ಶಿವಸೇನೆ 16 ಬಂಡಾಯ ಶಾಸಕರಿಗೆ ಉಪ ಸಭಾಪತಿ ನೋಟಿಸ್!
ಮುಂಬೈ, ಜೂನ್ 25: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರದ ವಿರುದ್ಧ ಬಂಡಾಯ ಬಾವುಟ ಹಾರಿಸಿರುವ ಶಿವಸೇನೆಯ 16 ಶಾಸಕರಿಗೆ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅನರ್ಹತೆ ನೋಟಿಸ್ ಕಳುಹಿಸುವ ಸಾಧ್ಯತೆಯಿದೆ. ಸೋಮವಾರ ಅನರ್ಹತೆಯ ವಿಚಾರಣೆ ನಡೆಯಲಿದ್ದು, ಬಂಡುಕೋರರು ಮುಂಬೈನಲ್ಲಿ ಹಾಜರಿರಬೇಕು ಎಂದು ತಿಳಿದು ಬಂದಿದೆ.
ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ ಅರ್ಜಿಯನ್ನು ಅಂಗೀಕರಿಸಲಾಗಿದ್ದು, ಉಪ ಸಭಾಪತಿಯವರು ನೋಟಿಸ್ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಬಂಡಾಯ ಶಾಸಕರು ವಿಚಾರಣೆಗೆ ಖುದ್ದು ಹಾಜರಾಗಿ ತಮ್ಮ ವಾದ ಮಂಡಿಸಬೇಕು.
ಯಾವುದೇ ಪಕ್ಷ ನಮ್ಮನ್ನು ಸಂಪರ್ಕಿಸಿಲ್ಲ: ಯೂಟರ್ನ್ ಹೊಡೆದ ಏಕನಾಥ್ ಶಿಂಧೆ
ಉಪ ಸಭಾಧ್ಯಕ್ಷರು ಈಗಾಗಲೇ ಏಕನಾಥ್ ಶಿಂಧೆ ಬದಲಿಸುವ ಮೂಲಕ ಅಜಯ್ ಚೌಧರಿ ಅನ್ನು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಲಾಗಿದೆ. ಇನ್ನು ಭರತ್ ಗೊಗವಾಲಾ ಅನ್ನು ಶಿವಸೇನೆಯ ವಿಪ್ ಆಗಿ ನೇಮಿಸುವಂತೆ ಶಿಂಧೆ ಗುಂಪು ಮಾಡಿದ್ದ ಸಲಹೆಯನ್ನು ತಿರಸ್ಕರಿಸಲಾಗಿದೆ.
ಮಹಾ ವಿಕಾಸ ಅಘಾಡಿ ಉಳಿಸಲು ಕೊನೆಯ ಯತ್ನ
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರವನ್ನು ರಕ್ಷಿಸುವ ನಿಟ್ಟಿನಲ್ಲಿ ಮೈತ್ರಿಕೂಟವು ಅಂತಿಮ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಆಗ್ರಹಿಸಿ ಅರ್ಜಿ ಸಲ್ಲಿಸಲಾಗಿದೆ. ಸಿಎಂ ಉದ್ಧವ್ ಠಾಕ್ರೆ ತಂಡವು ಅನರ್ಹತೆಗೆ ಹೆಚ್ಚಿನ ಬಂಡಾಯ ಶಾಸಕರನ್ನು ಹುಡುಕುವುದು ಅಸಂಭವವಾಗಿದೆ, ಏಕೆಂದರೆ ಇದು ಬಿಜೆಪಿಗೆ ಹೆಚ್ಚು ಲಾಭದಾಯಕವಾಗಿರಲಿದೆ.
