ಲಾಕ್ಡೌನ್ ಭೀತಿ: ವಲಸೆ ಕಾರ್ಮಿಕರ ಎದೆಯಲ್ಲಿ ಹೆಚ್ಚಿದ ಢವಢವ!
ಮುಂಬೈ, ಮಾರ್ಚ್ 30: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಹೆಚ್ಚಾಗುತ್ತಿದೆ. ಕಳೆದ 2020ರ ಮಾರ್ಚ್ ತಿಂಗಳಿನಲ್ಲೇ ಕೊವಿಡ್-19 ಸೋಂಕಿನ ನಿಯಂತ್ರಿಸುವ ಉದ್ದೇಶದಿಂದ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿತ್ತು. 2021ರ ಮಾರ್ಚ್ ತಿಂಗಳಿನಲ್ಲೇ ಮತ್ತೊಮ್ಮೆ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ವಲಸೆ ಕಾರ್ಮಿಕರನ್ನು ಚಿಂತೆಗೀಡು ಮಾಡಿದೆ.
ರಾಜ್ಯದಲ್ಲಿ ಮತ್ತೊಂದು ಬಾರಿ ಲಾಕ್ ಡೌನ್ ಘೋಷಣೆ ಆಗುತ್ತದೆಯೇ ಎಂಬ ಭಯ ವಲಸೆ ಕಾರ್ಮಿಕರನ್ನು ಕಾಡುತ್ತಿದೆ. ಇದೇ ಭೀತಿಯಲ್ಲಿ ಕೆಲವು ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಮರಳುವ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ.
ಕಳೆದ 2020ರ ಮಾರ್ಚ್ 24ರಂದು ದೇಶಾದ್ಯಂತ ಮೊದಲ ಬಾರಿ ಭಾರತ ಲಾಕ್ ಡೌನ್ ಘೋಷಿಸಲಾಗಿತ್ತು. ಅಂದು ಸಾವಿರಾರು ವಲಸೆ ಕಾರ್ಮಿಕರು ನೆಲೆ ಇಲ್ಲದೇ, ಹಸಿವು ನೀಗಿಸಿಕೊಳ್ಳುವುದಕ್ಕೂ ಆಗದೇ ನಡೆದುಕೊಂಡೇ ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಈ ಮಧ್ಯೆ ಸಾಕಷ್ಟು ಕಾರ್ಮಿಕರು ಮಾರ್ಗಮಧ್ಯೆದಲ್ಲೇ ಊಟ, ನೀರು ಇಲ್ಲದೇ ಪ್ರಾಣ ಬಿಟ್ಟಿದ್ದರು. ಕಳೆದ ಬಾರಿಯ ಕರಾಳ ಅನುಭವದಿಂದ ಪಾಠ ಕಲಿತ ವಲಸೆ ಕಾರ್ಮಿಕರು ಈ ಬಾರಿ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.
ಇನ್ನೂ ಲಾಕ್ ಡೌನ್ ಘೋಷಿಸಿಲ್ಲ ಮಹಾರಾಷ್ಟ್ರ ಸರ್ಕಾರ
ಮಹಾರಾಷ್ಟ್ರದಲ್ಲಿ ಪ್ರತಿನಿತ್ಯ ಸಾವಿರಾರು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಸೋಂಕು ಹರಡುವಿಕೆ ಕಡಿವಾಣಕ್ಕೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆಯೇ ವಿನಃ ಸಂಪೂರ್ಣ ಲಾಕ್ ಡೌನ್ ಬಗ್ಗೆ ಯಾವುದೇ ರೀತಿ ಅಧಿಕೃತ ಘೋಷಣೆಗಳನ್ನು ಸರ್ಕಾರ ಹೊರಡಿಸಿಲ್ಲ. ಆದರೆ ಪ್ರಸ್ತುತ ಸೋಂಕಿತ ಪ್ರಕರಣಗಳ ಏರಿಕೆಯು ವಲಸೆ ಕಾರ್ಮಿಕರಲ್ಲಿ ನಡುಕ ಹುಟ್ಟಿಸುತ್ತಿದೆ. ಮೊದಲು ತಮ್ಮೂರಿಗೆ ಸೇರಿದರೆ ಸಾಕು ಎನ್ನುವಂತಾ ಸ್ಥಿತಿ ನಿರ್ಮಾಣವಾಗಿದೆ.
"ಉತ್ತರ ಪ್ರದೇಶದ ಮನೆಗೆ ಹೋಗಲು 3000 ರೂ."
