ಸಿಎಂ ಆದ್ರೇನು ಬಂಡಾಯ ಶಾಸಕರನ್ನು ಅಮಾನತುಗೊಳಿಸುವಂತೆ ಸುಪ್ರೀಂ ಕೋರ್ಟ್ ಮೊರೆ!
ಮುಂಬೈ, ಜುಲೈ 01: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಅಂತ್ಯವಾಯಿತು ಎನ್ನುವಷ್ಟರಲ್ಲೇ ರಾಜ್ಯ ರಾಜಕಾರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ರಾಜ್ಯದ 19ನೇ ಮುಖ್ಯಮಂತ್ರಿ ಆಗಿ ಏಕನಾಥ್ ಶಿಂಧೆ ಪ್ರಮಾಣವಚನ ಸ್ವೀಕರಿಸಿದ ನಂತರವೂ ಬಂಡಾಯ ಶಾಸಕರನ್ನು ಅಮಾನತುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಲಾಗಿದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಏಕನಾಥ್ ಶಿಂಧೆ ಸೇರಿದಂತೆ 16 ಶಾಸಕರನ್ನು ಅನರ್ಹಗೊಳಿಸುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಅರ್ಜಿ ತೀರ್ಪು ಬರುವವರೆಗೂ ಎಲ್ಲ 16 ಶಾಸಕರನ್ನು ಅಮಾನತ್ತಿನಲ್ಲಿ ಇರಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಲಾಗಿದೆ. ಈ ಸಂಬಂಧ ಶಿವಸೇನೆಯ ಮುಖ್ಯ ಸಚೇತಕ ಸುನೀಲ್ ಪ್ರಭು ಅರ್ಜಿ ಸಲ್ಲಿಸಿದ್ದಾರೆ.
ಬಿಜೆಪಿ ಪಡಸಾಲೆಯಲ್ಲಿ ಬಿಸಿಬಿಸಿ ಚರ್ಚೆ: ಫಡ್ನವೀಸ್ ಡಿಸಿಎಂ ಅವಧಿ ಕೆಲವೇ ತಿಂಗಳು?
ಶುಕ್ರವಾರ ಬೆಳಗ್ಗೆ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಪೀಠದ ಎದುರು ಹಿರಿಯ ವಕೀಲ ಕಪಿಲ್ ಸಿಬಲ್ ಮೂಲಕ ಅರ್ಜಿ ಸಲ್ಲಿಸಿದರು. ಇಲ್ಲಿ ಯಾವುದೇ ರೀತಿ ವಿಲೀನ ಪ್ರಕ್ರಿಯೆಯು ನಡೆದಿಲ್ಲ. ಅವರು ಪ್ರಮಾಣ ವಚನ ಸ್ವೀಕರಿಸಿದ ಕ್ಷಣವೇ ಅವರು 10ನೇ ಶೆಡ್ಯೂಲ್ ಅನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಅವರು ಯಾವುದೇ ಪಕ್ಷದವರಲಿಲ್ಲ ಹಾಗೂ ಇಲ್ಲಿ ಪ್ರಜಾಪ್ರಭುತ್ವದ ನೃತ್ಯವೂ ಅಲ್ಲ ಎಂದು ಹಿರಿಯ ವಕೀಲರು ತಮ್ಮ ವಾದದಲ್ಲಿ ಹೇಳಿದ್ದಾರೆ.
ಪ್ರಕರಣ ಆಲಿಸುತ್ತೇವೆ ಎಂದ ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್ ಕೂಡ ಕಣ್ಣು ಮುಚ್ಚಿಕೊಂಡು ಕುಳಿತಿಲ್ಲ. ಜುಲೈ 11ರಂದು ನಿಗದಿಯಂತೆ ಪ್ರಕರಣವನ್ನು ವಿಚಾರಣೆ ನಡೆಸಲಾಗುವುದು ಎಂದು ವಕೀಲರಿಗೆ ನ್ಯಾಯಮೂರ್ತಿ ಸೂರ್ಯಕಾಂತ್ ತಿಳಿಸಿದರು. "ನಾವು ಜುಲೈ 11ರಂದು ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳುತ್ತೇವೆ. ಇತರ ಮನವಿಗಳೊಂದಿಗೆ IA ಅನ್ನು ಪಟ್ಟಿ ಮಾಡಿ ಮತ್ತು ಅದನ್ನು ಪಕ್ಷಗಳಿಗೆ ನೀಡುತ್ತೇವೆ. ಅದನ್ನೂ ಸಹ ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದರು."
ಶಿವಸೇನೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖ ಆಗಿರುವುದೇನು?
