Breaking: ಮಹಾರಾಷ್ಟ್ರ ಸಂಪುಟ ವಿಸ್ತರಣೆ, 18 ಶಾಸಕರಿಂದ ಪ್ರಮಾಣ ವಚನ
ಮುಂಬೈ, ಆಗಸ್ಟ್ 09: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತಮ್ಮ ಸಚಿವ ಸಂಪುಟವನ್ನು ಅನ್ನು ಮಂಗಳವಾರ ರಾಜಭವನದಲ್ಲಿ ವಿಸ್ತರಿಸಿದ್ದು, 18 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮಂಗಳವಾರ ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ ಮತ್ತು ಶಿವಸೇನೆ ಬಣದ ತಲಾ 9 ಶಾಸಕರು ಒಟ್ಟು 18 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣದ ಬಂಡಾಯದ ನಂತರ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಿದ 40 ದಿನಗಳ ಬಳಿಕ ಈ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯಾಗಿದೆ.
ಇಂದು ಬೆಳಗ್ಗೆ ಸಮಾರಂಭಕ್ಕೂ ಮುನ್ನ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮ ಪಕ್ಷದ ನಾಯಕರೊಂದಿಗೆ ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಸಭೆ ನಡೆಸಿದ್ದರು. ಈ ಸಭೆಗೂ ಮುನ್ನ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ನಿವಾಸದಲ್ಲಿ ಸಭೆ ನಡೆದಿತ್ತು. 55 ಶಿವಸೇನಾ ಶಾಸಕರ ಪೈಕಿ 40 ಶಾಸಕರು ಏಕನಾಥ್ ಶಿಂಧೆ ಅವರನ್ನು ಬೆಂಬಲಿಸಿದ್ದಾರೆ.
ಮುಂಬೈನ ರಾಜಭವನದಲ್ಲಿ ಮಹಾರಾಷ್ಟ್ರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಒಂಬತ್ತು ಬಿಜೆಪಿ ನಾಯಕರಲ್ಲಿ ಚಂದ್ರಕಾಂತ ಪಾಟೀಲ್ ಮತ್ತು ವಿಜಯ್ ಕುಮಾರ್ ಗವಿತ್ ಸೇರಿದ್ದಾರೆ.
ಅಂತಿಮ ಪಟ್ಟಿಯಲ್ಲಿ ಏಕನಾಥ್ ಶಿಂಧೆ ಉತ್ತಮ ಸಮತೋಲನವನ್ನು ಉಳಿಸಿದ್ದು, ಬಿಜೆಪಿಯಲ್ಲಿಯೂ ಯಾವುದೇ ಅಸಮಾಧಾನವಿಲ್ಲ ಎಂದು ನಾಯಕರು ತಿಳಿಸಿದ್ದಾರೆ.
ಚಂದ್ರಕಾಂತ್ ಪಾಟೀಲ್, ಸುಧೀರ್ ಮುಂಗಂತಿವಾರ್, ಗಿರೀಶ್ ಮಹಾಜನ್, ಸುರೇಶ್ ಖಾಡೆ, ರಾಧಾಕೃಷ್ಣ ವಿಖೆ ಪಾಟೀಲ್, ರವೀಂದ್ರ ಚವ್ಹಾಣ್, ಮಂಗಲ್ ಪ್ರಭಾತ್ ಲೋಧಾ, ವಿಜಯಕುಮಾರ್ ಗಾವಿತ್ ಮತ್ತು ಅತುಲ್ ಸೇವ್ ಬಿಜೆಪಿ ಶಾಸಕರು ಸಂಪುಟ ಸ್ಥಾನ ಪಡೆದಿದ್ದಾರೆ.
ಬಂಡಾಯ ಶಿವಸೇನಾ ಬಣದಿಂದ ದಾದಾ ಭೂಸೆ, ಸಂದೀಪನ್ ಬುಮ್ರೆ, ಉದಯ್ ಸಮಂತ್, ತಾನಾಜಿ ಸಾವಂತ್, ಅಬ್ದುಲ್ ಸತ್ತಾರ್, ದೀಪಕ್ ಕೇಸರ್ಕರ್, ಗುಲಾಬ್ರಾವ್ ಪಾಟೀಲ್, ಸಂಜಯ್ ರಾಥೋಡ್ ಮತ್ತು ಶಂಭುರಾಜೇ ದೇಸಾಯಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಆಗಸ್ಟ್ 10 ರಿಂದ ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನ ಪ್ರಾರಂಭವಾಗಲಿದೆ.
Recommended Video
ಶಿವಸೇನೆಯಲ್ಲಿನ ಬಂಡಾಯದಿಂದಾಗಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ನಂತರ ಬಂಡಾಯ ಹೂಡಿದ್ದ ಏಕನಾಥ್ ಶಿಂಧೆ ಮತ್ತು ಬಿಜೆಪಿಯ ದೇವೇಂದ್ರ ಫಡ್ನವಿಸ್ ಕ್ರಮವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಜೂನ್ 30 ರಂದು ಪ್ರಮಾಣವಚನ ಸ್ವೀಕರಿಸಿದರು.