ಏಕನಾಥ್ ಶಿಂಧೆಗೆ ಬೆಂಬಲ: ಥಾಣೆ ಮಾಜಿ ಮೇಯರ್ ನರೇಶ್ ಮ್ಹಾಸ್ಕೆ ರಾಜೀನಾಮೆ
ಮುಂಬೈ ಜೂನ್ 26: ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಆಗಿರುವ ತೊಂದರೆಗಳು ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಒಂದೆಡೆ ಏಕನಾಥ್ ಶಿಂಧೆ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಸರ್ಕಾರ ರಚಿಸುವ ಕಸರತ್ತು ಆರಂಭಿಸಿದ್ದರೆ, ಉದ್ಧವ್ ಠಾಕ್ರೆ ಅರ್ಜಿಯ ಮೇರೆಗೆ ಡೆಪ್ಯುಟಿ ಸ್ಪೀಕರ್ 16 ಬಂಡಾಯ ಶಾಸಕರಿಗೆ ನೋಟಿಸ್ ಕಳುಹಿಸಿದ್ದಾರೆ. ಇದೆಲ್ಲದರ ನಡುವೆ ರಾಜೀನಾಮೆಯ ಸುತ್ತು ಕೂಡ ಶುರುವಾಗಿದೆ. ಮಾಹಿತಿಯ ಪ್ರಕಾರ, ಥಾಣೆ ಮಾಜಿ ಮೇಯರ್ ಮತ್ತು ಶಿವಸೇನೆ ನಾಯಕ ನರೇಶ್ ಮ್ಹಾಸ್ಕೆ ಏಕನಾಥ್ ಶಿಂಧೆ ಅವರನ್ನು ಬೆಂಬಲಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನರೇಶ್ ಮ್ಹಾಸ್ಕೆ ಶಿವಸೇನೆಯ ಥಾಣೆ ಜಿಲ್ಲಾ ಮುಖ್ಯಸ್ಥರಾಗಿದ್ದರು. ಅವರು ತಮ್ಮ ರಾಜೀನಾಮೆಯನ್ನು ಉದ್ಧವ್ ಠಾಕ್ರೆ ಅವರಿಗೆ ಕಳುಹಿಸಿದ್ದಾರೆ. ನರೇಶ್ ಮ್ಹಾಸ್ಕೆ ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸುವಾಗ, ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವನ್ನು ಕೂಡ ಗುರಿಯಾಗಿಸಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಎನ್ಸಿಪಿ ಶಿವಸೇನೆಯ ಕತ್ತು ಹಿಸುಕಿದೆ ಎಂದು ಅವರು ಹೇಳಿದ್ದಾರೆ. ಎನ್ಸಿಪಿ ವಿರುದ್ಧ ಪ್ರತಿಭಟಿಸಿ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಗೊಂಡಿದ್ದು, ಸಚಿವ ಹಾಗೂ ಹಿರಿಯ ನಾಯಕ ಏಕನಾಥ್ ಶಿಂದೆ ನೇತೃತ್ವದಲ್ಲಿ ಬಂಡಾಯ ಶಾಸಕರು ಪ್ರತ್ಯೇಕ ಪಕ್ಷ ಸ್ಥಾಪನೆಯ ಕಡೆ ಹೆಜ್ಜೆ ಇರಿಸಿದೆ. ಪ್ರಸ್ತುತ ಅಸ್ಸಾಂನ ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್ನಲ್ಲಿ ಬೀಡುಬಿಟ್ಟಿರುವ ಏಕನಾಥ್ ಶಿಂಧೆ ಶಿಬಿರದ 16 ಬಂಡಾಯ ಶಿವಸೇನೆ ಶಾಸಕರಿಗೆ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ಅನರ್ಹತೆ ನೋಟಿಸ್ ಜಾರಿ ಮಾಡಿದ್ದು ಜೂನ್ 27ರೊಳಗೆ ತಮ್ಮ ಲಿಖಿತ ಉತ್ತರಗಳನ್ನು ಸಲ್ಲಿವಂತೆ ಸೂಚಿಸಿದ್ದಾರೆ.
ಇತರ ಬಂಡಾಯ ಶಾಸಕರೊಂದಿಗೆ ಬೀಡುಬಿಟ್ಟಿರುವ ಸೇನಾ ಬಂಡಾಯ ಶಾಸಕ ತಾನಾಜಿ ಸಾವಂತ್ ಅವರ ಕಚೇರಿಯನ್ನು ಇಂದು ಸೇನಾ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ. ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಮುಂಬೈ ಪೊಲೀಸರು ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿರುವ ಶಿಂಧೆ ತಮ್ಮೊಂದಿಗೆ ಬೀಡುಬಿಟ್ಟಿರುವ 38 ಶಾಸಕರ ಕುಟುಂಬ ಸದಸ್ಯರ ಭದ್ರತೆಯನ್ನು ದುರುದ್ದೇಶಪೂರ್ವಕವಾಗಿ ಹಿಂಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಶಿಂಧೆ ಸೇರಿದಂತೆ ಹಲವು ಶಿವಸೇನೆ ಮತ್ತು ಎಂವಿಎ ನಾಯಕರ ಮನೆಗಳ ಹೊರಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ವರದಿಯಾಗಿದೆ.