ಸೇನಾಕ್ಕೆ ಸಿಎಂ ಸ್ಥಾನ, ಎನ್ಸಿಪಿ-ಕಾಂಗ್ರೆಸ್ಸಿಗೆ 2 ಡಿಸಿಎಂ ಹೊಸ ಡೀಲ್?
ಮುಂಬೈ, ನವೆಂಬರ್ 19: ಮಹಾರಾಷ್ಟ್ರದಲ್ಲಿ ಎನ್ಸಿಪಿ-ಕಾಂಗ್ರೆಸ್- ಶಿವಸೇನಾ ಸೇರಿ ಸರ್ಕಾರ ರಚಿಸುವ ಪ್ರಯತ್ನದ ಹಾದಿ ಸುಗಮಗೊಂಡಿದೆ. ಈ ಬಗ್ಗೆ ನಾಳೆ ಅಂತಿಮ ಚಿತ್ರಣ ಸಿಗಲಿದೆ ಎಂಬ ಸುದ್ದಿ ಬಂದಿದೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟು ಅಂತ್ಯಕಾಣುವ ಸೂಚನೆ ಸಿಗುತ್ತಿದ್ದಂತೆ ಮತ್ತೆ ಬಿಕ್ಕಟ್ಟು ಕಾಣಿಸಿಕೊಂಡು ಎಂದೂ ಮುಗಿಯದ ಕಥೆಯಾಗಿ ಉಳಿದಿದೆ. ಈ ನಡುವೆ 50:50 ಹಳೆ ಡೀಲ್ ಗೆ ಒಪ್ಪಿದರೆ ಬಿಜೆಪಿ ಜೊತೆ ಸಖ್ಯಕ್ಕೆ ರೆಡಿ ಎಂದು ಶಿವಸೇನಾ ಮುಖಂಡರು ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ.
ಈ ನಡುವೆ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಆಡಳಿತಾರೂಢ ಬಿಜೆಪಿ ಈ ಬಾರಿ ವಿರೋಧಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ಸಜ್ಜಾಗಿದೆ. ಇದೇ ಮೊದಲಬಾರಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರುವ ಶಿವಸೇನಾ ಜತೆ ಎನ್ಸಿಪಿ ಮತ್ತು ಕಾಂಗ್ರೆಸ್ ಸೇರಿ ಸರ್ಕಾರ ರಚಿಸಲಿವೆ. ಶರದ್ ಪವಾರ್ ನೇತೃತ್ವದ ಎನ್ಸಿಪಿ, ಶಿವಸೇನಾಗೆ ಸರ್ಕಾರ ರಚನೆಗೆ ನೇರ ಬೆಂಬಲ ನೀಡಲಿದ್ದು, ಸರ್ಕಾರದ ಆಡಳಿತದಲ್ಲಿ ಪಾಲ್ಗೊಳ್ಳಲಿದೆ.
ನವೆಂಬರ್.20ರಂದೇ ಬಗೆಹರಿಯುತ್ತಾ ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟು?
ಆದರೆ ಚುನಾವಣೆಗೂ ಮುನ್ನ ಎನ್ಸಿಪಿ ಜತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್, ನೇರವಾಗಿ ಸರ್ಕಾರದ ಭಾಗವಾಗಿರದೆ, ಈ ಸಮ್ಮಿಶ್ರ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿದೆ. ಅಲ್ಲದೆ, ಆರು ಮಂದಿ ಪಕ್ಷೇತರ ಶಾಸಕರು ಕೂಡ ಶಿವಸೇನಾಗೆ ಬೆಂಬಲ ನೀಡುವುದಾಗಿ ಹೇಳಿದೆ. ಇದರಿಂದ ಸುದೀರ್ಘ ಕಾಲದ ಮಹಾರಾಷ್ಟ್ರದ ಸರ್ಕಾರ ರಚನೆಯ ಕಸರತ್ತು ಅಂತ್ಯಕಾಣುತ್ತಿದ್ದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಹಾಗಾದರೆ ಸರ್ಕಾರ ರಚನೆ ವಿನ್ಯಾಸ ಹೇಗಿರಲಿದೆ? ಮುಂದೆ ಓದಿ...
ಉದ್ಧವ್ ಠಾಕ್ರೆ ಸಿಎಂ
ಠಾಕ್ರೆ ಕುಟುಂಬದಿಂದ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿರುವ ಉದ್ಧವ್ ಠಾಕ್ರೆ ಅವರ ಮಗ ಆದಿತ್ಯ ಠಾಕ್ರೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರವು ಹೆಚ್ಚು ಸೂಕ್ಷ್ಮವಾಗಿರುವುದರಿಂದ ಅದನ್ನು ನಿಭಾಯಿಸಲು ಹೆಚ್ಚು ಪರಿಣತಿಯ ಅಗತ್ಯವಿದ್ದು, ಉದ್ಧವ್ ಠಾಕ್ರೆ ಅವರೇ ಸರ್ಕಾರದ ನೇತೃತ್ವ ವಹಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಉದ್ಧವ್ ಮುಖ್ಯಮಂತ್ರಿಯಾಗುವುದಕ್ಕೆ ಎನ್ಸಿಪಿ, ಕಾಂಗ್ರೆಸ್ಸಿನಿಂದಲೂ ಯಾವುದೇ ತಕರಾರು ಕೇಳಿ ಬಂದಿಲ್ಲ.
