ಲಖೀಂಪುರ್ ಖೇರಿಯಲ್ಲಿ ರೈತರ ಮೇಲಿನ ಹಿಂಸಾಚಾರ ಖಂಡಿಸಿ ಮಹಾರಾಷ್ಟ್ರ ಬಂದ್ಗೆ ಕರೆ
ಮುಂಬೈ, ಅಕ್ಟೋಬರ್ 11: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರ ಮೇಲಿನ ಹಿಂಸಾಚಾರವನ್ನು ಖಂಡಿಸಿ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ಸೋಮವಾರ ರಾಜ್ಯಾದ್ಯಂತ ಬಂದ್ಗೆ ಕರೆ ನೀಡಿದೆ. ಅಂಗಡಿ ಮುಂಗಟ್ಟುಗಳು ರೈತರನ್ನು ಬೆಂಬಲಿಸಿ ಸ್ವಯಂಪ್ರೇರಿತವಾಗಿ ಬಂದ್ ಆಗಲಿವೆ. ಮಹಾರಾಷ್ಟ್ರದಲ್ಲಿ ಬಂದ್ ಕುರಿತು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳನ್ನು ಮುಂದೆ ಓದಿ.
ಮಹಾರಾಷ್ಟ್ರ ಬಂದ್ ಕುರಿತು ಪ್ರಮುಖ ಅಂಶಗಳು:
* ಶಿವಸೇನೆ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಅಥವಾ ಎನ್ಸಿಪಿ ಒಳಗೊಂಡ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರ ಬಂದ್ಗೆ ಬೆಂಬಲ ನೀಡುತ್ತಿದೆ. ರಾಜ್ಯ ಸರ್ಕಾರದ ಮೂರು ಪಕ್ಷಗಳು ಸೇರಿ ಬಂದ್ ಘೋಷಿಸಿವೆ.
ಲಖೀಂಪುರ್ ಖೇರಿ ಹಿಂಸಾಚಾರ ಖಂಡಿಸಿ ಅ.18ರಂದು ರಾಷ್ಟ್ರವ್ಯಾಪಿ ರೈಲುತಡೆ
* "ರೈತರನ್ನು ಬೆಂಬಲಿಸುವಂತೆ ನಾನು ಮಹಾರಾಷ್ಟ್ರದ 12 ಕೋಟಿ ಜನರನ್ನು ವಿನಂತಿಸುತ್ತೇನೆ. ಬೆಂಬಲ ಎಂದರೆ ನೀವೆಲ್ಲರೂ ಬಂದ್ಗೆ ಕೈಜೋಡಿಸಿ ಮತ್ತು ಒಂದು ದಿನದ ಮಟ್ಟಿಗೆ ನಿಮ್ಮ ಕೆಲಸವನ್ನು ನಿಲ್ಲಿಸಿ" ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ತಿಳಿಸಿದ್ದಾರೆ.
* ಅಗತ್ಯ ಸೇವೆಗಳಿಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ, ಅದರ ಹೊರತಾಗಿ ಎಲ್ಲ ಅಂಗಡಿ ಮುಂಗಟ್ಟು ಮತ್ತು ಸೇವೆಗಳನ್ನು ಬಂದ್ ಮಾಡಲಾಗುವುದು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಥವಾ ದಿನಸಿ ಮಾರುಕಟ್ಟೆಯನ್ನೂ ಕೂಡ ಮುಚ್ಚಲಾಗುವುದು ಎಂದು ರಾಜ್ಯ ಸರ್ಕಾರವೇ ಹೇಳಿದೆ.
* ಶಿವಸೇನೆಯ ನಾಯಕ ಸಂಜಯ್ ರಾವುತ್ ತಮ್ಮ ಪಕ್ಷವು ಸಂಪೂರ್ಣ ಬಂದ್ನಲ್ಲಿ ಭಾಗವಹಿಸಲಿದೆ ಎಂದು ಹೇಳಿದ್ದಾರೆ. "ಎಲ್ಲಾ ಮೂರು ಪಕ್ಷಗಳು ಬಂದ್ನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತವೆ. ಲಖಿಂಪುರ್ ಖೇರಿಯಲ್ಲಿ ನಡೆದದ್ದು ಸಂವಿಧಾನದ ಕೊಲೆ, ಕಾನೂನಿನ ಉಲ್ಲಂಘನೆ ಮತ್ತು ದೇಶದ ರೈತರನ್ನು ಕೊಲ್ಲುವ ಸಂಚು" ಎಂದು ರಾವತ್ ಆರೋಪಿಸಿದ್ದಾರೆ.
* ಮಹಾರಾಷ್ಟ್ರ ಬಂದ್ನಿಂದ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮೂರು ಕಂಪನಿಗಳು, 500 ಗೃಹರಕ್ಷಕ ದಳ ಮತ್ತು 700 ಇತರ ಪಡೆಗಳನ್ನು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಿಯೋಜಿಸಲಾಗಿದೆ.
* ಮಹಾರಾಷ್ಟ್ರದ ವ್ಯಾಪಾರಿಗಳ ಒಕ್ಕೂಟವು ಈ ಮೊದಲು ರಾಜ್ಯ ಸರ್ಕಾರವು ಸೋಮವಾರ ಬಂದ್ಗೆ ಕರೆ ನೀಡುವುದನ್ನು ವಿರೋಧಿಸಿ ಬಂದ್ಗೆ ಬೆಂಬಲ ನೀಡಲು ನಿರ್ಧರಿಸಿದೆ. "ಶಿವಸೇನೆ ಮತ್ತು ಇತರ ಪಕ್ಷದ ನಾಯಕರ ಮನವಿ ಮೇರೆಗೆ ರೈತರ ಹತ್ಯೆಯನ್ನು ವಿರೋಧಿಸಿ ಮಹಾ ವಿಕಾಸ ಅಘಾದಿ ಸರ್ಕಾರ ಬಂದ್ ಕರೆ ಬೆಂಬಲಿಸಿ ಸಂಜೆ 4 ಗಂಟೆಯವರೆಗೆ ಅಂಗಡಿಗಳನ್ನು ಮುಚ್ಚಲು ನಾವು ನಿರ್ಧರಿಸಿದ್ದೇವೆ," ಎಂದು ಚಿಲ್ಲರೆ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ (ಎಫ್ಆರ್ಟಿಡಬ್ಲ್ಯೂಎ) ಮುಖ್ಯಸ್ಥ ವಿರೇನ್ ಶಾ ಹೇಳಿದ್ದಾರೆ.
* ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಮಧ್ಯಂತರ ಲಾಕ್ಡೌನ್ಗಳ ನಂತರ ವ್ಯಾಪಾರಕ್ಕೆ ಹಿನ್ನಡೆಯಾಗುತ್ತಿದೆ ಎಂದು ವ್ಯಾಪಾರಿಗಳ ಒಕ್ಕೂಟವು ಈ ಹಿಂದೆ ಹೇಳಿತ್ತು. ಬಂದ್ ತಮ್ಮ ವ್ಯಾಪಾರಕ್ಕೆ ಮತ್ತಷ್ಟು ಪೆಟ್ಟು ಕೊಡುತ್ತದೆ. "ಲಾಕ್ಡೌನ್ನಿಂದಾಗಿ ಕಳೆದ 18 ತಿಂಗಳುಗಳಿಂದ ನಾವು ಭಾರೀ ನಷ್ಟ ಅನುಭವಿಸಿದ್ದೇವೆ. ನಮ್ಮ ವ್ಯಾಪಾರ ನಿಧಾನವಾಗಿ ಸುಧಾರಿಸುತ್ತಿದೆ. ಹಬ್ಬದ ಮಧ್ಯ ಗ್ರಾಹಕರೊಂದಿಗೆ ನಾವು ಶಾಂತಿಯುತವಾಗಿ ವ್ಯಾಪಾರ ಮಾಡೋಣ. ಚಿಲ್ಲರೆ ವ್ಯಾಪಾರಗಳು ಮುಕ್ತವಾಗಿರಲು ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಅಂಗಡಿಯವರಿಗೆ ಕಿರುಕುಳ ನೀಡುವುದಿಲ್ಲ, ಅಥವಾ ಮುಚ್ಚುವಂತೆ ಒತ್ತಾಯಿಸುವುದಿಲ್ಲ ಎಂದು ನಾವು ಭಾವಿಸುತ್ತೇವೆ," ಎಂದು ವಿರೇನ್ ಶಾ ಹೇಳಿದ್ದಾರೆ.
* ವ್ಯಾಪಾರಿಗಳು ರಾಜಕೀಯದಿಂದಾಗಿ ಸಂಕಷ್ಟದಲ್ಲಿ ಸಿಲುಕಿದಂತೆ ಕಾಣುತ್ತಿದ್ದಾರೆ, ಬಂದ್ ಬೆಂಬಲಿಸಲು "ಬಲವಂತವಾಗಿ ಅಂಗಡಿಗಳನ್ನು ಮುಚ್ಚಲು" ಅನುಮತಿಸುವುದಿಲ್ಲ ಎಂದು ಬಿಜೆಪಿ ಹೇಳಿದೆ. "ಎಮ್ವಿಎ ಕಾರ್ಯಕರ್ತರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಲು ಒತ್ತಾಯಿಸಿದರೆ, ಅವರು ಬಿಜೆಪಿ ಕಾರ್ಯಕರ್ತರನ್ನು ಅದಕ್ಕೆ ಅವಕಾಶ ನೀಡುವುದಿಲ್ಲ. ಪೊಲೀಸರು ಯಾರನ್ನೂ ಬಲವಂತಪಡಿಸಿಲ್ಲ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾದರೆ, ಅದು ನಮ್ಮ ಜವಾಬ್ದಾರಿಯಲ್ಲ," ಎಂದು ಮಹಾರಾಷ್ಟ್ರದ ಬಿಜೆಪಿ ನಾಯಕ ನಿತೇಶ್ ರಾಣೆ ಟ್ವೀಟ್ ಮಾಡಿದ್ದಾರೆ.
* ಕಳೆದ ಭಾನುವಾರ ಕಪ್ಪು ಬಾವುಟ ಪ್ರದರ್ಶಿಸಿ ಘೋಷಣೆ ಕೂಗುತ್ತಾ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಹಿಂಸಾಚಾರ ನಡೆಸಲಾಗಿದೆ ಎಂದು ರೈತರು ದಾಖಲಿಸಿದ ಪೊಲೀಸ್ ಪ್ರಕರಣದಲ್ಲಿ ಕೇಂದ್ರ ಸಚಿವ ಆಜಯ್ ಮಿಶ್ರಾ ಹಾಗೂ ಪುತ್ರ ಆಶೀಶ್ ಮಿಶ್ರಾ ಹೆಸರು ಉಲ್ಲೇಖಿಸಲಾಗಿದೆ.
* ಕೊಲೆ ಪ್ರಕರಣ ದಾಖಲಾದ ನಂತರವೂ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾರನ್ನು ಬಂಧಿಸದ ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರ ವಿರುದ್ಧ ಸುಪ್ರೀಂಕೋರ್ಟ್ ಚಾಟಿ ಬೀಸಿತ್ತು. ತದನಂತರ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಶನಿವಾರ ಕೋರ್ಟ್ ಎದುರು ಹಾಜರುಪಡಿಸಿದ್ದರು.