ಪರಾರಿಯಾಗಿದ್ದ ಐಎಂ ಭಯೋತ್ಪಾದಕ ಸಿಕ್ಕಿಬಿದ್ದ
ರುಪಾಡಿಯಾ ರೇಲ್ವೆ ನಿಲ್ದಾಣದಲ್ಲಿ ನಿಂತಿದ್ದ 38 ವರ್ಷದ ಉಸ್ಮಾನಿಯನ್ನು ಭಾನುವಾರ ಬೆಳಗಿನ ಜಾವ 3 ಗಂಟೆಯಲ್ಲಿ ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಮುಖ್ಯಸ್ಥ ರಾಕೇಶ್ ಮಾರಿಯಾ ತಿಳಿಸಿದ್ದಾರೆ.
ಉಗ್ರ ಉಸ್ಮಾನಿಯ ವಿರುದ್ಧ 2008ರ ಅಹಮದಾಬಾದ್ ಬಾಂಬ್ ಸ್ಫೋಟದಲ್ಲಿ ಭಾಗಿಯಾದ ಆರೋಪವಿದೆ. ಉಸ್ಮಾನಿಯಗೆ ತಪ್ಪಿಸಿಕೊಳ್ಳಲು ಸಹಕಾರ ನೀಡಿದ್ದ ಅವನ ಸೋದರಳಿಯ ಜಾವೆದ್ ನೂರುಲ್ಲಾ ಹುಸೇನ್ ಖಾನ್ (19) ನನ್ನು ಅ. 25ರಂದು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಜಾವೇದ್ ನೀಡಿದ ಮಾಹಿತಿ ಆಧಾರದ ಮೇಲೆ ಉಸ್ಮಾನಿಯನನ್ನು ಬಂಧಿಸಲಾಗಿದೆ.
ಸೆ. 20ರಂದು ಕೋರ್ಟ್ ಆವರಣದಿಂದ ಇಳಿದು ಮೂರನೆಯ ಅಂತಸ್ತಿಗೆ ತೆರಳುತ್ತಿದ್ದಾಗ ಉಸ್ಮಾನಿಯ ಜತೆಗಿದ್ದ ಜಾವೆದ್ ಇಂದೋರ್, ಅಲ್ಲಿಂದ ಭೋಪಾಲ್ ನಂತರ ಜಬಲ್ ಪುರಕ್ಕೆ ಪ್ರಯಾಣಿಸಿದ್ದ. ಆ ಬಳಿಕ ತನ್ನ ಗುರುತು ಮರೆಮಾಚುವ ಸಂಬಂಧ ಒಂದಷ್ಟು ದಾಖಲೆಗಳನ್ನು ತರುವಂತೆ ಜಾವೇದ್ ನನ್ನು ಉಸ್ಮಾನಿಯಾ ವಾಪಸ್ ಮುಂಬೈಗೆ ಕಳುಹಿಸಿದ್ದ.
ಆ ವೇಳೆ ಜಾವೇದ್ ಪೊಲೀಸರ ಬಲೆಗೆ ಬಿದ್ದಿದ್ದ. ಅವನು ನೀಡಿದ ಸುಳಿವಿನಂತೆ ಪೊಲೀಸರು ಬಹರೈಚ್ ಜಿಲ್ಲೆಯ ತಟೇರ ಗ್ರಾಮಕ್ಕೆ ತೆರಳಿದ್ದರು. ಆದರೆ, ಅಲ್ಲಿಂದಲೂ ಉಸ್ಮಾನಿಯ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಆದರೆ, ರೇಲ್ವೆ ನಿಲ್ದಾಣದಲ್ಲಿ ಇದೀಗ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.