ಮಹಾರಾಷ್ಟ್ರದಲ್ಲಿ ಅಳಿಯನಿಗೆ ಕೊರೊನಾ ಲಸಿಕೆ; ಮಾವನ ವಿರುದ್ಧ ಟೀಕೆ!
ಮುಂಬೈ, ಏಪ್ರಿಲ್ 20: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಳಿಯ ಕೊರೊನಾವೈರಸ್ ಸೋಂಕಿನ ಲಸಿಕೆ ಹಾಕಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಸ್ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.
ಏಪ್ರಿಲ್ 19ರಂದು ಮಾಜಿ ಸಿಎಂ ಫಡ್ನವೀಸ್ ಅಳಿಯ 22 ವರ್ಷದ ತನ್ಮಯ್ ಕೊವಿಡ್-19 ಲಸಿಕೆ ಹಾಕಿಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು. ಮುಂಬೈನಲ್ಲಿ ಮೊದಲ ಡೋಸ್ ಹಾಗೂ ನಾಗ್ಪುರದ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯಲ್ಲಿ ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದರು. ಈ ವಿಷಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಔಷಧ ಕಂಪೆನಿ ಅಧಿಕಾರಿ ವಿಚಾರಣೆ: ಠಾಣೆಗೆ ನುಗ್ಗಿದ ಫಡ್ನವೀಸ್
ಭಾರತದಲ್ಲಿ ಸದ್ಯಕ್ಕೆ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಕೊರೊನಾವೈರಸ್ ಲಸಿಕೆಯನ್ನು ನೀಡಬೇಕು ಎಂಬ ನಿಯಮವಿದೆ. ವೈದ್ಯಕೀಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡುವುದಕ್ಕೆ ಅವಕಾಶವಿದ್ದು, 22 ವರ್ಷದ ತನ್ಮಯ್ ಫಡ್ನವೀಸ್ ಹೇಗೆ ಲಸಿಕೆಯನ್ನು ಪಡೆದುಕೊಂಡರು ಎಂದು ಯುವ ಕಾಂಗ್ರೆಸ್ ಮುಖಂಡ ಶ್ರೀವಾಸ್ತವ್ ಪ್ರಶ್ನೆ ಮಾಡಿದ್ದಾರೆ.
ಮಾಜಿ ಸಿಎಂ ಫಡ್ನವೀಸ್ ಅವರಿಗೆ ಪ್ರಶ್ನೆ:
"ಫಡ್ನವೀಸ್ ಅವರೇ, ನಿಮ್ಮ ಅಳಿಯ ತನ್ಮಯ್ ಫಡ್ನವೀಸ್ ವಯಸ್ಸು 45ಕ್ಕಿಂತ ಹೆಚ್ಚಾಗಿದೆಯೇ?. ಇಲ್ಲದಿದ್ದರೆ ಲಸಿಕೆ ಪಡೆದುಕೊಳ್ಳುವುದಕ್ಕೆ ಅವರು ಹೇಗೆ ಅರ್ಹರಾಗುತ್ತಾರೆ. ರೆಮ್ಡೆಸಿವಿರ್ ಔಷಧಿಯಂತೆ ಲಸಿಕೆಯನ್ನೂ ನೀವು ಸಂಗ್ರಹಿಸಿಟ್ಟುಕೊಂಡು ನಿಮ್ಮ ಕುಟುಂಬ ಸದಸ್ಯರಿಗೆ ನೀಡುತ್ತಿದ್ದೀರಾ. ಇಲ್ಲಿ ಸಾರ್ವಜನಿಕರು ಸಾಯುತ್ತಿದ್ದಾರೆ. ಈ ಕಡೆಯಲ್ಲಿ ಲಸಿಕೆ ಕೊರತೆ ಉಂಟಾಗುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಫಡ್ನವೀಸ್ ಕುಟುಂಬದವರು ಸುರಕ್ಷಿತವಾಗಿದ್ದಾರೆ" ಎಂದು ಶ್ರೀವಾಸ್ತವ್ ಟ್ವೀಟ್ ಮಾಡಿದ್ದಾರೆ.
Dear @Dev_Fadnavis, is your Nephew Tanmay Fadnavis 45+ years old?
— Srivatsa (@srivatsayb) April 19, 2021
If not, how is he eligible for taking the Vaccine?
Just like Remdesivir, are you hoarding Vaccines & giving it to your family members?
People are dying. There is Vaccine Shortage. But Fadnavis family is Safe. pic.twitter.com/6vjwIqNuEI
ಬಿಜೆಪಿಯವರಿಗೆ ಲಸಿಕೆ ಪಡೆಯಲು ಹೊಸ ನಿಯಮವಿದೆಯೇ?:
ತನ್ಮಯ್ ಫಡ್ನವೀಸ್ ಅವರನ್ನು ಬಂಧಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಶ್ರೀವಾಸ್ತವ್ ಮನವಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಬಿಜೆಪಿಯವರಿಗೆ ಕೊರೊನಾವೈರಸ್ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ವಿಶೇಷ ನಿಯಮವಿದೆಯೇ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪ್ರಶ್ನೆ ಮಾಡಿದ್ದಾರೆ. "ಮೋದಿಯವರೇ, ಬಿಜೆಪಿ ನಾಯಕರ ಕುಟುಂಬ ಸದಸ್ಯರು 45 ವರ್ಷಕ್ಕಿಂತ ಕ ಕಡಿಮೆ ವಯಸ್ಸಿನವರಾಗಿದ್ದರೂ ಕೊವಿಡ್-19 ಲಸಿಕೆ ಹಾಕಿಸಿಕೊಳ್ಳಲು ವಿಶೇಷ ನಿಯಮವೇನಾದರೂ ಇದೆಯಾ. ತನ್ಮಯ್ ಫಡ್ನವೀಸ್ ಅಪರಾಧ ಮಾಡಿದ್ದು, ತಕ್ಷಣ ಅವರನ್ನು ಬಂಧಿಸಬೇಕು" ಎಂದು ಟ್ವೀಟ್ ಮಾಡಿದ್ದಾರೆ.