ನಮಗೆ ಹಿಂದುತ್ವದ ಪಾಠ ಮಾಡಲು ಬರಬೇಡಿ: ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ಕಿಡಿ
ಮುಂಬೈ, ಮಾರ್ಚ್ 3: ಹಿಂದುತ್ವದ ಪ್ರತಿಪಾದನೆಯಿಂದ ಹಿಡಿದು ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆವರೆಗಿನ ವಿಚಾರಗಳ ಕುರಿತು ಬಿಜೆಪಿ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದರು. ಹಿಂದುತ್ವ ಪ್ರತಿಪಾದಕ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ಏಕೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಿಲ್ಲ ಎಂದು ಪ್ರಶ್ನಿಸಿದ ಅವರು, ಬಿಜೆಪಿಯು ತನ್ನ ಮಾಜಿ ಮಿತ್ರ ಪಕ್ಷ ಶಿವಸೇನಾಕ್ಕೆ ಹಿಂದುತ್ವದ ಪಾಠ ಮಾಡುವ ಅಗತ್ಯವಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.
'ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವಂತೆ ಎರಡು ಬಾರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಭಾರತ ರತ್ನ ನೀಡುವುದು ಯಾರ? ಅದು ಪ್ರಧಾನಿ ಹಾಗೂ ಸಮಿತಿಯ ಹಕ್ಕು. ನೀವು ಸಾವರ್ಕರ್ ಅವರಿಗೆ ಭಾರತ ರತ್ನ ನೀಡಿಲ್ಲ ಮತ್ತು ಮರುನಾಮಕರಣದ ಬಗ್ಗೆ ನಮಗೆ ಉಪದೇಶ ಮಾಡುತ್ತೀರಿ?' ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅವರು ಪ್ರಶ್ನಿಸಿದರು.
ಔರಂಗಾಬಾದ್ ಹೆಸರು ಖಂಡಿತವಾಗಿಯೂ ಬದಲಾಗಲಿದೆ ಎಂದು ಹೇಳಿದ ಅವರು, ಔರಂಗಾಬಾದ್ ವಿಮಾನನಿಲ್ದಾಣಕ್ಕೆ ಸಂಭಾಜಿ ಮಹಾರಾಜ್ ಹೆಸರು ಇಡುವ ಪ್ರಸ್ತಾಪಕ್ಕೆ ಅಡ್ಡಗಾಲು ಹಾಕಿರುವವರು ಯಾರು ಎಂದು ವಿರೋಧಪಕ್ಷ ಬಿಜೆಪಿ ವಿರುದ್ಧ ಕಿಡಿಕಾರಿದರು.
ಎನ್ಸಿಪಿ ಮತ್ತು ಕಾಂಗ್ರೆಸ್ ಜತೆ ಕೈ ಜೋಡಿಸಿ ಅಧಿಕಾರ ಪಡೆಯುವುದಕ್ಕಾಗಿ ಉದ್ಧವ್ ಠಾಕ್ರೆ ತಮ್ಮ ಹಿಂದುತ್ವ ಸಿದ್ಧಾಂತವನ್ನು ಮರೆತುಬಿಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.
ದೆಹಲಿ ಗಡಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಸಾಗುವ ದಾರಿಯಲ್ಲಿ ಮೊಳೆಗಳನ್ನು ಅಳವಡಿಸಲಾಗಿತ್ತು. ದಾರಿಗೆ ತಂತಿ ಬೇಲಿ ನಿರ್ಮಿಸಿದ್ದರು. ಗಡಿಯಲ್ಲಿ ಹಾಕಬೇಕಿದ್ದನ್ನು ರೈತರು ಮತ್ತು ದೆಹಲಿ ನಡುವೆ ಮಾಡಿದ್ದರು. ಅಂತಹ ಸಿದ್ಧತೆಯನ್ನು ಗಡಿಯಲ್ಲಿ ಮಾಡಿದ್ದರೆ ಚೀನಾ ಒಳಗೆ ನುಸುಳುತ್ತಿರಲಿಲ್ಲ ಎಂದು ಉದ್ಧವ್ ಟೀಕಿಸಿದರು.