ಶಿವಸೇನೆ ಬಂಡಾಯದ ಸೀಕ್ರೇಟ್ ಬಿಚ್ಚಿಟ್ಟ ಮಹಾರಾಷ್ಟ್ರದ ದೇವೇಂದ್ರ!
ಮುಂಬೈ, ಜೂನ್ 30: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರದ ಕಥೆ ಮುಗಿಯಿತು. ಶಿವಸೇನೆಯಲ್ಲೇ ಇದ್ದು, ಶಿವಸೇನೆಯಲ್ಲೇ ಬೆಳೆದು, ಶಿವಸೇನೆಯ ವಿರುದ್ಧವೇ ತೊಡೆ ತಟ್ಟಿದ ನಾಯಕನಿಗೆ ಈಗ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿದೆ.
ರಾಜ್ಯದ 19ನೇ ಮುಖ್ಯಮಂತ್ರಿ ಆಗಿ ಅದೇ ಬಂಡಾಯ ನಾಯಕ ಏಕನಾಥ್ ಶಿಂಧೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಎಲ್ಲವೂ ಮುಗಿಯಿತು ಎನ್ನುವುದಕ್ಕೂ ಪೂರ್ವದಲ್ಲಿ ಇಬ್ಬರು ನಾಯಕರು ನಡೆಸಿದ ಅದೊಂದು ಜಂಟಿ ಸುದ್ದಿಗೋಷ್ಠಿಯು ಅಸಮಾಧಾನದ ಹೊಗೆಯ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದೆ.
Eknath Shinde Oath Taking Ceremony LIVE : ಸಿಎಂ ಆಗಿ ಏಕನಾಥ್ ಶಿಂಧೆ ಪದಗ್ರಹಣ
ಶಿವಸೇನೆಯ ವಿರುದ್ಧ ಏಕನಾಥ್ ಶಿಂಧೆ ಹಾಗೂ ಅವರೊಂದಿನ 40 ಮಂದಿ ಶಾಸಕರು ಆಕ್ರೋಶಗೊಂಡಿದ್ದು ಏಕೆ?, ಶಿವಸೇನೆಯಲ್ಲಿ ಸೃಷ್ಟಿಯಾದ ಬಂಡಾಯದ ಹಿಂದಿನ ಅಸಲಿ ಕಥೆ ಏನು?, ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಹೊರತಾಗಿಯೂ ಶಿವಸೇನೆಯ ಶಾಸಕರ ಮುನಿಸಿಗೆ ಕಾರಣವೊಂದಿತ್ತು. ಅದೇನು ಅಸಲಿ ಕಾರಣ ಎಂಬುದನ್ನು ಬಿಜೆಪಿಯ ನಾಯಕ ದೇವೇಂದ್ರ ಫಡ್ನವೀಸ್ ಬಿಚ್ಚಿಟ್ಟಿದ್ದಾರೆ.
ದಾವೂದ್ಗೆ ಸಹಾಯ ಮಾಡಿದವರೊಂದಿಗೆ ಅದೆಂಥಾ ಮೈತ್ರಿ?
"ಶಿವಸೇನೆ ಅಂದರೆ ಅದು ಮೊದಲಿನಿಂದಲೂ ದಾವೂವ್ ಇಬ್ರಾಹಿಂಗೆ ವಿರೋಧ ವ್ಯಕ್ತಪಡಿಸುತ್ತಿರುವ ಪಕ್ಷ. ಅಂಥದೊಂದು ಪಕ್ಷವು ಈಗ ದಾವೂದ್ಗೆ ಸಹಾಯ ಮಾಡಿದ ಆರೋಪದಲ್ಲಿ ಜೈಲು ಸೇರಿದ ವ್ಯಕ್ತಿಗಳನ್ನು ತಮ್ಮ ಸಂಪುಟದಲ್ಲಿ ಇಟ್ಟುಕೊಂಡಿದೆ. ಅದೇ ರೀತಿ ಸಾವರ್ಕರ್ ಅನ್ನು ಅವಮಾನಿಸಿದವರ ಜೊತೆ ಮೈತ್ರಿ ಮಾಡಿಕೊಂಡಿದ್ದು, ಸ್ವತಃ ಶಿವಸೇನೆಯವರಿಗೇ ಇಷ್ಟವಿರಲಿಲ್ಲ," ಎಂದು ದೇವೇಂದ್ರ ಫಡ್ನವಿಸ್ ಹೇಳಿದರು.
