ಮಹಾರಾಷ್ಟ್ರ ಸಿಎಂ ಫಡ್ನವೀಸ್ ಗೆ ಮಾವೋವಾದಿಗಳ ಜೀವ ಬೆದರಿಕೆ
ಮುಂಬೈ, ಜೂನ್ 8 : ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೆ ಮಾವೋವಾದಿ ಸಂಘಟನೆಗಳಿಂದ ಎರಡು ಬೆದರಿಕೆ ಪತ್ರ ಬಂದಿದೆ ಎಂದು ರಾಜ್ಯ ಗೃಹ ಸಚಿವಾಲಯದ ಮೂಲಗಳು ಶುಕ್ರವಾರ ತಿಳಿಸಿರುವುದಾಗಿ ಪಿಟಿಐ ವಾರ್ತಾ ಸಂಸ್ಥೆ ವರದಿ ಮಾಡಿದೆ. ವಾರದ ಹಿಂದೆ ಮುಖ್ಯಮಂತ್ರಿ ಕಚೇರಿಗೆ ಪತ್ರಗಳು ತಲುಪಿವೆ. ಅವುಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೋದಿ ಹತ್ಯೆಗೆ ಸಂಚು, ದುಷ್ಟರ ವಿರುದ್ಧ ಸಿಡಿದೆದ್ದ ಟ್ವಿಟ್ಟಿಗರು!
ಗಡ್ ಚಿರೋಲಿಯಲ್ಲಿ ಈಚೆಗೆ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆಯ ನಂತರ ಈ ಪತ್ರಗಳು ಬಂದಿವೆ. ಆ ಕಾರ್ಯಾಚರಣೆಯಲ್ಲಿ ಮೂವತ್ತೊಂಬತ್ತು ಮಾವೋವಾದಿಗಳು ಸಾವನ್ನಪ್ಪಿದ್ದರು. ಪತ್ರಗಳನ್ನು ಮುಂದಿನ ತನಿಖೆಗಾಗಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗಡ್ ಚಿರೋಲಿಯ ನಕ್ಸಲರ ಎನ್ ಕೌಂಟರ್ ಬಗ್ಗೆ ಪ್ರಸ್ತಾವವು ಪತ್ರದಲ್ಲಿದ್ದು, ಫಡ್ನವೀಸ್ ಹಾಗೂ ಅವರ ಕುಟುಂಬದವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಇದಕ್ಕೂ ಮುನ್ನ ಪುಣೆ ಪೊಲೀಸರು ಇ ಮೇಲ್ ವೊಂದನ್ನು ವಶಪಡಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗಳನ್ನು ಗುರಿ ಮಾಡಿಕೊಂಡು, ಅವರನ್ನು ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರಂತೆಯೇ ಹತ್ಯೆ ಮಾಡಲು ಯೋಜನೆ ರೂಪಿಸಲಾಗಿದೆ ಎಂಬ ಸಂಗತಿ ಬಯಲು ಮಾಡಿದ್ದರು.