆಗೆ ರಾಜಭವನಕ್ಕೆ ಮಿತ್ರಪಕ್ಷದ ನಾಯಕರು ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಗೆ ನೂತನ ಸಾರಥಿ
ಸರ್ಕಾರವನ್ನು ಯಾರೇ ರಚಿಸಿದರೂ ಕಲಾಪದ ಮೊದಲ ದಿನ ಶಾಸಕರ ಪ್ರಮಾಣವಚನ ಮುಗಿಯುತ್ತಿದ್ದಂತೆ ವಿಶ್ವಾಸಮತಯಾಚನೆ ಮಾಡಬೇಕು. ಇದಕ್ಕಾಗಿ ವಿಧಾನಸಭೆಗೆ ಹಂಗಾಮಿ ಸ್ಪೀಕರ್ ಆಗಿ ವಾಡಾಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕಾಳಿದಾಸ್ ಕೊಲಂಬಕರ್ ಅವರನ್ನು ನೇಮಕ ಮಾಡಲಾಗಿದೆ.
ರಾಜಭವನಕ್ಕೆ ತೆರಳಿದ ಕಾಳಿದಾಸ್ ಕೊಲಂಬಕರ್ ವಿಧಾನಸಭೆ ಸ್ಪೀಕರ್ ಆಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಮಾತನಾಡಿದ ಅವರು, ಬುಧವಾರ ಕಲಾಪ ಆರಂಭವಾಗುವ ದಿನವೇ ಎಲ್ಲ ಶಾಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.
ವಾಡಾಲಾ ವಿಧಾನಸಭಾ ಕ್ಷೇತ್ರದ ಶಾಸಕ ಕಾಳಿದಾಸ್ ಕೊಲಂಬಕರ್ ಈ ಹಿಂದೆ ಶಿವಸೇನೆಯಲ್ಲಿದ್ದು, ಅಲ್ಲಿಂದ ಕಾಂಗ್ರೆಸ್ ಗೆ ಪಕ್ಷಾಂತರವಾಗಿದ್ದರು. ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷವನ್ನೂ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು.