ಮಹಾರಾಷ್ಟ್ರ: ಶೀಘ್ರದಲ್ಲಿಯೇ ಬಿಜೆಪಿ-ಶಿವಸೇನಾ ಮರುಮೈತ್ರಿ?
ಮುಂಬೈ, ಜನವರಿ 25: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ನಡುವೆ ಮತ್ತೆ ಮೈತ್ರಿ ಚಿಗುರುವ ಲಕ್ಷಣಗಳು ಕಾಣಿಸುತ್ತಿವೆ.
ಈ ಬಾರಿ ವಿರೋಧಪಕ್ಷಗಳು ಒಂದಾಗಿ ಮಹಾಮೈತ್ರಿಕೂಟ ರಚಿಸಿಕೊಂಡಿರುವುದರಿಂದ ಏಕಾಂಗಿಯಾಗಿ ಚುನಾವಣೆ ಎದುರಿಸಿದರೆ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟವಾಗಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಹೀಗಾಗಿ ತನ್ನ ಹಳೆಯ ಮಿತ್ರಪಕ್ಷಗಳೊಂದಿಗೆ ಪುನಃ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯ ಸವಾಲು ಎದುರಿಸಲು ಬಿಜೆಪಿ ಮುಂದಾಗಲಿದೆ.
ಶಿವಸೇನಾ-ಬಿಜೆಪಿ ಕಚ್ಚಾಟ ಅಂತ್ಯ? ಮತ್ತೆ ಒಂದಾಗಲಿದ್ದಾರಾ ಹಳೆ ಮಿತ್ರರು?
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈಗಾಗಲೇ ಶಿವಸೇನಾ ಜೊತೆಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಮೈತ್ರಿಗೆ ಮನವೊಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಕಾಂಗ್ರೆಸ್ ಮತ್ತು ಎನ್ಸಿಪಿ ರಾಜ್ಯದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗೆ ಇಳಿದರೆ ನಾವು ಏಕಾಂಗಿಯಾಗಿ ಸ್ಪರ್ಧಿಸಿದರೆ ಸಮಸ್ಯೆ ಉಂಟಾಗದು. ಆದರೆ, ನಾವು ಪ್ರತ್ಯೇಕವಾಗಿ ಕಣಕ್ಕಿಳಿದರೆ ಕಾಂಗ್ರೆಸ್-ಎನ್ಸಿಪಿ ಮೈತ್ರಿ ಅಧಿಕಾರಕ್ಕೆ ಬರಲಿದೆ ಎನ್ನುವುದು ಶಿವಸೇನಾಗೂ ತಿಳಿದಿದೆ. ಹೀಗಾಗಿ ಮೈತ್ರಿಯನ್ನು ಯಾವಾಗ ಬೇಕಾದರೂ ಪ್ರಕಟಿಸಬಹುದು' ಎಂದು ಮಹಾರಾಷ್ಟ್ರ ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.
ಠಾಕ್ರೆ 'ದಿಟ್ಟ ವ್ಯಕ್ತಿ' ಎಂದು ಹಾಡಿ ಹೊಗಳಿದ ನರೇಂದ್ರ ಮೋದಿ
ಕಳೆದ ಕೆಲವು ದಿನಗಳಿಂದ ಸಣ್ಣಮಟ್ಟಿಗಿನ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ನಮಗೆ ಅದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಈ ಬಗ್ಗೆ ಮುಖ್ಯಮಂತ್ರಿ ಮಾತ್ರ ಮಾತುಕತೆ ನಡೆಸುತ್ತಿದ್ದು, ವಿವರಗಳನ್ನು ಅಮಿತ್ ಶಾ ಅವರೊಂದಿಗಷ್ಟೇ ಹಂಚಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.