ಶಿವಸೇನೆಯ ವಿರುದ್ಧ ಬಂಡಾಯ ಬಾವುಟ ಹಾರಿಸಿದ ಏಕನಾಥ್ ಶಿಂಧೆ ಸೇರಿದಂತೆ 16 ಶಾಸಕರ ಅನರ್ಹತೆಯ ಅರ್ಜಿ ಕುರಿತು ಉಪ ಸಭಾಪತಿಗಳು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಆದರೆ ಅಲ್ಲಿಯವರೆಗೂ ಈ ಶಾಸಕರನ್ನು ಅಮಾನತುಗೊಳಿಸಬೇಕು. ಮಹಾರಾಷ್ಟ್ರದ ವಿಧಾನಸಭೆಗೆ ಪ್ರವೇಶಿಸದಂತೆ ಹಾಗೂ ಕಲಾಪಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
10ನೇ ಶೆಡ್ಯೂಲ್ ಅಡಿಯಲ್ಲಿ ಕಲಾಪವನ್ನು ಪೂರ್ವಭಾವಿಯಾಗಿ ಮತ್ತು ತಡೆಯುವ ಸಲುವಾಗಿ ಸ್ಪೀಕರ್ ಪದಚ್ಯುತಿಗೆ ಪೂರ್ವ ಯೋಜಿತ ನೋಟಿಸ್ ಕಳುಹಿಸಿದ್ದಾರೆ. ಈ ಕ್ರಮವನ್ನು ಅಮಾನ್ಯಗೊಳಿಸದಂತೆ ಜಾಣ್ಮೆಯಿಂದ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮಹಾ ಮೈತ್ರಿಕೂಟದ ವಿರುದ್ಧ ನಡೆಸಿದ ಹುನ್ನಾರ
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರವನ್ನು ಕೆಳಗಿಳಿಸಬೇಕು ಎಂಬ ಹುನ್ನಾರವನ್ನು ಇಟ್ಟುಕೊಂಡು ತಂತ್ರ ಮಾಡಲಾಗಿದೆ. ಬಿಜೆಪಿಯ ಜೊತೆಗೆ ಕೈಜೋಡಿಸುವ ಸ್ಕೆಚ್ ಹಾಕಿಕೊಂಡೇ ಏಕನಾಥ್ ಶಿಂಧೆ ಬಂಡಾಯ ಬಾವುಟ ಹಾರಿಸುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದೇ ರೀತಿಯಾಗಿ ಏಕನಾಥ್ ಶಿಂಧೆ ಮುಖ್ಯಮಂತ್ರಿ ಮತ್ತು ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ಸುನೀಲ್ ಪ್ರಭು ಅರ್ಜಿಯಲ್ಲಿ ತಿಳಿಸಿದ್ದಾರೆ.
ಇದಲ್ಲದೆ ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆ ಬಿಜೆಪಿ ರಾಜ್ಯ ವಿಧಾನಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಹೊರತಾಗಿಯೂ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿದೆ. ಈ ನಡವಳಿಕೆಯು ಸಂವಿಧಾನದ ಹತ್ತನೇ ಶೆಡ್ಯೂಲ್ನ ಪ್ಯಾರಾ 2(1)(ಎ) ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದನ್ನು ಒತ್ತಿ ಹೇಳಲಾಗಿದೆ.
ಬಂಡಾಯ ಶಾಸಕರನ್ನು ಸದಸ್ಯತ್ವದಿಂದ ವಜಾಗೊಳಿಸುವಂತೆ ಆಗ್ರಹ
"ಮಹಾರಾಷ್ಟ್ರದಲ್ಲಿ ಬಂಡಾಯ ಶಾಸಕರು ನಡೆದುಕೊಂಡ ರೀತಿಯಲ್ಲಿ ಅಪರಾಧವು ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗಾಗಿ ಯಾವುದೇ ವಿವರಣೆ ಕರೆಯುವ ಅಗತ್ಯವಿಲ್ಲ, ಏಕನಾಥ್ ಶಿಂಧೆ ಮತ್ತು ಅವರ ಬೆಂಬಲಿತ ಶಾಸಕರನ್ನು ತಕ್ಷಣವೇ ಮಹಾರಾಷ್ಟ್ರ ಶಾಸಕಾಂಗ ಸಭೆಯ ಸದಸ್ಯತ್ವದಿಂದ ವಜಾಗೊಳಿಸಬೇಕು" ಎಂದು ಅರ್ಜಿಯಲ್ಲಿ ಕೋರಲಾಗಿದೆ. ಇದರ ಜೊತೆಗೆ ವಾಸ್ತವದಲ್ಲಿ ಶಿವಸೇನೆಯ ನಾಯಕತ್ವವು ಇನ್ನೂ ಉದ್ಧವ್ ಠಾಕ್ರೆ ಬಳಿಯಲ್ಲೇ ಉಳಿದಿದೆ. ನಾಯಕತ್ವದ ಸ್ಥಾನದ ಬಗ್ಗೆ ಯಾವುದೇ ವಿವಾದಗಳಿಲ್ಲ ಎಂದು ಅರ್ಜಿಯಲ್ಲಿ ಒತ್ತಿ ಹೇಳಲಾಗಿದೆ.
Recommended Video