ಎನ್ಸಿಪಿಗೆ ಡಿಸಿಎಂ ಸ್ಥಾನ
ಮೈತ್ರಿ ಕಾರಣಕ್ಕೆ ಎನ್ಸಿಪಿಗೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನಾ ಬಿಟ್ಟುಕೊಡಬೇಕಾಗಿದ್ದು, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಪೃಥ್ವಿರಾಜ್ ಚವಾಣ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕೂಡ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿದ್ದರು.
ಸ್ವಾರ್ಥ ಬಿಡಿ, ಬಿಜೆಪಿ ಶಿವಸೇನೆಗೆ ಭಾಗವತ್ ಕಿವಿ ಮಾತು
ಮಹಾರಾಷ್ಟ್ರದಲ್ಲಿ ಪ್ರಸ್ತುತ ರಾಷ್ಟ್ರಪತಿ ಆಳ್ವಿಕೆ ಜಾರಿ
ಮಹಾರಾಷ್ಟ್ರದಲ್ಲಿ ಪ್ರಸ್ತುತ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಚುನಾವಣೆ ಫಲಿತಾಂಶ ಪ್ರಕಟವಾಗಿ 24 ದಿನಗಳಾದರೂ ಸರ್ಕಾರ ರಚಿಸುವಲ್ಲಿ ಯಾವುದೇ ಪಕ್ಷ ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯಪಾಲ ಕೋಶ್ಯಾರಿ ಅವರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದರು.ಸರ್ಕಾರ ರಚನೆಗೆ ಅಗತ್ಯ ಬೆಂಬಲವಿದೆ ಎಂದು 24 ಗಂಟೆಗಳಲ್ಲಿ ತೋರಿಸುವಂತೆ ಶಿವಸೇನಾಕ್ಕೆ ಸೂಚಿಸಲಾಗಿತ್ತು. ಆದರೆ ಬಿಜೆಪಿಗೆ 48 ಗಂಟೆಗಳನ್ನು ನೀಡಲಾಗಿದೆ, ಈ ರೀತಿಯ ತಾರತಮ್ಯ ನೀತಿಗೆ ಅಕ್ಷೇಪಿಸಿದರೂ ಫಲ ಸಿಗಲಿಲ್ಲ ಎಂದು ಶಿವಸೇನಾ ಆರೋಪಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
42ಸಚಿವ ಸ್ಥಾನ ಹಂಚಿಕೆ ಹೇಗೆ?
ಇಂಡಿಯನ್ ಎಕ್ಸ್ ಪ್ರೆಸ್ ವರದಿಯಂತೆ ಉದ್ಧವ್ ಠಾಕ್ರೆ ಹಾಗೂ ಶರದ್ ಪವಾರ್ ಅವರು ಸರ್ಕಾರ ರಚನೆ, ಸಚಿವ ಸ್ಥಾನ ಹಂಚಿಕೆ ಬಗ್ಗೆ ಅಂತಿಮ ಕರಡು ಪ್ರತಿ ಸಿದ್ಧ ಪಡಿಸಿದ್ದಾರೆ. ಈ ಬಗ್ಗೆ ಸೋನಿಯಾ ಗಾಂಧಿ ಅವರ ಬಳಿ ನಾಳೆ ಮಾತುಕತೆ ನಡೆಸಿ ಅಂತಿಮಗೊಳಿಸಲಾಗುತ್ತದೆ ಎಂಬ ಸುದ್ದಿ ಬಂದಿದೆ. ಜೊತೆಗೆ ಉದ್ಧವ್ ಠಾಕ್ರೆ ಸಿಎಂ, ಅಜಿತ್ ಪವಾರ್ ಡಿಸಿಎಂ, ಕಾಂಗ್ರೆಸ್ಸಿನಿಂದ ಮತ್ತೊಬ್ಬರು ಡಿಸಿಎಂ ಆಗಿ ಪೂರ್ಣಾವಧಿಗೆ ನೇಮಕವಾಗಲಿದ್ದಾರೆ. ಒಟ್ಟಾರೆ 42 ಸ್ಥಾನಗಳನ್ನು ಆಯಾ ಪಕ್ಷಗಳು ಈ ಬಾರಿ ಚುನಾವಣೆಯಲ್ಲಿ ಗಳಿಸಿದ ಸ್ಥಾನಗಳಿಗೆ ಅನುಗುಣವಾಗಿ ಹಂಚಲಾಗುತ್ತದೆ.