Breaking: ಮಹಾರಾಷ್ಟ್ರದಲ್ಲಿ ಬಿಜೆಪಿಗೆ 25, ಶಿಂಧೆ ಬಣದ 13 ಶಾಸಕರಿಗೆ ಮಂತ್ರಿಗಿರಿ
ಮುಂಬೈ, ಜುಲೈ 07: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರವು ಸಂಪುಟ ರಚನೆಯ ಸರ್ಕಸ್ ಶುರು ಮಾಡಿದೆ. ಬಿಜೆಪಿ ಮತ್ತು ಶಿವಸೇನೆ ಶಾಸಕರಿಗೆ ಸಚಿವ ಸ್ಥಾನ ಹಂಚಿಕೆಯ ಪ್ರಕ್ರಿಯೆ ಶುರುವಾಗಿದೆ.
Recommended Video
ಭಾರತೀಯ ಜನತಾ ಪಕ್ಷಕ್ಕೆ 25 ಸಚಿವ ಸ್ಥಾನ ಮತ್ತು ಸಿಎಂ ಏಕನಾಥ್ ಶಿಂಧೆ ಬೆಂಬಲಿತ 13 ಶಾಸಕರಿಗೆ ಮಂತ್ರಿಗಿರಿ ನೀಡುವ ನಿಟ್ಟಿನಲ್ಲಿ ಚರ್ಚೆಯನ್ನು ನಡೆಸಲಾಗುತ್ತಿದೆ. ಒಟ್ಟು 38 ಸಚಿವರ ಸಂಪುಟ ರಚನೆಗೆ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ.
ಸರ್ಕಾರವೇ ಬದಲಾದರೂ ಆದಿತ್ಯ ಠಾಕ್ರೆ ವಿರುದ್ಧ ಮಾತ್ರ ಏಕೆ ಕ್ರಮ ತೆಗೆದುಕೊಳ್ಳಲ್ಲ ಶಿಂಧೆ ಟೀಮ್!?
ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೊರತುಪಡಿಸಿ ಬಹುತೇಕ ಹೊಸಬರಿಗೆ ಸಚಿವ ಸ್ಥಾನದ ಮಣೆ ಹಾಕಲಾಗಿದೆ. ಮುಂಬರುವ ಚುನಾವಣೆಗೂ ಪೂರ್ವದಲ್ಲಿ ಹೊಸ ಮುಖಗಳನ್ನು ಮುನ್ನಡೆಗೆ ತರುವ ನಿಟ್ಟಿನಲ್ಲಿ ಬಿಜೆಪಿಯು ಸ್ಕೆಚ್ ಹಾಕಿದೆ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರದಲ್ಲಿ ವಿಶ್ವಾಸ ಗಳಿಸಿದ ಸಿಎಂ ಏಕನಾಥ್ ಶಿಂಧೆ: ಮಹಾರಾಷ್ಟ್ರದಲ್ಲಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಬಾವುಟ ಹಾರಿಸಿದ್ದ ಸಿಎಂ ಏಕನಾಥ್ ಶಿಂಧೆ ತಮ್ಮ ಗುರಿ ತಲುಪುವಲ್ಲಿ ಯಶಸ್ವಿ ಆಗಿದ್ದಾರೆ.
ಕಳೆದ ಜೂನ್ 4ರ ಸೋಮವಾರ ವಿಶ್ವಾಸಮತಯಾಚನೆ ಪ್ರಕ್ರಿಯೆ ನಡೆಸಲಾಯಿತು. ರಾಜ್ಯದಲ್ಲಿ 288 ಸದಸ್ಯ ಬಲದ ವಿಧಾನಸಭೆಯಲ್ಲಿ ಒಬ್ಬ ಶಾಸಕರು ಮೃತಪಟ್ಟ ಹಿನ್ನೆಲೆ ಸದಸ್ಯರ ಬಲವನ್ನು 287ಕ್ಕೆ ಇಳಿಸಲಾಗಿತ್ತು. ಈ ಪೈಕಿ ಬಹುಮತಕ್ಕೆ 144 ಮತಗಳ ಅಗತ್ಯವಿದ್ದು, 164 ಶಾಸಕರು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಮಂಡಿಸಿದ ವಿಶ್ವಾಸಮತ ಯಾಚನೆಗೆ ಪರವಾಗಿ ಮತ ಚಲಾಯಿಸಿದರು.
99 ಶಾಸಕರು ವಿಶ್ವಾಸಮತಯಾಚನೆಗೆ ವಿರುದ್ಧವಾಗಿ ಮತ ಚಲಾಯಿಸಿದ್ದು, ಆ ಮೂಲಕ ಒಟ್ಟು 263 ಶಾಸಕರು ಮತ ಚಲಾಯಿಸಿದರು. ಮೂವರು ಶಾಸಕರು ಗೈರಾಗಿದ್ದು, ಬಹುತೇಕ ಕಾಂಗ್ರೆಸ್ ಮತ್ತು ಎನ್ಸಿಪಿಯ 20 ಶಾಸಕರು ಮತದಾನದ ವೇಳೆ ಗೈರು ಹಾಜರಾಗಿದ್ದರು.