ಫಡ್ನವೀಸ್ ಜತೆ ಮುನಿಸು: ಬಿಜೆಪಿ ತೊರೆದ ಹಿರಿಯ ಮುಖಂಡ ಎನ್ಸಿಪಿಗೆ
ಮುಂಬೈ, ಅಕ್ಟೋಬರ್ 21: ಬಿಜೆಪಿ ನಾಯಕತ್ವದ ಜತೆಗೆ ವೈಮನಸ್ಸು ಮೂಡಿದ ಬಳಿಕ ಹಿರಿಯ ಮುಖಂಡ ಏಕನಾಥ್ ಖಾಡ್ಸೆ ತಾವು ಎನ್ಸಿಪಿ ಸೇರಿಕೊಳ್ಳುವುದಾಗಿ ಬುಧವಾರ ಪ್ರಕಟಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರ ಬಿಜೆಪಿ ನಾಯಕತ್ವದೊಂದಿಗೆ ಅವರ ಸಂಬಂಧ ಹಳಸಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈಗ ಅದನ್ನು ಸ್ವತಃ ಬಹಿರಂಗಪಡಿಸಿರುವ ಖಾಡ್ಸೆ, ಶರದ್ ಪವಾರ್ ನೇತೃತ್ವದ ಪಕ್ಷ ಸೇರ್ಪಡೆಯಾಗುವುದಾಗಿ ಮಾಹಿತಿ ನೀಡಿದ್ದಾರೆ.
'ನಾನು ಬಿಜೆಪಿಯಿಂದ ಹೊರಗೆ ಹೋಗುತ್ತಿದ್ದೇನೆ. ದೇವೇಂದ್ರ ಫಡ್ನವೀಸ್ ಹೊರತಾಗಿ ಬೇರೆ ಯಾರ ವಿರುದ್ಧವೂ ನಾನು ಅಸಂತುಷ್ಟನಾಗಿಲ್ಲ. ನನಗೆ ಯಾವ ಭರವಸೆಯನ್ನೂ ನೀಡಿಲ್ಲ. ಎನ್ಸಿಪಿಯನ್ನು ಏಕಾಂಗಿಯಾಗಿ ಸೇರಿಕೊಳ್ಳುತ್ತಿದ್ದೇನೆ. ನನ್ನೊಂದಿಗೆ ಯಾವುದೇ ಶಾಸಕರು ಅಥವಾ ಸಂಸದರು ಇಲ್ಲ' ಎಂದು ತಿಳಿಸಿದ್ದಾರೆ.
ಪ್ರಧಾನಿ ಮೇಲಿನ ವಿಶ್ವಾಸದಿಂದ ಮಿತ್ರಪಕ್ಷಗಳಿಗೂ ಲಾಭ: ಫಡ್ನವೀಸ್
'ಶುಕ್ರವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಖಾಡ್ಸೆ ಅವರು ಎನ್ಸಿಪಿ ಸೇರ್ಪಡೆಯಾಗಲಿದ್ದಾರೆ. ಅವರ ಸೇರ್ಪಡೆ ಪಕ್ಷವನ್ನು ಮತ್ತಷ್ಟು ಬಲಗೊಳಿಸಲಿದೆ' ಎಂದು ಎನ್ಸಿಪಿ ರಾಜ್ಯ ಮುಖ್ಯಸ್ಥ ಜಯಂತ್ ಪಾಟೀಲ್ ಹೇಳಿದ್ದಾರೆ.
'ಏಕನಾಥ್ ಅವರು ನಮ್ಮ ನಾಯಕರಾಗಿದ್ದರು. ಇಂದು ಬೆಳಗಿನವರೆಗೂ ಅವರು ಬಿಜೆಪಿಯಲ್ಲಿದ್ದರು. ಪಕ್ಷದಲ್ಲಿಯೇ ಇರುವಂತೆ ಅವರ ಮನವೊಲಿಸಲು ಪ್ರಯತ್ನಿಸಿದ್ದೆವು. ಅವರ ಭವಿಷ್ಯದ ಪಯಣಕ್ಕೆ ಒಳಿತಾಗಲಿ' ಎಂದು ಬಿಜೆಪಿ ವಕ್ತಾರ ಕೇಶವ್ ಉಪಾಧ್ಯಾಯ ಹೇಳಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಏಕನಾಥ್ ಮತ್ತು ದೇವೇಂದ್ರ ಫಡ್ನವೀಸ್ ಅವರ ಮುನಿಸು ಬಹಿರಂಗವಾಗಿತ್ತು. 2019ರ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಅವರ ಮಗಳು ರೋಹಿಣಿ ಖಾಡ್ಸೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಪಕ್ಷದ ನಾಯಕರೆಡೆಗಿನ ಅವರ ಅಸಮಾಧಾನ ಮತ್ತಷ್ಟು ಹೆಚ್ಚಾಗಿತ್ತು.
"ಫಡ್ನವೀಸ್-ರಾವತ್ 2 ಗಂಟೆ ಟೀ-ಬಿಸ್ಕಟ್ ಬಗ್ಗೆ ಚರ್ಚಿಸಲು ಸಾಧ್ಯವೇ?"
2016ರಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ಸಚಿವ ಸ್ಥಾನದಿಂದ ಬಿಜೆಪಿ ಸರ್ಕಾರ ತೆಗೆದುಹಾಕಿತ್ತು. ಆಗಿನಿಂದಲೂ ಫಡ್ನವೀಸ್ ಮತ್ತು ಅವರ ನಡುವೆ ಅನೇಕ ಮಾತಿನ ಚಕಮಕಿಗಳು ನಡೆದಿದ್ದವು.