ಚಂದ್ರಬಾಬು ನಾಯ್ಡು ಸುಮ್ಮನೆ ಏಕೆ ಸುಸ್ತು ಮಾಡಿಕೊಳ್ಳುತ್ತಿದ್ದಾರೆ?: ಕಾಲೆಳೆದ ಶಿವಸೇನಾ
ನವದೆಹಲಿ, ಮೇ 20: ಬಿಜೆಪಿಯೇತರ ಪಕ್ಷಗಳನ್ನು ಸತತವಾಗಿ ಭೇಟಿ ಮಾಡುತ್ತಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪ್ರಯತ್ನಕ್ಕೆ ಬಿಜೆಪಿ ಮಿತ್ರಪಕ್ಷ ಶಿವಸೇನಾ ಲೇವಡಿ ಮಾಡಿದೆ.
ಎನ್ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದುಕೊಳ್ಳಲಿದೆ ಎಂಬ ಎಕ್ಸಿಟ್ ಪೋಲ್ಗಳ ಭವಿಷ್ಯದ ಬಳಿಕವೂ ವಿವಿಧ ಪಕ್ಷಗಳ ಪ್ರಮುಖ ಮುಖಂಡರನ್ನು ಚಂದ್ರಬಾಬು ನಾಯ್ಡು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚಿಸಲು ಅವರು ಪ್ರಯತ್ನ ಮಾಡುತ್ತಿದ್ದಾರೆ.
ಬಿಜೆಪಿಯನ್ನು ತಡೆಯಲಾಗದಿದ್ದ ಮೇಲೆ ಕಾಂಗ್ರೆಸ್ ಸಾಯಲೇಬೇಕು: ಯೋಗೇಂದ್ರ ಯಾದವ್
'ಯಾವುದೇ ಕಾರಣವಿಲ್ಲದೆ ಚಂದ್ರಬಾಬು ನಾಯ್ಡು ಅವರು ಏಕೆ ಇಷ್ಟೊಂದು ಸುಸ್ತುಮಾಡಿಕೊಳ್ಳುತ್ತಿದ್ದಾರೆ?' ಎಂದು ಶಿವಸೇನಾ ಕಾಲೆಳೆದಿದೆ.
'ಅವರ ಈಗಿನ ಉತ್ಸಾಹ ಮೇ 23ರ ಕೊನೆಯವರೆಗೂ ಇರಲಿದೆ ಎಂಬ ಆಶಿಸಿದ್ದೇವೆ. ಅವರಿಗೆ ಅದಕ್ಕೆ ಶುಭವನ್ನು ಹಾರೈಸುತ್ತಿದ್ದೇವೆ' ಎಂದು ಶಿವಸೇನಾ ತನ್ನ ಮುಖವಾಣಿ 'ಸಾಮ್ನಾ' ಪತ್ರಿಕೆಯ ಸಂಪಾದಕೀಯದಲ್ಲಿ ವ್ಯಂಗ್ಯವಾಡಿದೆ.
'ವಿರೋಧ ಪಕ್ಷದಲ್ಲಿ ಪ್ರಧಾನಿ ಸ್ಥಾನಕ್ಕಾಗಿ ಕನಿಷ್ಠ ಐದು ಅಭ್ಯರ್ಥಿಗಳಿದ್ದಾರೆ. ಅವರ ಭ್ರಮನಿರಸನಕ್ಕೆ ಹೆಚ್ಚಿನ ಅವಕಾಶಗಳಿವೆ. ಯಾರು ಸರ್ಕಾರ ರಚಿಸುತ್ತಾರೆ? ಈ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದೆ. ಲೋಕಸಭೆ ಚುನಾವಣೆಯ ಐದನೇ ಹಂತದಲ್ಲಿಯೇ ಬಿಜೆಪಿ ಗುರಿ ತಲುಪಿದ್ದು 300 ಸೀಟುಗಳನ್ನು ಗೆಲ್ಲುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ' ಎಂದು ಶಿವಸೇನಾ ಹೇಳಿದೆ.
ಉ.ಪ್ರದೇಶ: ಮತದಾನದ ನಂತರ ಮಿತ್ರ ಪಕ್ಷವನ್ನು ಹೊರಹಾಕಿದ ಬಿಜೆಪಿ
ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಎರಡು ಬಾರಿ ಭೇಟಿಯಾಗಿದ್ದರು. ಭಾನುವಾರ ಸಂಜೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದ್ದರು. ಬಳಿಕ ಉತ್ತರ ಪ್ರದೇಶಕ್ಕೆ ತೆರಳಿ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರೊಂದಿಗೆ ಸಭೆ ನಡೆಸಿದ್ದರು.
ಎಕ್ಸಿಟ್ ಪೋಲ್: ಈ ರಾಜ್ಯಗಳಲ್ಲಿನ ಫಲಿತಾಂಶ ನೀಡಲಿದೆ ಅಚ್ಚರಿ
ಅಷ್ಟೇ ಅಲ್ಲದೆ ಎನ್ಸಿಪಿ ನಾಯಕ ಶರದ್ ಪವಾರ್, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಸಿಪಿಐ ನಾಯಕ ಸುಧಾಕರ್ ರೆಡ್ಡಿ, ಎಲ್ಜೆಡಿ ನಾಯಕ ಶರದ್ ಯಾದವ್, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರನ್ನೂ ಭೇಟಿಯಾಗಿ ಮಹಾಮೈತ್ರಿಕೂಟದ ಸರ್ಕಾರ ರಚಿಸುವ ಸಂಬಂಧ ಮಾತುಕತೆ ನಡೆಸಿದ್ದರು.