ಮುಂಬೈ ಕಟ್ಟಡ ದುರಂತದಲ್ಲಿ 41 ಸಾವು; ತಲೆ ಮರೆಸಿಕೊಂಡ ಮಾಲೀಕ
ಮುಂಬೈ, ಸಪ್ಟೆಂಬರ್.23: ಮಹಾರಾಷ್ಟ್ರದ ಭಿವಾಂಡಿಯಲ್ಲಿರುವ 36 ವರ್ಷಗಳ ಹಳೆಯ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆಯು 41ಕ್ಕೆ ಏರಿಕೆಯಾಗಿದೆ. ಮೂರು ಅಂತಸ್ತಿನ ಕಟ್ಟಡದಲ್ಲಿ ಒಟ್ಟು 48 ಫ್ಲಾಟ್ ಗಳಿದ್ದವು ಎಂದು ತಿಳಿದು ಬಂದಿದೆ.
ಕಳೆದ ಸಪ್ಟೆಂಬರ್.21ರ ಸೋಮವಾರ ಬೆಳಗಿನ ಜಾವ 3.45 ಗಂಟೆಗೆ 48 ಫ್ಲಾಟ್ ಗಳನ್ನು ಹೊಂದಿರುವ 3 ಅಂತಸ್ತಿನ ಕಟ್ಟಡವು ಕುಸಿತು ಬಿದ್ದಿತ್ತು. ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ಇಳಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಕಟ್ಟಡದ ಅವಶೇಷಗಳಡಿ ಸಿಲುಕಿರುವವರನ್ನು ಹೊರ ತೆಗೆದು ಆಸ್ಪತ್ರೆಗಳಿಗೆ ರವಾನಿಸಿತು.
ಮಹಾರಾಷ್ಟ್ರ ಕಟ್ಟಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 33ಕ್ಕೆ ಏರಿಕೆ
ಭಿವಾಂಡಿಯಲ್ಲಿ ಕುಸಿದ ಜಿಲಾನಿ ಕಟ್ಟಡದ ಮಾಲೀಕ ಸಯ್ಯದ್ ಅಹ್ಮದ್ ಜಿಲಾನಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ದುರಂತ ಸಂಭವಿಸಿದ ದಿನದಿಂದ ಕಟ್ಟಡ ಮಾಲೀಕ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಕಟ್ಟಡ ವಾಸಕ್ಕೆ ಸುರಕ್ಷಿತವಲ್ಲ ಎಂದು ನೋಟಿಸ್:
ಭಿವಾಂಡಿಯಲ್ಲಿದ್ದ 3 ಅಂತಸ್ತಿನ ಕಟ್ಟಡವು ಅಸ್ಥಿರಗೊಂಡಿದ್ದು, ವಾಸಕ್ಕೆ ಸುರಕ್ಷಿತವಾಗಿಲ್ಲ. ಸಾಧ್ಯವಾದಷ್ಟು ಬೇಗ ಅಲ್ಲಿಂದ ಮನೆಗಳನ್ನು ಖಾಲಿ ಮಾಡುವಂತೆ ಮೊದಲೇ ಭಿವಾಂಡಿ-ನಿಜಾಂಪುರ್ ಮುನ್ಸಿಪಲ್ ಕಾರ್ಪೋರೇಷನ್ ನೋಟಿಸ್ ಜಾರಿಗೊಳಿಸಿತ್ತು. ಇದನ್ನು ಲಘುವಾಗಿ ತೆಗೆದುಕೊಂಡು, ಮನೆ ಖಾಲಿ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಇಂಥದೊಂದು ದುರಂತ ಸಂಭವಿಸಿದೆ ಎಂದು ಕಮಿಷನರ್ ಪಂಕಜ್ ಆಶಿಯಾ ಹೇಳಿದ್ದಾರೆ.
ಭಿವಾಂಡಿ ಕಟ್ಟಡ ದುರಂತದ ಕಾರಣದ ಬಗ್ಗೆ ತನಿಖೆ ನಡೆಸುವಂತೆ ಮಹಾರಾಷ್ಟ್ರದ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಆದೇಶಿಸಿದ್ದಾರೆ. ಇನ್ನು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗೆ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.