ಬಾಳಾಸಾಹೇಬ್ ವಿರೋಧಿಸಿದವರ ಜೊತೆಗೆ ಮೈತ್ರಿ ಸರ್ಕಾರ
ಕಳೆದ 2019ರಲ್ಲಿ ಬಿಜೆಪಿ ಮತ್ತು ಶಿವಸೇನೆಯು ಎಲ್ಲವೂ ಅಂದುಕೊಂಡಂತೆ ಮೈತ್ರಿಕೂಡವನ್ನು ರಚಿಸಿಕೊಂಡೆವು. ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಮೈತ್ರಿಕೂಟಕ್ಕೆ ಅಗತ್ಯ ಸಂಖ್ಯೆಗಳೂ ಸಿಕ್ಕಿದ್ದವು. ನಾವು ಸರ್ಕಾರ ರಚಿಸಲು ಬಯಸಿದ್ದೆವು. ಆದರೆ ಬಾಳಾಸಾಹೇಬ್ ತಮ್ಮ ಜೀವನದುದ್ದಕ್ಕೂ ಯಾರ ವಿರುದ್ಧ ಪ್ರತಿಭಟಿಸುತ್ತಾ ಬಂದಿದ್ದರೋ ಅವರ ಜೊತೆ ಶಿವಸೇನೆ ಮೈತ್ರಿ ಸರ್ಕಾರ ರಚಿಸುವುದಕ್ಕೆ ಮುಂದಾಯಿತು. ಹಿಂದುತ್ವ ಮತ್ತು ಸಾವರ್ಕರ್ ವಿರುದ್ಧ ಇರುವವರ ಜೊತೆ ಶಿವಸೇನೆ ಮೈತ್ರಿ ಮಾಡಿಕೊಂಡಿತು. ಆ ಮೂಲಕ ಶಿವಸೇನೆ ಜನರ ಆದೇಶವನ್ನು ಅವಮಾನಿಸಿತು ಎಂದು ದೇವೇಂದ್ರ ಫಡ್ನವೀಸ್ ಕಾರಣವನ್ನು ನೀಡಿದರು.
ಕಾಂಗ್ರೆಸ್ ಎನ್ಸಿಪಿ ಮೈತ್ರಿ ವಿರೋಧಿಸಿದ್ದಕ್ಕೆ ನಿರ್ಲಕ್ಷ್ಯ
ಶಿವಸೇನೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗುವುದಕ್ಕೆ ಮುಖ್ಯಮಂತ್ರಿ ಮಹಾ ವಿಕಾಸ ಅಘಾಡಿ ಮೈತ್ರಿಯೂ ಮುಖ್ಯ ಕಾರಣವಾಗಿತ್ತು. ಕಾಂಗ್ರೆಸ್ ಮತ್ತು ಎನ್ಸಿಪಿಯೊಂದಿಗಿನ ಮೈತ್ರಿಯನ್ನು ಕೊನೆಗೊಳಿಸಬೇಕು ಎಂದು ಶಿವಸೇನಾ ಶಾಸಕರೇ ಒತ್ತಾಯಿಸುತ್ತಿದ್ದರು. ಆದರೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಂದು, ಈ ಶಾಸಕರನ್ನು ನಿರ್ಲಕ್ಷಿಸಿದರು. ಅಷ್ಟೇ ಅಲ್ಲದೇ ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ಬೇರೆ ಶಾಸಕರಿಗೆ ಮಾತ್ರ ಆದ್ಯತೆ ನೀಡುವುದಕ್ಕೆ ಶುರು ಮಾಡಿದರು. ಅದಕ್ಕಾಗಿಯೇ ಶಿವಸೇನೆಯ ಶಾಸಕರು ಬಂಡಾಯ ಬಾವುಟವನ್ನು ಹಾರಿಸಿದರು ಎಂಬ ಸೀಕ್ರೇಟ್ ಅನ್ನು ದೇವೇಂದ್ರ ಫಡ್ನವಿಸ್ ಬಿಚ್ಚಿಟ್ಟರು.
ಬಿಜೆಪಿಯು ಸರ್ಕಾರದಿಂದ ಹೊರಗೆ ಇರುತ್ತೇವೆ
ಗುರುವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಮಾಣವಚನ ಕಾರ್ಯಕ್ರಮದ ನಂತರದಲ್ಲಿ ಸಂಪುಟ ವಿಸ್ತರಣೆ ಪ್ರಕ್ರಿಯೆಯು ನಡೆಯಲಿದೆ. ಈ ವೇಳೆ ಶಿವಸೇನೆ ಮತ್ತು ಬಿಜೆಪಿ ನಾಯಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ ನಾನು ಸರ್ಕಾರದಿಂದ ಹೊರಗೆ ಉಳಿಯುತ್ತೇನೆ ಎಂದು ದೇವೇಂದ್ರ ಫಡ್ನವೀಸ್ ಹೇಳಿದರು. ಆ ಮೂಲಕ ತಾವೇ ಮುಂದಿನ ಮುಖ್ಯಮಂತ್ರಿ ಎನ್ನುವ ಎಲ್ಲಾ ಊಹಾಪೋಹಗಳಿಗೆ ಅಂತ್ಯ ಹಾಡಿದರು.
ಇದಕ್ಕೂ ಮೊದಲು ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ಅನ್ನೇ ಆಯ್ಕೆ ಮಾಡಲಾಗುವುದು. ಬಿಜೆಪಿಯ ಜೊತೆಗೆ ಬಂಡಾಯ ಶಾಸಕರು ಮೈತ್ರಿ ಮಾಡಿಕೊಂಡರೆ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಸುದ್ದಿ ಎಲ್ಲೆಲ್ಲೂ ಗುಲ್ಲಾಗಿತ್ತು. ಆದರೆ ಅಂತಿಮವಾಗಿ ಸುದ್ದಿಗೋಷ್ಠಿ ನಡೆಸುವ ಮೂಲಕ ಎಲ್ಲ ಸುದ್ದಿಗಳಿಗೆ ಸ್ವತಃ ದೇವೇಂದ್ರ ಫಡ್ನವೀಸ್ ಫುಲ್ ಸ್ಟಾಪ್ ಇಟ್ಟರು.