ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆ: 13 ನಕ್ಸಲರು ಎನ್ಕೌಂಟರ್ನಲ್ಲಿ ಹತ್ಯೆ
ಮುಂಬೈ, ಮೇ 21: ಮಹಾರಾಷ್ಟ್ರದಲ್ಲಿ ಪೊಲೀಸರು ಹಾಗೂ ನಕ್ಸಲರ ಮಧ್ಯೆ ನಡೆದ ಗುಂಡಿನ ಕಾದಾಟದಲ್ಲಿ 13 ನಕ್ಸಲರು ಸಾವನ್ನಪ್ಪಿದ್ದಾರೆ. ಪೂರ್ವ ವಿದರ್ಭದ ಗಡ್ಚಿರೋಲಿಯ ಪೊಟೆಗಾಂವ್ ಮತ್ತು ರಜೋಲಿ ನಡುವಿನ ಕಾಡಿನಲ್ಲಿ ಶುಕ್ರವಾರ ಭದ್ರತಾ ಪಡೆ ನಕ್ಸಲರ ಮೇಲೆ ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರ ಪೊಲೀಸರ ಸಿ-60 ವಿಭಾಗದ ಸಿಬ್ಬಂದಿಗಳು ಹಳ್ಳಿಯೊಂದರ ಬಳಿ ಶಿಬಿರ ಮಾಡಿಕೊಂಡಿದ್ದ ನಕ್ಸಲರ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಿಂದ ಕೆಲವು ಶಸ್ತ್ರಾಸ್ತ್ರಗಳು, ಗಣನೀಯ ಪ್ರಮಾಣದ ಸಾಹಿತ್ಯ ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಗಡ್ಚಿರೋಲಿಯ ಡಿಐಜಿ ಸಂದೀಪ್ ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದು ಈ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರ ಪೊಲೀಸರಿಗೆ ದೊಡ್ಡ ಯಶಸ್ಸು ದೊರೆತಿದ್ದು ಎನ್ಕೌಂಟರ್ನಲ್ಲಿ ಮತ್ತಷ್ಟು ನಕ್ಸಲರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಈ ಭಾಗ ಕಾಡಿನಲ್ಲಿ ನಕ್ಸಲರ ಇರುವಿಕೆಯ ಬಗ್ಗೆ ಮಾಹಿತಿ ಪಡೆದ ನಂತರ ನಾವು ಕಾರ್ಯಾಚರಣೆಯನ್ನು ಆರಂಭಿಸಿದೆವು. ಇಲ್ಲಿಯ ವರೆಗೂ 13 ನಕ್ಸಲರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಕೂಡ ಹುಟುಕಾಟವನ್ನು ಮುಂದುವರಿಸಲಾಗಿದೆ ಎಂದು ಡಿಐಜಿ ಸಂದೀಪ್ ಪಾಟೀಲ್ ಮಾಹಿತಿಯನ್ನು ನೀಡಿದ್ದಾರೆ.