ಮಹಾರಾಷ್ಟ್ರ: ಓಮಿಕ್ರಾನ್ ಅಪಾಯದಲ್ಲಿರುವ ದೇಶದಿಂದ ಬಂದವರಿಗೆ 7 ದಿನ ಸಾಂಸ್ಥಿಕ ಕ್ವಾರೆಂಟೈನ್
ನವದೆಹಲಿ, ಡಿಸೆಂಬರ್ 1: ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರು ಏಳು ದಿನಗಳವರೆಗೂ ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿ ಇರುವುದು ಕಡ್ಡಾಯ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.
ಮುಂಬೈ ವಿಮಾನ ನಿಲ್ದಾಣದ ಮೂಲಗಳು ಪ್ರಯಾಣಿಕರನ್ನು ಕಡ್ಡಾಯ ಐಸೋಲೇಶನ್ ಸೌಲಭ್ಯಗಳಲ್ಲಿ ಇರಿಸುವ ಆದೇಶವನ್ನು ತಕ್ಷಣವೇ ಜಾರಿಗೆ ತರಲಾಗುವುದು. ಪ್ರಯಾಣಿಕರು ಗೊತ್ತುಪಡಿಸಿದ ಹೋಟೆಲ್ಗಳಲ್ಲಿ ಕ್ವಾರಂಟೈನ್ಗಾಗಿ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಹೊಸ ರೂಪಾಂತರಿ ಓಮಿಕ್ರಾನ್ ಒಂದೇ ಒಂದು ಪ್ರಕರಣವಿಲ್ಲ
ಈ ಆದೇಶವು ರಾಜ್ಯ ವಿಮಾನ ನಿಲ್ದಾಣಗಳಲ್ಲಿ ಗೊಂದಲವನ್ನು ಉಂಟುಮಾಡಬಹುದು. ಏಕೆಂದರೆ ಅನೇಕ ಪ್ರಯಾಣಿಕರು ಮಹಾರಾಷ್ಟ್ರದ ಮಾರ್ಗವಾಗಿ ಬೇರೆ ಕಡೆಗಳಿಗೆ ಪ್ರಯಾಣಿಸುತ್ತಾರೆ. ಅಂಥ ಪ್ರಯಾಣಿಕರು ಸಾಂಸ್ಥಿಕ ಕ್ವಾರೆಂಟೈನ್ ಆಗಬೇಕೇ, ಅವರು ಕ್ವಾರೆಂಟೈನ್ ಶುಲ್ಕವನ್ನು ಪಾವತಿಸಬೇಕೇ ಎಂಬುದು ಗೊಂದಲವನ್ನು ಸೃಷ್ಟಿಸುವಂತಿದೆ.
7 ದಿನಗಳಲ್ಲಿ ಮೂರು ಬಾರಿ ಕೊವಿಡ್-19 ಪರೀಕ್ಷೆ
ಓಮಿಕ್ರಾನ್ ರೂಪಾಂತರ ವೈರಸ್ ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರಿಗೆ 7 ದಿನಗಳವರೆಗೆ ಸಾಂಸ್ಥಿಕ ಕ್ವಾರೆಂಟೈನ್ ಕಡ್ಡಾಯಗೊಳಿಸಲಾಗುತ್ತಿದೆ. ಈ ಏಳು ದಿನಗಳ ಅವಧಿಯಲ್ಲಿ ಮೂರು ಬಾರಿ RT-PCR ಪರೀಕ್ಷೆ ನಡೆಸಲಾಗುತ್ತದೆ. ಪ್ರಯಾಣಿಕರು ಆಗಮಿಸಿದ ಎರಡನೇ ದಿನ, ನಾಲ್ಕನೇ ದಿನ ಹಾಗೂ ಏಳನೇ ದಿನ RT-PCR ಪರೀಕ್ಷೆ ನಡೆಸಲಾಗುವುದು ಎಂದು ತಿಳಿದು ಬಂದಿದೆ.
ಓಮಿಕ್ರಾನ್ ರೂಪಾಂತರ ತಡೆಗೆ ಕೇಂದ್ರದ ಮಾರ್ಗಸೂಚಿ
ಕಳೆದ ನವೆಂಬರ್ 28ರಂದು ಕೇಂದ್ರ ಸರ್ಕಾರವು ಓಮಿಕ್ರಾನ್ ರೂಪಾಂತರ ವೈರಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಷ್ಕೃತ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಅದರ ಅಡಿಯಲ್ಲಿ ಕನಿಷ್ಠ ನಿರ್ಬಂಧಗಳ ಮೇಲೆ ಕಾರ್ಯ ನಿರ್ವಹಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ವಿದೇಶಿ ಪ್ರಯಾಣಿಕರು ಪರೀಕ್ಷೆ ವೇಳೆ ಪಾಸಿಟಿವ್ ಎಂದು ಬಂದರೆ, ಅಂಥವರನ್ನು ಆಸ್ಪತ್ರೆಗೆ ರವಾನಿಸಲಾಗುವುದು. ನೆಗೆಟಿವ್ ವರದಿ ಹೊಂದಿದವರನ್ನು ಹೆಚ್ಚುವರಿ 7 ದಿನಗಳವರೆಗೆ ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿ ಇರಿಸಲಾಗುವುದು ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ತಮ್ಮ ಪ್ರಯಾಣದ ಹಿನ್ನೆಲೆ ಬಗ್ಗೆ ಘೋಷಣೆ ಪತ್ರ
ಜಗತ್ತಿನಲ್ಲಿ ಒಟ್ಟು 14 ರಾಷ್ಟ್ರಗಳು ಓಮಿಕ್ರಾನ್ ರೂಪಾಂತರ ವೈರಸ್ ಭೀತಿಯನ್ನು ಎದುರಿಸುತ್ತಿವೆ. ಇವುಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ಇಸ್ರೇಲ್ ಸೇರಿವೆ. 'ಓಮಿಕ್ರಾನ್ ಅಪಾಯದಲ್ಲಿರುವ' 14 ದೇಶಗಳಿಂದ ಭಾರತಕ್ಕೆ ಪ್ರವೇಶಿಸುವ ಪ್ರಯಾಣಿಕರಿಗೆ ಕಟ್ಟುನಿಟ್ಟಾದ ಸ್ಕ್ರೀನಿಂಗ್ ಅನ್ನು ಮಾರ್ಗಸೂಚಿಗಳು ಸೂಚಿಸುತ್ತವೆ.