2020ರ ಮಾರ್ಚ್ ತಿಂಗಳಿನಲ್ಲಿ ಘೋಷಿಸಿದ ಭಾರತ್ ಲಾಕ್ ಡೌನ್ ಸಂದರ್ಭದಲ್ಲಿ ಎದುರಿಸಿದ ಸಮಸ್ಯೆ ಬಗ್ಗೆ ಗಾರ್ಮೆಂಟ್ ಕಾರ್ಮಿಕ ಮೆಹಬೂಬ್ ಅಲಿ ಬಿಚ್ಚು ನುಡಿಗಳಲ್ಲಿ ಹೇಳಿದ್ದಾರೆ. "ಪ್ರಸಕ್ತ ಬೆಳವಣಿಗೆಯನ್ನು ಪ್ರತಿನಿತ್ಯ ನೋಡುತ್ತಿದ್ದೇವೆ. ಈವರೆಗೂ ಲಾಕ್ ಡೌನ್ ಘೋಷಣೆಯಾಗಿಲ್ಲ ನಿಜ. ಆದರೆ ಹಿಂದಿನಂತೆ ಸಮಸ್ಯೆ ಎದುರಿಸಲು ನಾನು ಸಿದ್ಧವಿಲ್ಲ. ಕಳೆದ ಬಾರಿ ಆದಾಯವೇ ಇಲ್ಲದಂತಾ ಸಂದರ್ಭದ ನಡುವೆಯೂ ಉತ್ತರ ಪ್ರದೇಶದ ನಮ್ಮೂರಿಗೆ ಟ್ರಕ್ ನಲ್ಲಿ ಹೋಗಲು 3000 ರೂಪಾಯಿ ಖರ್ಚು ಮಾಡಬೇಕಾಯಿತು. ಇದೀಗ ಸ್ವಗ್ರಾಮಕ್ಕೆ ತೆರಳುವುದಕ್ಕಾಗಿ ಟಿಕೆಟ್ ಕಾಯ್ದಿರಿಸಲು ಹೋದರೆ ಏಪ್ರಿಲ್ 8ರವರೆಗೂ ರೈಲುಗಳೇ ಇಲ್ಲ ಎಂದು ಬುಕ್ಕಿಂಗ್ ಕೇಂದ್ರದಲ್ಲಿ ಹೇಳುತ್ತಿದ್ದಾರೆ" ಎಂದು ಮೆಹಬೂಬ್ ಅಲಿ ಹೇಳಿದ್ದಾರೆ.
"ಈ ಬಾರಿಯಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ"
ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ ನಂತರದಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಬಗ್ಗೆ ಮರು ಆಲೋಚನೆ ನಡೆಸಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಈ ಬಾರಿಯಾದರೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೂಲಿ ಕಾರ್ಮಿಕರ ಸಂಘದ ಉಸ್ತುವಾರಿ ಮುನ್ನಾಗಿರಿ ಸಲಹೆ ನೀಡಿದ್ದಾರೆ. ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿ 4-5 ತಿಂಗಳ ನಂತರದಲ್ಲಿ ಮತ್ತೆ ನಾವು ಕೆಲಸಕ್ಕೆ ಹಾಜರಾಗಿದ್ದೇವೆ. ಇದೀಗ ಮತ್ತೆ ಲಾಕ್ ಡೌನ್ ಜಾರಿಗೊಳಿಸಿದರೆ ಮತ್ತೆ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಸರ್ಕಾರವು ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದರು.
ಲಾಕ್ ಡೌನ್ ಜಾರಿಗೊಳಿಸಲಾಗುತ್ತೆಯೇ ಎಂಬ ಪ್ರಶ್ನೆ
ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗುತ್ತದೆಯೇ ಎಂಬ ಬಗ್ಗೆ ಕಾರ್ಮಿಕರು ಚಿಂತಾಕ್ರಾಂತರಾಗಿದ್ದಾರೆ. ಪ್ರತಿನಿತ್ಯ 10ಕ್ಕಿಂತ ಹೆಚ್ಚು ಕಾರ್ಮಿಕರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ಕೂಲಿ ಕಾರ್ಮಿಕರೊಂದಿಗೆ ಕಾರ್ಯ ನಿರ್ವಹಿಸುವ NGO ಅಧಿಕಾರಿ ದೀಪಕ್ ಹೇಳಿದ್ದಾರೆ. ಲಾಕ್ ಡೌನ್ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಘೋಷಣೆಯನ್ನು ಹೊರಡಿಸಿಲ್ಲ. ಆದರೆ ಈ ಘೋಷಣೆ ಹೊರಡಿಸುವುದಕ್ಕೂ ಮೊದಲು ಸ್ವಲ್ಪ ಮೊದಲೇ ಈ ಬಗ್ಗೆ ಎಚ್ಚರಿಕೆ ನೀಡಬೇಕು ಎನ್ನುವುದು ಸಾಕಷ್ಟು ಕಾರ್ಮಿಕರ ಮನವಿಯಾಗಿದೆ ಎಂದು ದೀಪಕ್ ತಿಳಿಸಿದ್ದಾರೆ.
ಒಂದೇ ದಿನ 31643 ಜನರಿಗೆ ಕೊವಿಡ್-19 ಸೋಂಕು
ರಾಜ್ಯದಲ್ಲಿ ಒಂದೇ ದಿನ 31643 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣ ಸಂಖ್ಯೆ 27,45,518ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 3,36,584 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಒಂದೇ ದಿನ ಮಹಾಮಾರಿ ಕೊವಿಡ್-19 ಸೋಂಕಿಗೆ 102 ಮಂದಿ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 54,283ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 20,854 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖ ಪ್ರಕರಣಗಳ ಸಂಖ್ಯೆ 23,53,307ಕ್ಕೆ ಏರಿಕೆಯಾಗಿದೆ.
Recommended Video