ಕೊರೊನಾ ವೈರಸ್ ಅಲ್ಲ.. ಮಧ್ಯಪ್ರದೇಶ ವೈರಸ್ ಬಗ್ಗೆ 'ಮಹಾ' ಮಾತು
ಮುಂಬೈ, ಮಾರ್ಚ್.10: ಒಂದು ಕಡೆ ಕೊರೊನಾ ವೈರಸ್.. ಇನ್ನೊಂದು ಕಡೆ ಮಧ್ಯಪ್ರದೇಶ ಪೊಲಿಟಿಕಲ್ ಹೈಡ್ರಾಮಾ.. ಇದೆರೆಡನ್ನೂ ಮಿಕ್ಸ್ ಮಾಡಿ ಮಧ್ಯಪ್ರದೇಶ ವೈರಸ್ ಎನ್ನುವ ಧಾಟಿಯಲ್ಲಿ ಶಿವಸೇನೆ ಸಂಸದ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಇರುವಾಗ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲವೇ ಇಲ್ಲ. ಮಧ್ಯಪ್ರದೇಶದ ವೈರಸ್ ಮಹಾರಾಷ್ಟ್ರಕ್ಕೆ ಬರುವುದಿಲ್ಲ ಎಂದು ರಾವತ್ ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಮಧ್ಯಪ್ರದೇಶ ರಾಜಕಾರಣಕ್ಕೆ ಟ್ವಿಸ್ಟ್: ರಾತ್ರೋರಾತ್ರಿ ದೆಹಲಿಯತ್ತ ಶಾಸಕರು!
ಮಹಾರಾಷ್ಟ್ರದಲ್ಲಿ ರಚನೆಯಾಗಿರುವ ಮಹಾರಾಷ್ಟ್ರ ವಿಕಾಸ್ ಅಘಾದಿ ಸರ್ಕಾರವು ಉರಳುತ್ತದೆ ಎಂದು ಕೆಲವರು ಕನಸು ಕಾಣುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಸಿಎಂ ಕಮಲನಾಥ್ ಸರ್ಕಾರವು ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಮಾಡಬೇಕಿದೆ. ವಿಶ್ವಾಸಮತಯಾಚನೆ ಮುಗಿಯುವವರೆಗೂ ಸರ್ಕಾರ ಪತನವಾಯಿತು ಎಂದು ಯಾರೂ ಹೇಳಲು ಬರುವುದಿಲ್ಲ ಎಂದು ರಾವತ್ ತಿಳಿಸಿದರು.
ಸಿಂಧಿಯಾ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ರಾವತ್ ಕೆಂಡ
ಜೋತಿರಾದಿತ್ಯ ಸಿಂಧಿಯಾ ರಾಜೀನಾಮೆ ನೀಡಿರುವುದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿದೆ. ಸಿಂಧಿಯಾರಂತಾ ನಾಯಕರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳದ ಕಾರಣಕ್ಕಾಗಿ ಅವರು ಪಕ್ಷವನ್ನು ತೊರೆದಿದ್ದಾರೆ ಎಂದು ಸಂಜಯ್ ರಾವತ್ ದೂರಿದ್ದಾರೆ.
ಆಪರೇಷನ್ ಕಮಲ 100 ದಿನಗಳ ಹಿಂದೆಯೇ ವಿಫಲ
ಮಧ್ಯಪ್ರದೇಶದ ರೀತಿಯಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆಯು ರಾಜ್ಯದಲ್ಲಿ ಯಶಸ್ವಿಯಾಗುವುದಿಲ್ಲ. ಮಹಾರಾಷ್ಟ್ರದಲ್ಲಿ 100 ದಿನಗಳ ಹಿಂದೆಯೇ ಆಪರೇಷನ್ ಕಮಲ ಫೇಲ್ ಆಗಿದೆ. ಮಹಾ ವಿಕಾಸ್ ಅಘಾದಿ ಬೈಪಾಸ್ ಸರ್ಜರಿ ನಡೆಸಿ ಸರ್ಕಾರವನ್ನು ಉಳಿಸಿದೆ ಎಂದು ಸಂಜಯ್ ರಾವತ್ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಟ್ವೀಟ್
ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ. ದೇಶದಲ್ಲಿ ಶೇ.35ರಷ್ಟು ಇಂಧನ ಬೆಲೆ ಏರಿಕೆ ಕಂಡಿದ್ದು, ಜನರು ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ನೀವು ಮಾತ್ರ ಮಧ್ಯಪ್ರದೇಶದಲ್ಲಿ ಜನರಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವಲ್ಲಿ ಬ್ಯುಸಿ ಆಗಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಮ್ಯಾಜಿಕ್ ನಂಬರ್ ಪಡೆಯುವಲ್ಲಿ ಯಾರಿಗೆ ಗೆಲುವು
ಸಿಎಂ ಕಮಲನಾಥ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರೇ ಸಿಡಿದೆದ್ದಿದ್ದಾರೆ. 230 ಸದಸ್ಯಬಲದ ವಿಧಾನಸಭೆಯಲ್ಲಿ ಇಬ್ಬರು ಶಾಸಕರು ಮೃತಪಟ್ಟ ಹಿನ್ನೆಲೆಯಲ್ಲಿ ಸದಸ್ಯಸಂಖ್ಯೆಯನ್ನು 228ಕ್ಕೆ ಇಳಿಸಲಾಗಿದೆ. ಈ ಪೈಕಿ ಸರ್ಕಾರ ರಚನೆಗೆ ಕನಿಷ್ಠ 115 ಶಾಸಕರ ಬೆಂಬಲ ಅಗತ್ಯವಾಗಿದೆ. ರಾಜ್ಯಸಭಾ ಚುನಾವಣೆ ಹೊಸ್ತಿಲಲ್ಲೇ ನಡೆಯುತ್ತಿರುವ ಪೊಲಿಟಿಕಲ್ ಹೈಡ್ರಾಮಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.