ಮಹಾರಾಷ್ಟ್ರಕ್ಕೆ ಪ್ರಯಾಣಿಸುವ ಅಂತರರಾಷ್ಟ್ರೀಯ ಪ್ರಯಾಣಿಕರು ಕಳೆದ 15 ದಿನಗಳಲ್ಲಿ ತಾವು ಭೇಟಿ ನೀಡಿದ ದೇಶಗಳ ವಿವರವಾದ ಘೋಷಣೆ ಪತ್ರವನ್ನು ಸಲ್ಲಿಸಬೇಕು. ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಅದನ್ನು ಮರು-ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಮಾಹಿತಿಯು ತಪ್ಪಾಗಿದ್ದರೆ, ಅಂಥ ಪ್ರಯಾಣಿಕರ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆ, 2005 ರ ಸೆಕ್ಷನ್ಗಳ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು.
ಓಮಿಕ್ರಾನ್ ಅಪಾಯದಲ್ಲಿರದ ದೇಶಗಳ ಪ್ರಯಾಣಿಕರಿಗೆ ಮಾರ್ಗಸೂಚಿ
ಕೇಂದ್ರ ಸರ್ಕಾರವು ಓಮಿಕ್ರಾನ್ ಅಪಾಯದಲ್ಲಿರುವ ರಾಷ್ಟ್ರಗಳನ್ನು ಪಟ್ಟಿ ಮಾಡಿದೆ. ಈ ದೇಶಗಳ ಹೊರತಾಗಿ ಇತರ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಆರ್ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಪರೀಕ್ಷೆಯ ನಂತರ ನೆಗೆಟಿವ್ ವರದಿ ಬಂದರೆ ಮನೆಯಲ್ಲಿ ಎರಡು ವಾರಗಳವರೆಗೆ ಕ್ವಾರೆಂಟೈನ್ ಆಗುವಂತೆ ಸೂಚಿಸಲಾಗುತ್ತದೆ. ಸೋಂಕು ಪಾಸಿಟಿವ್ ಇದ್ದರೆ ಅವರನ್ನು ಆಸ್ಪತ್ರೆಗೆ ರವಾನಿಸಲಾಗುತ್ತದೆ.
ವಿದೇಶದಿಂದ ಆಗಮಿಸಿದ ಪ್ರಯಾಣಿಕರು ಭಾರತದ ಇತರೆ ವಿಮಾನ ನಿಲ್ದಾಣಕ್ಕೆ ತೆರಳಬೇಕಾಗಿದ್ದರೂ, ಪರೀಕ್ಷೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಮಹಾರಾಷ್ಟ್ರದ ಯಾವುದೇ ವಿಮಾನ ನಿಲ್ದಾಣಕ್ಕೆ ಮೊದಲು ಬಂದಿಳಿಯುವ ಪ್ರಯಾಣಿಕರು ಕಡ್ಡಾಯವಾಗಿ RT-PCR ಪರೀಕ್ಷೆಗೆ ಒಳಗಾಗಬೇಕು. ಸೋಂಕಿನ ನೆಗೆಟಿವ್ ವರದಿ ಬಂದ ನಂತರವಷ್ಟೇ ಅಂಥವರಿಗೆ ಮುಂದಿನ ವಿಮಾನವನ್ನು ಏರುವುದಕ್ಕೆ ಅವಕಾಶ ನೀಡಲಾಗುವುದು. ರಾಜ್ಯದ ಮಾರ್ಗವಾಗಿ ಬೇರೆ ರಾಜ್ಯಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಸಹ ನೇರವಾಗಿ ರಾಜ್ಯಕ್ಕೆ ಇಳಿಯುವವರು ಪಾಲಿಸುವ ಎಲ್ಲ ನಿಯಮಗಳಿಗೆ ಒಳಪಟ್ಟಿರುತ್ತಾರೆ.
ರಾಜ್ಯದೊಳಗಿನ ಪ್ರಯಾಣಿಕರಿಗೆ ಯಾವ ನಿಯಮ?:
ರಾಜ್ಯದೊಳಗೆ ಪ್ರಯಾಣಿಸುವ ದೇಶೀಯ ಪ್ರಯಾಣಿಕರು ಸಂಪೂರ್ಣ ಲಸಿಕೆಯನ್ನು ಪಡೆದುಕೊಂಡಿರಬೇಕು. ಅಥವಾ ಆಗಮನದ 48 ಗಂಟೆಗಳ ಒಳಗೆ ನಡೆಸಿದ RT-PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ಹೊಂದಿರಬೇಕು. ಇತರ ರಾಜ್ಯಗಳ ದೇಶೀಯ ಪ್ರಯಾಣಿಕರು ಸಹ ಆಗಮಿಸಿದ 48 ಗಂಟೆಗಳ ಒಳಗೆ ನಡೆಸಿದ RT-PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ತೆಗೆದುಕೊಂಡು ಹೋಗಬೇಕು.
Recommended Video