ಶಿವಸೇನಾದ ಬಾಳ್ ಠಾಕ್ರೆ ಸ್ಮಾರಕಕ್ಕೆ 100 ಕೋಟಿ ರುಪಾಯಿ, ಮಹಾ ಸಂಪುಟ ಒಪ್ಪಿಗೆ
ಮುಂಬೈ, ಜನವರಿ 22: ಶಿವಸೇನಾದ ಬಾಳ್ ಠಾಕ್ರೆ ಸ್ಮಾರಕ ನಿರ್ಮಾಣಕ್ಕೆ 100 ಕೋಟಿ ರುಪಾಯಿಗೆ ಮಹಾರಾಷ್ಟ್ರದ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ. ದಿವಂಗತ ಬಾಳಸಾಹೇಬ್ ಠಾಕ್ರೆ ಸೇನಾದ ನಾಯಕರು ಮಾತ್ರವಲ್ಲ, ಈ ಮೈತ್ರಿಯ ನಾಯಕರು. ಎಲ್ಲ ಪಕ್ಷಗಳಿಗೂ ಅವರು ಮುಖ್ಯರಾಗಿರುತ್ತಾರೆ. ಆದ್ದರಿಂದ ಈ ದಿನ ಸಂಪುಟವು ಅವರ ಸ್ಮಾರಕಕ್ಕಾಗಿ 100 ಕೋಟಿ ಬಿಡುಗಡೆ ಮಾಡಿದೆ ಎಂದು ವಿತ್ತ ಸಚಿವ ಸುಧೀರ್ ಹೇಳಿದ್ದಾರೆ.
ಮುಂಬೈ ಮೆಟ್ರೊಪಾಲಿಟನ್ ರೀಜಿಯನ್ ಡೆವಲಪ್ ಮೆಂಟ್ ಅಥಾರಿಟಿ (MMRDA)ಯಿಂದ ಅನುದಾನ ದೊರೆಯಲಿದ್ದು, ಈ ಬಗ್ಗೆ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಖಾತ್ರಿ ನೀಡುತ್ತದೆ. ಸಂಪುಟ ಸಭೆ ನಂತರ ಮಾತನಾಡಿದ ಅವರು, ಶಿವ ಸೇನೆ ಜತೆಗೆ ಮೈತ್ರಿ ಸಿಹಿಯಾಗಿತ್ತು ಹಾಗೂ ಹಾಗೆಯೇ ಮುಂದುವರಿಯಲಿದೆ ಎಂದಿದ್ದಾರೆ.
ಶಿವಸೇನಾ-ಬಿಜೆಪಿ ಕಚ್ಚಾಟ ಅಂತ್ಯ? ಮತ್ತೆ ಒಂದಾಗಲಿದ್ದಾರಾ ಹಳೆ ಮಿತ್ರರು?
ಲೋಕಸಭೆ ಚುನಾವಣೆಗೆ ಸೇನೆ-ಬಿಜೆಪಿ ಮಧ್ಯೆ ಮೈತ್ರಿ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಬಿಜೆಪಿಯು ಯಾವಾಗಲೂ ಮೈತ್ರಿ ಪರವಾಗಿಯೇ ಇದೆ ಎಂದು ಹೇಳಿದ್ದಾರೆ. ಕೇಂದ್ರ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾಗಿರುವ ಶಿವ ಸೇನೆ, ಆಗಾಗ ಎರಡೂ ಸರಕಾರಗಳನ್ನು ಟೀಕಿಸುತ್ತಲೇ ಇದೆ. ಮುಂಬರುವ ಲೋಕಸಭೆ ಚುನಾವಣೆಗೆ ಶಿವಸೇನೆ ಏಕಾಂಗಿಯಾಗಿ ಹೋರಾಡಲಿದೆ ಎಂದು ಉದ್ಧವ್ ಠಾಕ್ರೆ ಕಳೆದ ವರ್ಷ ಘೋಷಣೆ ಮಾಡಿದ್ದರು.
ಈ ಹಿಂದೆ ಮುಂಬೈ ಮೇಯರ್ ಬಂಗಲೆ ಇದ್ದ ಶಿವಾಜಿ ಪಾರ್ಕ್ ಪ್ರದೇಶದಲ್ಲಿ ಸ್ಮಾರಕ ತಲೆ ಎತ್ತಲಿದೆ. ಸಮುದ್ರಕ್ಕೆ ಮುಖ ಮಾಡಿರುವ ಈ ಆಸ್ತಿಯು 11,500 ಚದರ ಮೀಟರ್ ಇದೆ. ಅದನ್ನು ಬಾಳಸಾಹೇಬ್ ಠಾಕ್ರೆ ರಾಷ್ಟ್ರೀಯ ಸ್ಮಾರಕ್ ನ್ಯಾಸ್ ಟ್ರಸ್ಟ್ ಗೆ ಕಳೆದ ವರ್ಷ ಹಸ್ತಾಂತರಿಸಲಾಗಿತ್ತು.