ಬಂಡಾಯ ಶಾಸಕರಲ್ಲಿ ಭಯ ಹುಟ್ಟಿಸುವ ಹುನ್ನಾರ
ರಾಜ್ಯದಲ್ಲಿ ರಾಜಕೀಯ ಮೇಲಾಟಗಳ ಮಧ್ಯೆ ಶಿವಸೇನೆಯ ಬಂಡಾಯ ಶಾಸಕರಲ್ಲಿ ಚುನಾವಣೆಯ ಬಗ್ಗೆ ಭಯ ಹುಟ್ಟಿಸುವ ಲೆಕ್ಕಾಚಾರ ಹಾಕಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಅನರ್ಹತೆ ಅಸ್ತ್ರವನ್ನು ಪ್ರಯೋಗಿಸಲು ಸಿಎಂ ಉದ್ಧವ್ ಠಾಕ್ರೆ ಬಣವು ಪ್ರಯತ್ನಿಸುತ್ತಿದೆ. ಹೀಗಾಗಿಯೇ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿರುವ ಅಸ್ಸಾಂನಿಂದ ಮುಂಬೈಗೆ ವಾಪಸ್ ಆಗುವಂತೆ ಶಾಸಕರನ್ನು ಒತ್ತಾಯಿಸಲಾಗಿದೆ.
ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದ ಶಿವಸೇನೆ
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಸರ್ಕಾರವನ್ನು ರಕ್ಷಿಸುವ ನಿಟ್ಟಿನಲ್ಲಿ ಶಿವಸೇನೆಯು ಶಾಸಕರ ಸಭೆ ಕರೆಯಲಾಗಿದೆ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮುಂದಿನ ಕ್ರಮದ ಕುರಿತು ಚರ್ಚೆ ನಡೆಸಲಾಗುತ್ತದೆ. ಈ ಸಭೆ ಕುತೂಹಲಕ್ಕೆ ಕಾರಣವಾಗಿದೆ.
"ನನ್ನ ಮಗನಿಗಾಗಿ ನಾನು ಏನು ಮಾಡಿದರೂ ನನ್ನ ಮೇಲೆ ಆರೋಪವಿದೆ, ಆದರೆ ಏಕನಾಥ್ ಶಿಂಧೆ ಮಗ ಎರಡು ಬಾರಿ ಶಿವಸೇನೆಯ ಸಂಸದರಾಗಿಲ್ಲವೇ, ಈಗ ಪಕ್ಷ ತೊರೆದು ಹೋಗುವವರೆಲ್ಲ ಹೋಗಬಹುದು, ನಾನು ಮತ್ತೊಮ್ಮೆ ಶಿವಸೇನೆಯನ್ನು ಕಟ್ಟಿ ಬೆಳೆಸುತ್ತೇನೆ. ಶಿವಸೈನಿಕರು ನನ್ನೊಂದಿಗೆ ಇರುವಾಗ ನನಗೆ ಬೇರೇನೂ ಚಿಂತೆ ಇಲ್ಲ, ನೀವು ಬಾಳಾಸಾಹೇಬರ ಶಿವಸೈನಿಕರು, ನೀವೇ ನನ್ನ ಕೀರ್ತಿ," ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ವಿಶ್ವಾಸಮತ ಗೆಲ್ಲುವುದು ನಾವೇ ಎಂದ ಸಂಜಯ್ ರಾವತ್
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದಿರುವ ಏಕನಾಥ್ ಶಿಂಧೆಯು ಶಿವಸೇನೆಯ 40 ಶಾಸಕರು ಸೇರಿದಂತೆ ಒಟ್ಟು 50 ಶಾಸಕರ ಬೆಂಬಲವನ್ನು ಹೊಂದಿದ್ದಾರೆ ಎಂಬ ಮಾಹಿತಿ ಇದೆ.
ಶಿವಸೇನೆ ನಾಯಕ ಸಂಜಯ್ ರಾವತ್ ಮಾತನಾಡಿ, "ತಮ್ಮ ಬಣವೇ ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಗೆದ್ದುಕೊಳ್ಳಲಿದೆ" ಎಂದು ಹೇಳಿದ್ದಾರೆ.
"ಪ್ರಸ್ತುತ ಶಾಸಕರು ತಪ್ಪು ಹೆಜ್ಜೆ ಇಡುತ್ತಿದ್ದು, ಅವರು ಮುಂಬೈಗೆ ಆಗಮಿಸುವುದಕ್ಕೆ ಇನ್ನೊಂದು ಅವಕಾಶ ನೀಡಲಾಗಿತ್ತು. ಆದರೆ ಈಗ ನಾವೇ ಅವರಿಗೆ ಸವಾಲು ಹಾಕುತ್ತಿದ್ದೇವೆ" ಎಂದು ರಾವತ್ ತಿಳಿಸಿದ್ದಾರೆ.