ಮಹಾ ಚುನಾವಣೆ: ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ಶಿವಸೇನೆ ಸೇರಿದ್ದೇಕೆ?
ಮುಂಬೈ, ಅಕ್ಟೋಬರ್ 20: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಜನಪ್ರಿಯ ನಟ ಸಲ್ಮಾನ್ ಖಾನ್ ಅವರ ಆಪ್ತ ಅಂಗರಕ್ಷಕ ಗುರ್ಮಿತ್ ಸಿಂಗ್ ಅಲಿಯಾಸ್ ಶೇರಾ ರಾಜಕೀಯ ರಂಗ ಪ್ರವೇಶವಾಗಿದೆ. ಬಿಜೆಪಿ ಮೈತ್ರಿ ಪಕ್ಷ ಶಿವಸೇನೆಗೆ ಶೇರಾ ಸೇರ್ಪಡೆಗೊಂಡಿದ್ದಾರೆ. ಅಕ್ಟೋಬರ್ 21ರಂದು ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್ 24ರಂದು ಫಲಿತಾಂಶ ಹೊರಬರಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸಲ್ಮಾನ್ ಖಾನ್ ಅವರ ಕುಟುಂಬ ಉತ್ತಮ ಸ್ನೇಹ ಬಾಂಧವ್ಯ ಹೊಂದಿದೆ. ಆದರೆ ಸಲ್ಮಾನ್ ಖಾನ್ ಅವರು ಇಲ್ಲಿ ತನಕ ಬಿಜೆಪಿಯಾಗಲಿ ಅಥವಾ ಯಾವುದೇ ಚುನಾವಣೆಯಲ್ಲಾಗಲಿ ಯಾರ ಪರವೂ ಪ್ರಚಾರಕ್ಕೆ ಬಂದಿಲ್ಲ. ರಾಜಕೀಯದಿಂದ ದೂರ ಉಳಿದಿದ್ದರು. ಸಲ್ಮಾನ್ ಖಾನ್ ಅವರ ಆಪ್ತರು, ಸ್ನೇಹಿತರು, ಸಹನಟರ ಪೈಕಿ ಅನೇಕರು ರಾಜಕೀಯ ರಂಗದಲ್ಲಿ ಹೆಸರು ಮಾಡಿದ್ದಾರೆ. ಈಗ ಅವರ ಬಾಡಿಗಾರ್ಡ್ ಶೇರಾ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಸಲ್ಮಾನ್ ಖಾನ್ ಜತೆ ಸುಮಾರು 21 ವರ್ಷಗಳಿಂದ ಇರುವ ಅಂಗರಕ್ಷಕ ಶೇರಾ ಕೂಡಾ ಸೆಲೆಬ್ರಿಟಿಯಾಗಿದ್ದಾನೆ. ಸಲ್ಮಾನ್ ಅವರ ಆಪ್ತವರ್ಗದಲ್ಲಿ ಆಪ್ತ ಸಹಾಯಕಿ ರೇಷ್ಮಾ ಶೆಟ್ಟಿ ಹಾಗೂ ಶೇರಾ ಪ್ರಮುಖರಾಗಿದ್ದಾರೆ. ಸಲ್ಮಾನ್ ಕುಟುಂಬದಲ್ಲೂ ಗುರ್ಮಿತ್ ಸಿಂಗ್ ಜಾಲಿ ಅಲಿಯಾಸ್ ಶೇರಾ ಕೂಡಾ ಒಂದು ಸದಸ್ಯನಂತೆ ಬೆಳೆದಿದ್ದಾರೆ.
ಅನೇಕ ಬಾರಿ ಹಲ್ಲೆ ಪ್ರಕರಣಗಳಲ್ಲಿ ಶೇರಾ ಹೆಸರು ಕೇಳಿ ಬಂದಿದೆ. ಸಲ್ಮಾನ್ ಅವರು ನೀಡಿದ ಸಲಹೆ ಮೇರೆಗೆ ರಾಜಕೀಯ ಪ್ರವೇಶಿಸಿದ್ದು, ಮೋದಿ ಅವರ ಸರ್ಕಾರದ ಜನಾನುರಾಗಿ ಯೋಜನೆಗಳನ್ನು ಮುಂದುವರೆಸುವುದು ನನ್ನ ಉದ್ದೇಶ ಎಂದಿದ್ದಾರೆ.
ಶೇರಾ ಸೇರ್ಪಡೆ ಬಗ್ಗೆ ಶಿವಸೇನೇ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಯುವ ಸೇನಾ ಅಧ್ಯಕ್ಷ, ವರ್ಲಿ ಅಭ್ಯರ್ಥಿ ಆದಿತ್ಯ ಠಾಕ್ರೆ ಅವರ ಸಮ್ಮುಖದಲ್ಲಿ ಮಾತೋಶ್ರಿ ನಿವಾಸದಲ್ಲಿ ಶೇರಾ ಅವರನ್ನು ಶಿವಸೇನಾ ಪಕ್ಷಕ್ಕೆ ಸ್ವಾಗತಿಸಲಾಯಿತು.