ಮಹಾರಾಷ್ಟ್ರ: ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಕೊನೆಗೂ ಅನುಮತಿ
ಮುಂಬೈ, ನವೆಂಬರ್ 14: ತೀವ್ರ ರಾಜಕೀಯ ಸಂಘರ್ಷ, ಕೆಸರೆರಚಾಟದ ಬಳಿಕ ಮಹಾರಾಷ್ಟ್ರ ಸರ್ಕಾರ ಕೊನೆಗೂ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದೆ. ನವೆಂಬರ್ 16ರಿಂದ ರಾಜ್ಯದಲ್ಲಿನ ಎಲ್ಲ ಧಾರ್ಮಿಕ ಕೇಂದ್ರಗಳನ್ನೂ ಪುನಃ ತೆರೆಯುವುದಾಗಿ ಸರ್ಕಾರ ಶನಿವಾರ ಪ್ರಕಟಿಸಿದೆ. ಧಾರ್ಮಿಕ ಕೇಂದ್ರಗಳಲ್ಲಿ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಎಲ್ಲ ಕೋವಿಡ್ 19 ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರಲಿದೆ.
ಸುಮಾರು ಎಂಟು ತಿಂಗಳ ಬಳಿಕ ಮಹಾರಾಷ್ಟ್ರದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೋವಿಡ್ 19 ಸೋಂಕು ಹರಡುವುದನ್ನು ನಿಯಂತ್ರಿಸಲು ಮಾರ್ಚ್ 22ರಂದು ಜನತಾ ಕರ್ಫ್ಯೂ ಘೋಷಿಸಿದ ಸಂದರ್ಭದಿಂದಲೂ ಇಲ್ಲಿನ ಧಾರ್ಮಿಕ ಕೇಂದ್ರಗಳನ್ನು ಮುಚ್ಚಲಾಗಿದೆ.
ಹಿಂದುತ್ವದ ಪ್ರಮಾಣಪತ್ರ ನೀಡಬೇಕಿಲ್ಲ: ಉದ್ಧವ್ ಠಾಕ್ರೆ Vs ರಾಜ್ಯಪಾಲ ಕೋಶ್ಯಾರಿ ಯುದ್ಧ!
ಅನೇಕ ರಾಜ್ಯಗಳಲ್ಲಿ ಹಲವು ತಿಂಗಳಿನಿಂದಲೇ ಧಾರ್ಮಿಕ ಕೇಂದ್ರಗಳನ್ನು ಪುನಃ ತೆರೆಯುತ್ತಾ ಬಂದಿದ್ದರೂ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಸುರಕ್ಷತಾ ದೃಷ್ಟಿಯಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿರಲಿಲ್ಲ. ವಿರೋಧಪಕ್ಷಗಳ ತೀವ್ರ ಒತ್ತಡಕ್ಕೂ ಅವರು ಮಣಿದಿರಲಿಲ್ಲ.
Recommended Video
ಇದರಿಂದ ಮಹಾರಾಷ್ಟ್ರ ಸರ್ಕಾರ ಮತ್ತು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಕೋಶ್ಯಾರಿ ಅವರು ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡದ ಉದ್ಧವ್ ಠಾಕ್ರೆ ಅವರನ್ನು ಟೀಕಿಸಿ ಬರೆದ ಪತ್ರ ಸಾಕಷ್ಟು ವಿವಾದ ಸೃಷ್ಟಿಸಿತ್ತು.