"ಮಹಾರಾಷ್ಟ್ರದಲ್ಲಿ ಕೊವಿಡ್-19 ಲಸಿಕೆ ವಿತರಣೆಗೆ ಯೋಜನೆ"
ಮುಂಬೈ, ನವೆಂಬರ್.24: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಸೂಕ್ತ ಕಾಲದಲ್ಲಿ ಲಸಿಕೆಯನ್ನು ತಲುಪಿಸುವ ನಿಟ್ಟಿನಲ್ಲಿ ಸರ್ಕಾರವು ಕಾರ್ಯಪ್ರವೃತ್ತವಾಗಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಕೊವಿಡ್-19 ಸೋಂಕಿಗೆ ತತ್ತರಿಸಿದ ಪ್ರಮುಖ 8 ರಾಜ್ಯಗಳ ಸಿಎಂಗಳ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚರ್ಚೆ ನಡೆಸಿದರು. ಮೊದಲ ಹಂತದ ಸಭೆಯಲ್ಲಿ ಪ್ರಧಾನಿ ಜೊತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡಾ ಚರ್ಚಿಸಿದರು.
"ಕೇಂದ್ರದ ಆಸ್ಪತ್ರೆಗಳಲ್ಲಿ ಕೊವಿಡ್-19 ರೋಗಿಗಳಿಗೆ ಹಾಸಿಗೆ ಮೀಸಲಿರಿಸಿ"
ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಣ ಮತ್ತು ಕಡಿವಾಣಕ್ಕೆ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. ಸೂಕ್ತ ಕಾಲದಲ್ಲಿ ಅಗತ್ಯವಿರುವ ರೋಗಿಗಳಿಗೆ ಲಸಿಕೆಯನ್ನು ತಲುಪಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಈ ಸಂಬಂಧ ಕೊವಿಡ್-19 ಲಸಿಕೆ ಉತ್ಪಾದನೆಯಲ್ಲಿ ತೊಡಗಿರುವ ಸೆರಮ್ ಇನ್ಸ್ ಟಿಟ್ಯೂಟ್ ಸಿಇಓ ಆದರ್ ಪೂನಾವಾಲಾ ಜೊತೆಗೆ ನಿತ್ಯ ಸಂಪರ್ಕದಲ್ಲಿ ಇರುವುದಾಗಿ ಉದ್ಧವ್ ಠಾಕ್ರೆ ಅವರು ಪ್ರಧಾನಿ ಮೋದಿಯವರಿಗೆ ಮಾಹಿತಿ ನೀಡಿದ್ದಾರೆ.
ಭಾರತಕ್ಕೆ ಮೊದಲ ಆದ್ಯತೆ ಎಂದಿರುವ ಸೆರಮ್:
ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ವಿಶ್ವದಲ್ಲೇ ಅತಿಹೆಚ್ಚು ಔಷಧಿ ಮತ್ತು ಲಸಿಕೆಗಳನ್ನು ಉತ್ಪಾದಿಸುವ ಕೇಂದ್ರವಾಗಿದೆ. ಆಸ್ಟ್ರಾಜೆನಿಕಾ ಪಿಎಲ್ ಸಿ ಕೊವಿಡ್-19 ಲಸಿಕೆಯನ್ನು ಬೇರೆ ರಾಷ್ಟ್ರಗಳಿಗೆ ನೀಡುವುದಕ್ಕೂ ಮೊದಲು ಭಾರತದಲ್ಲಿ ವಿತರಿಸುವುದಕ್ಕೆ ಆದ್ಯತೆ ನೀಡುವುದಾಗಿ ಅದರ್ ಪೂನಾವಾಲಾ ಈಗಾಗಲೇ ಹೇಳಿದ್ದಾರೆ. ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ ಅವರು, "ನಮ್ಮ ದೇಶದ ಮೇಲೆ ಲಕ್ಷ್ಯ ವಹಿಸುವುದು ತೀರಾ ಅಗತ್ಯವಾಗಿದೆ. ನಂತರದಲ್ಲಿ ಕೊವ್ಯಾಕ್ಸ್ ಹಾಗೂ ಅದರ ನಂತರದಲ್ಲಿ ಅನ್ಯರಾಷ್ಟ್ರಗಳ ಜೊತೆಗೆ ದ್ವಿಪಕ್ಷೀಯ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತದೆ. ಆದ್ದರಿಂದ ನಾವು ಮೊದಲಿಗೆ ನಮ್ಮ ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆಗೆ ಮೊದಲ ಆದ್ಯತೆಯನ್ನು ನೀಡುತ್ತೇವೆ" ಎಂದು ತಿಳಿಸಿದ್ದಾರೆ.