10ರು ಗೆ ಊಟ, ರೈತ ಸ್ನೇಹಿ ಪ್ರಣಾಳಿಕೆ ಬಿಡುಗಡೆ ಮಾಡಿದ ಶಿವಸೇನಾ
ಮುಂಬೈ, ಅಕ್ಟೋಬರ್ 13: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಮೈತ್ರಿಪಕ್ಷ ಶಿವಸೇನಾ ತನ್ನ ಪ್ರಣಾಳಿಕೆಯನ್ನು ಪ್ರಕಟಿಸಿದೆ. ಮಹಾರಾಷ್ಟ್ರದಾದ್ಯಂತ ಭೋಜನಾಲಯ, ರೈತಸ್ನೇಹಿ ಯೋಜನೆಗಳನ್ನು ಘೋಷಿಸಲಾಗಿದೆ.
"ಉತ್ತಮ ಗುಣಮಟ್ಟದ ಆಹಾರವನ್ನು 10 ರುಗಳಿಗೆ ನೀಡುವ ಭೋಜನಾಲಯವನ್ನು ಮಹಾರಾಷ್ಟದೆಲ್ಲೆಡೆ ಸ್ಥಾಪಿಸಲಾಗುವುದು. ಸುಮಾರು 1,000 ಸಂಖ್ಯೆಯ ಭೋಜನಾಲಯ ಸ್ಥಾಪನೆ ಯೋಜನೆ ರೂಪಿಸಲಾಗಿದೆ. ಕೇಂದ್ರಿಕೃತ ಅಡುಗೆ ಮನೆ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಸ್ಥಾಪಿಸಿ ಅದರ ನಿರ್ವಹಣೆಯನ್ನು ಮಹಿಳೆಯರಿಗೆ ನೀಡಲಾಗುವುದು" ಎಂದು ವರ್ಲಿ ಕ್ಷೇತದ ಅಭ್ಯರ್ಥಿ, ಯುವ ಮುಖಂಡ ಆದಿತ್ಯ ಠಾಕ್ರೆ ಹೇಳಿದರು.
ಆರೆ ಕಾಲೋನಿ ಮರಗಳ ಬಗ್ಗೆ ಉಲ್ಲೇಖವಿಲ್ಲ: ಮೇಟ್ರೋಗಾಗಿ ಆರೆ ಕಾಲೋನಿಗಳ ಮರಗಳ ಮಾರಣಹೋಮ ನಡೆಯುವುದಕ್ಕೆ ಶಿವಸೇನಾ ವಿರೋಧಿಸಿತ್ತು. ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಮಧ್ಯಂತರ ತಡೆ ಸಿಕ್ಕಿದೆ. ಆದರೆ ಶಿವಸೇನಾ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.
ಬಾಳಾ ಠಾಕ್ರೆ ಮೊಮ್ಮಗ ಆದಿತ್ಯ ಆಸ್ತಿ ಬಹಿರಂಗ, ಎಷ್ಟು ಕೋಟಿ ರು ಒಡೆಯ?
ಈ ಬಗ್ಗೆ ಸ್ಪಷ್ಟನೆ ನೀಡಿದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಆರೆ ಕಾಲೋನಿಯಲ್ಲಿ ಉದ್ದೇಶಿತ ಕಾರ್ ಶೆಡ್ ಸ್ಥಾಪನೆಯನ್ನು ಪಕ್ಷ ವಿರೋಧಿಸುತ್ತದೆ ಎಂದರು.
ರೈತಸ್ನೇಹಿ ಯೋಜನೆ: ಆರ್ಥಿಕವಾಗಿ ದುರ್ಬಲವಾಗಿರುವ ರೈತ ಸಮೂಹಕ್ಕೆ 10,000 ರು ತುರ್ತು ನಿಧಿ ಒದಗಿಸುವ ಯೋಜನೆಯೊಂದನ್ನು ಘೋಷಿಸಲಾಗಿದೆ. ಪ್ರತಿ ರೈತನಿಗೂ ಬೆಳೆ ವಿಮೆ ಕಡ್ಡಾಯವಾಗಲಿದೆ. ಸದ್ಯ ರೈತರಿಗೆ ವಿಮೆ ಮೊತ್ತವು ಬೆಳೆ ಹಾನಿಯಾದರೆ ಅಥವಾ ವಾಸವಿರುವ ಗ್ರಾಮ ಸಂಪೂರ್ಣ ನಾಶವಾದರೆ ಮಾತ ಕ್ಲೇಮ್ ಮಾಡಬಹುದಾಗಿದೆ.
ಮಹಾ ಚುನಾವಣೆಯಲ್ಲಿ ಅತಿ ಶ್ರೀಮಂತ ಅಭ್ಯರ್ಥಿ ಬಿಜೆಪಿಯ ಈ ಸ್ಪರ್ಧಿ
ಇದಲ್ಲದೆ, ರಸಗೊಬ್ಬರ ಬೆಳೆ ಏರಿಳಿತ ತಡೆಗಟ್ಟಲಾಗುವುದು, ಸೂಕ್ತ ಬೆಲೆಯನ್ನು ನಿಗದಿಪಡಿಸಿ, ರೈತರಿಗೆ ನೆರವಾಗಲಾಗುವುದು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಬಿಜೆಪಿ ಹಾಗೂ ಶಿವಸೇನಾ ಮೈತ್ರಿ ಸಾಧಿಸಿ ಒಟ್ಟಿಗೆ ಕಣಕ್ಕಿಳಿಯುತ್ತಿದ್ದರೂ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಿವೆ. ಅಕ್ಟೋಬರ್ 07ರಂದು ಕಾಂಗ್ರೆಸ್ -ಎನ್ಸಿಪಿ ಮೈತ್ರಿ ಕೂಟವು ತನ್ನ ಪ್ರಣಾಳಿಕೆಯನ್ನು ಪ್ರಕಟಿಸಿದ್ದು, ಮೋಟರು ವಾಹನ ಕಾಯ್ದೆ ತಿದ್ದುಪಡಿ, ರೈತ ಸಾಲಮನ್ನಾ, ಉನ್ನತ ಶಿಕ್ಷಣಕ್ಕೆ ಶೂನ್ಯ ಬಡ್ಡಿದರದಲ್ಲಿ ಸಾಲ ಘೋಷಿಸಲಾಗಿದೆ. ಬಿಜೆಪಿ ಇನ್ನೂ ಪ್ರಣಾಳಿಕೆ ಹೊರ ಹಾಕಿಲ್ಲ. ಮಹಾರಾಷ್ಟ್ರದಲ್ಲಿ ಅಕ್ಟೋಬರ್ 21ರಂದು ಮತದಾನವಾಗಲಿದ್ದು, ಅಕ್ಟೋಬರ್ 24ರಂದು ಫಲಿತಾಂಶ ಹೊರಬರಲಿದೆ.