ಗಡಿ ವಿವಾದ; ಮತ್ತೊಂದು ಆಗ್ರಹ ಮುಂದಿಟ್ಟ ಮಹಾರಾಷ್ಟ್ರ ಸಿಎಂ
ಮುಂಬೈ, ಜನವರಿ 27: ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದಕ್ಕೆ ಮತ್ತೆ ಕಿಡಿ ಹೊತ್ತಿಸಲು ಮುಂದಾಗಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಕರ್ನಾಟಕ ಗಡಿಯಲ್ಲಿನ ಮರಾಠಿ ಭಾಷಿಗರಿರುವ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕಾಗಿ ಆಗ್ರಹಿಸಿದ್ದಾರೆ.
ಗಡಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡುವವರೆಗೂ ಈ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕೆಂದು ಕೇಳಿದ್ದಾರೆ.
ಮತ್ತೆ ಗಡಿ ಕಿಡಿ ಹೊತ್ತಿಸಲು ಮುಂದಾದ "ಮಹಾ' ಸರ್ಕಾರ: ವಿವಾದಿತ ಪುಸ್ತಕ ಬಿಡುಗಡೆ
ಬುಧವಾರ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಕುರಿತು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸಿಎಂ ಉದ್ಧವ್ ಠಾಕ್ರೆ, "ಗಡಿ ವಿವಾದದ ಬಗ್ಗೆ ಬರೀ ಪುಸ್ತಕ ಬಿಡುಗಡೆ ಮಾಡಿ ಹೋರಾಟ ನಿಲ್ಲಿಸುವುದಿಲ್ಲ. ಈ ಪ್ರಕರಣವನ್ನು ನಾವು ಗೆಲ್ಲಲೇಬೇಕಿದೆ. ಪ್ರಕರಣವಿನ್ನೂ ಸುಪ್ರೀಂ ಕೋರ್ಟ್ ನಲ್ಲಿದೆ. ಅದು ಪರಿಹಾರ ಕಾಣುವವರೆಗೂ ಹೋರಾಟ ನಡೆಸುತ್ತೇವೆ. ಕರ್ನಾಟಕದ ಗಡಿಗಳಲ್ಲಿನ ಮರಾಠಿ ಭಾಷಿಗರಿರುವ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕಾಗಿ ಬೇಡಿಕೆ ಇಟ್ಟಿದ್ದೇನೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು" ಎಂದು ಹೇಳಿದ್ದಾರೆ.
"ಕರ್ನಾಟಕ ಸರ್ಕಾರದ ಈ ಅನ್ಯಾಯದ ವಿರುದ್ಧ ಹೋರಾಡಬೇಕು. ಈ ಹೋರಾಟಕ್ಕೆ ನಾವೆಲ್ಲರೂ ಒಂದಾಗಬೇಕು. ಅಲ್ಲಿರುವ ಮರಾಠಿ ಭಾಷಿಗರು ಧ್ವನಿ ಎತ್ತಿದರೆ ಕರ್ನಾಟಕ ಸರ್ಕಾರ ಅವರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತದೆ. ಹೀಗಾಗಿ ನಾವೆಲ್ಲರೂ ಒಂದಾಗಿ ಹೋರಾಡಬೇಕಿದೆ" ಎಂದು ಕರೆ ನೀಡಿದ್ದಾರೆ.