ಕೋವಿಡ್ ಲಸಿಕೆ ಹಾಕಿಲ್ವ, ನಿಮಗೆ ಸಂಬಳ ಇಲ್ಲ!
ನಾಗ್ಪುರ, ನವೆಂಬರ್ 24: "ನೀವು ಕೋವಿಡ್ ಲಸಿಕೆಯನ್ನು ಪಡೆದಿಲ್ಲವಾ ನಿಮಗೆ ಸಂಬಳವನ್ನು ನೀಡಲ್ಲ," ಎಂದು ಪೌರ ಕಾರ್ಮಿಕರಿಗೆ ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ. "ಕೊರೊನಾ ವೈರಸ್ ವಿರುದ್ಧದ ಲಸಿಕೆಯ ಒಂದು ಅಥವಾ ಎರಡೂ ಡೋಸ್ಗಳನ್ನು ತೆಗೆದುಕೊಳ್ಳದ ಉದ್ಯೋಗಿಗಳಿಗೆ ನಾವು ಸಂಬಳವನ್ನು ನೀಡುವುದಿಲ್ಲ," ಎಂದು ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ ಬುಧವಾರ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನಾಗಪುರದ ನಾಗರಿಕ ನಿಗಮದ ವೈದ್ಯಕೀಯ ವಲಯ ಅಧಿಕಾರಿ ಡಾ ಭಾವನಾ ಸೋಂಕುಸರೆ, "ನೌಕರರು ಕೋವಿಡ್ ಲಸಿಕೆಯ ಒಂದು ಡೋಸ್ ಅಥವಾ ಎರಡು ಡೋಸ್ ಅನ್ನು ಪಡೆದಿರಬೇಕು. ಒಂದು ಅಥವಾ ಎರಡು ಡೋಸ್ ಲಸಿಕೆಯನ್ನು ಪಡೆಯದ ಉದ್ಯೋಗಿಗಳಿಗೆ ಸಂಬಳ ನೀಡದಿರಲು ನಾಗ್ಪುರ ಮುನ್ಸಿಪಲ್ ಕಾರ್ಪೊರೇಶನ್ ನಿರ್ಧರಿಸಿದೆ," ಎಂದು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಕೂಡಾ ಇದೇ ರೀತಿಯಾಗಿ ಆದೇಶವನ್ನು ಹೊರಡಿಸಿತ್ತು. ಕೋವಿಡ್ ಲಸಿಕೆಯ ಒಂದು ಡೋಸ್ ಅನ್ನು ಸಹ ಪಡೆದುಕೊಳ್ಳದ ಉದ್ಯೋಗಿಗಳಿಗೆ ಸಂಬಳವನ್ನು ನೀಡಲಾಗುವುದಿಲ್ಲ ಎಂದು ತನ್ನ ಉದ್ಯೋಗಿಗಳಿಗೆ ಹೇಳಿದೆ. ಹಾಗೆಯೇ ಎಲ್ಲಾ ಉದ್ಯೋಗಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಕೋವಿಡ್ ಲಸಿಕೆಯನ್ನು ಪಡೆದ ಪ್ರಮಾಣಪತ್ರವನ್ನು ಸಲ್ಲಿಸುವುದನ್ನು ಪುರಸಭೆಯು ಕಡ್ಡಾಯ ಮಾಡಿದೆ.
ಲಸಿಕೆ ಪಡೆಯದ ಆಟೋ ರಿಕ್ಷಾ ಚಾಲಕರನ್ನು ವಶಕ್ಕೆ ಪಡೆಯಲು ಸೂಚನೆ
ಇದಕ್ಕೂ ಮುನ್ನ, ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯನ್ನು ಅಧಿಕ ಮಾಡುವ ನಿಟ್ಟಿನಲ್ಲಿಅಧಿಕಾರಿಗಳು ಆಟೋರಿಕ್ಷಾಗಳ ಚಾಲಕರು ಒಂದು ಡೋಸ್ ಲಸಿಕೆಯನ್ನು ಕೂಡಾ ಪಡೆಯದಿದ್ದರೆ ಅವರ ಆಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಳ್ಳುವ ಆದೇಶವನ್ನು ನೀಡಲಾಗಿತ್ತು. ಸೋಮವಾರ ತಡರಾತ್ರಿ ಜಿಲ್ಲಾಧಿಕಾರಿ ಸುನೀಲ್ ಚವ್ಹಾಣ ಹೊರಡಿಸಿದ ಆದೇಶದ ಪ್ರಕಾರ, ಆಟೋರಿಕ್ಷಾಗಳ ಚಾಲಕರು ಕನಿಷ್ಠ ಒಂದು ಡೋಸ್ ಆದರೂ ಪಡೆದುಕೊಂಡಿರಬೇಕು, ಹಾಗೆಯೇ ಬಸ್ ನಿರ್ವಾಹಕರು ಚುಚ್ಚುಮದ್ದು ಹಾಕದ ಪ್ರಯಾಣಿಕರಿಗೆ ಟಿಕೆಟ್ ನೀಡುವಂತಿಲ್ಲ. ಈ ಆದೇಶವು ನವೆಂಬರ್ 25 ರಿಂದ ಅಂದರೆ ನಾಳೆಯಿಂದ ಜಾರಿಗೆ ಬರಲಿದೆ.
