ಮಹಾರಾಷ್ಟ್ರ ಬೆಳವಣಿಗೆ: ಅಜಿತ್ ಪವಾರ್ ನಡೆಗೆ ಶರದ್ ಪವಾರ್ ಏನಂದ್ರು?
ಮುಂಬೈ, ನವೆಂಬರ್ 23: ಮಹಾರಾಷ್ಟ್ರ ರಾಜಕೀಯದಲ್ಲಿ ಹಠಾತ್ ಬೆಳವಣಿಗೆಯಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸುವ ಮೂಲಕ ಎನ್ಸಿಪಿ ಸರ್ಕಾರ ರಚನೆಗೆ ಮುಂದಾಗಿರುವುದು ಅಚ್ಚರಿ ಮೂಡಿಸಿದೆ.
ಶಿವಸೇನಾ ಜತೆಗೆ ಮಿತ್ರಪಕ್ಷಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ ಸೇರಿಕೊಂಡು ಸರ್ಕಾರ ರಚಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿತ್ತು. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮುಖಂಡ ಸಂಜಯ್ ರಾವತ್ ಮುಖ್ಯಮಂತ್ರಿ ಹುದ್ದೆಯ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಡುವೆ ಹಲವು ಬಾರಿ ಮಾತುಕತೆ ನಡೆಸಿತ್ತು.
ರಾಷ್ಟ್ರಪತಿ ಭವನ, ಮಹಾರಾಷ್ಟ್ರದ ರಾಜಭವನ ನಡುವೆ ನಡೆದಿದ್ದೇನು?
ಆದರೆ ಅನೇಕ ಮಹತ್ವದ ಸಭೆಗಳಲ್ಲಿ ಭಾಗವಹಿಸಿದ್ದ ಶರದ್ ಪವಾರ್ ಅವರ ಅಣ್ಣನ ಮಗ ಅಜಿತ್ ಪವಾರ್ ಇದ್ದಕ್ಕಿದ್ದಂತೆ ಬಿಜೆಪಿ ಜತೆ ಕೈಜೋಡಿಸಿ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಇದು ಶಿವಸೇನಾಕ್ಕೆ ಆಘಾತ ನೀಡಿದೆ. ಶರದ್ ಪವಾರರ್ ಕೂಡ ಅಜಿತ್ ಪವಾರ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನ್ನ ಬೆಂಬಲವಿಲ್ಲ
ಈ ಬಗ್ಗೆ ಟ್ವೀಟ್ ಮಾಡಿರುವ ಶರದ್ ಪವಾರ್, 'ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಸೇರಿಕೊಂಡು ಸರ್ಕಾರ ರಚಿಸುವ ಅಜಿತ್ ಪವಾರ್ ಅವರ ನಿರ್ಧಾರ ವೈಯಕ್ತಿಕವಾದುದು. ಇದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಿರ್ಧಾರವಲ್ಲ. ಅವರ ನಿರ್ಧಾರವನ್ನು ನಾವು ಬೆಂಬಲಿಸುವುದಿಲ್ಲ' ಎಂದು ತಿಳಿಸಿದ್ದಾರೆ.
ಅಡ್ಡಗೋಡೆಯ ದೀಪ
ಕೆಲವು ದಿನಗಳ ಹಿಂದಷ್ಟೇ ಶರದ್ ಪವಾರ್ ನೀಡಿದ್ದ ಹೇಳಿಕೆ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರದ ಬಗ್ಗೆ ಅನುಮಾನ ಮೂಡಿಸಿತ್ತು. ಬಿಜೆಪಿ-ಶಿವಸೇನಾ ಸೇರಿ ಚುನಾವಣೆ ಎದುರಿಸಿದ್ದಾರೆ. ಎನ್ಸಿಪಿ ಮತ್ತು ಕಾಂಗ್ರೆಸ್ ಜತೆಗೂಡಿ ಚುನಾವಣೆ ಎದುರಿಸಿದ್ದೆವು. ಹೀಗಿರುವಾಗ ಅವರ ಜತೆ ಹೇಗೆ ಸೇರಿಕೊಂಡು ಸರ್ಕಾರ ರಚಿಸುವುದು? ಅವರು ಅವರ ದಾರಿ ನೋಡಿಕೊಳ್ಳಲಿ, ನಾವು ನಮ್ಮ ರಾಜಕೀಯ ಮಾಡುತ್ತೇವೆ ಎಂದಿದ್ದರು.
ಅನುಮಾನ ಮೂಡಿಸಿತ್ತು
ಅಜಿತ್ ಪವಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಶಿವಸೇನಾ ಮುಖಂಡ ಸಂಜಯ್ ರಾವತ್, ಅಜಿತ್ ಪವಾರ್ ಪ್ರತಿಕ್ರಿಯೆ ಏನೆಂದು ನನಗೆ ಗೊತ್ತಿರಲಿಲ್ಲ. ಅವರು ಎಲ್ಲ ಸಭೆಗಳಲ್ಲಿಯೂ ಭಾಗವಹಿಸಿದ್ದರು. ನಿನ್ನೆ ರಾತ್ರಿ ಕೂಡ ನಮ್ಮ ಜತೆಯೇ ಕುಳಿತಿದ್ದರು. ಇದ್ದಕ್ಕಿದ್ದಂತೆ ನಾಪತ್ತೆಯಾದರು. ಅವರ ದೇಹಭಾಷೆಯೇ ಅವರು ನಮಗೆ ದ್ರೋಹ ಮಾಡುತ್ತಾರೆ ಎನಿಸುವಂತಿತ್ತು. ಅವರು ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿರಲಿಲ್ಲ ಎಂದರು.
ಇಡಿ ತನಿಖೆ ಭಯ
ಅಜಿತ್ ಪವಾರ್ ಶಾಸಕರಿಗೆ ಬೆದರಿಕೆ ಹಾಕಿ ಕರೆದುಕೊಂಡು ಹೋಗಿದ್ದಾರೆ. ಅವರಿಗೆ ಇ.ಡಿ ತನಿಖೆ ಭಯವಿತ್ತು. ಆ ಕಾರಣದಿಂದ ಬಿಜೆಪಿ ಜತೆ ಹೋಗಿದ್ದಾರೆ. ರಾತ್ರಿ ವೇಳೆ ಅಪರಾಧಗಳು ನಡೆಯುತ್ತದೆ, ಡಕಾಯಿತಿ ನಡೆಯುತ್ತದೆ, ವ್ಯಭಿಚಾರ ನಡೆಯುತ್ತದೆ. ಅಜಿತ್ ಪವಾರ್ ರಾತ್ರಿ ಬೆಳಗಾಗುವುದರೊಳಗೆ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.