ಮರಾಠವಾಡ ಪ್ರದೇಶದ ಔರಂಗಾಬಾದ್ ಜಿಲ್ಲೆಯು ವ್ಯಾಕ್ಸಿನೇಷನ್ ವ್ಯಾಪ್ತಿಯ ವಿಷಯದಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದೆ. ಕಡಿಮೆ ಲಸಿಕೆ ಪಡೆದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಈ ತಿಂಗಳ ಆರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸುನೀಲ್ ಚವ್ಹಾಣ ವರ್ಚುವಲ್ ಮೂಲಕ ಭಾಗವಹಿಸಿದ್ದರು.
ಔರಂಗಾಬಾದ್ನಲ್ಲಿ ಹೇಗಿದೆ ಲಸಿಕೆ ಪಡೆದವರ ಪ್ರಮಾಣ
ಅಧಿಕೃತ ಅಂಕಿ ಅಂಶಗಳ ಪ್ರಕಾರ, ಔರಂಗಾಬಾದ್ ಜಿಲ್ಲೆಯ 32,24,677 ಜನರು ಲಸಿಕೆ ಫಲಾನುಭವಿಗಳು ಆಗಿದ್ದಾರೆ. ಈ ಪೈಕಿ ನವೆಂಬರ್ 22 ರವರೆಗೆ ಶೇಕಡ 64.36 ರಷ್ಟು ಜನರು ಮೊದಲ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಶೇಕಡ 27.78 ರಷ್ಟು ಜನರು ಕೋವಿಡ್ ಲಸಿಕೆಯ ಎರಡನೇ ಡೋಸ್ ಅನ್ನು ಪಡೆದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅಧಿಕೃತ ಪ್ರಕಟಣೆಯು, "ಆಟೋರಿಕ್ಷಾಗಳ ಚಾಲಕರು ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ಹಾಕಿಸಿಕೊಳ್ಳದೆ ಇರುವುದು ಕಂಡು ಬಂದರೆ, ಸಂಬಂಧಪಟ್ಟ ಅಧಿಕಾರಿಗಳು ಆಟೋರಿಕ್ಷಾವನ್ನು ವಶಪಡಿಸಿಕೊಳ್ಳುತ್ತಾರೆ ಮತ್ತು ದಂಡವನ್ನು ವಿಧಿಸುತ್ತಾರೆ," ಎಂದು ಹೇಳಿದೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆ ನೀಡಿಕೆ ವೇಗವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ರನ್ನು ಕೋವಿಡ್ ಲಸಿಕೆ ರಾಯಭಾರಿಯನ್ನಾಗಿ ಮಾಡಲು ಇತ್ತೀಚೆಗೆ ನಿರ್ಧಾರ ಕೈಗೊಂಡಿದೆ. ಪ್ರಮುಖವಾಗಿ ಮುಸ್ಲಿಂ ಸಮುದಾಯದ ಜನರಲ್ಲಿ ಲಸಿಕೆ ಹಿಂಜರಿಕೆಯನ್ನು ತೊಡೆದು ಹಾಕಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ ರಾಜ್ಯ ಸಾರ್ವಜನಿಕ ಆರೋಗ್ಯ ಸಚಿವ ರಾಜೇಶ್ ಟೋಪೆ, "ಮುಸ್ಲಿಂ ಸಮುದಾಯವು ಅಧಿಕವಾಗಿ ಇರುವ ಪ್ರದೇಶದಲ್ಲಿ ಕೊರೊನಾ ವೈರಸ್ ವಿರುದ್ಧದ ಲಸಿಕೆಯನ್ನು ಪಡೆಯುವುದರಲ್ಲಿ ಹಿಂಜರಿಕೆಯು ಹೆಚ್ಚಾಗಿ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಜನರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಮನವೊಲಿಸಲು ಮಹಾರಾಷ್ಟ್ರ ಸರ್ಕಾರವು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸಹಾಯವನ್ನು ಪಡೆಯುತ್ತದೆ," ಎಂದು ಹೇಳಿದ್ದಾರೆ.
Recommended Video
(ಒನ್ಇಂಡಿಯಾ ಸುದ್ದಿ)