ಮುಂಬೈ ಅತ್ಯಾಚಾರ ಪ್ರಕರಣ: ಉದ್ದವ್, ಮಹಾರಾಷ್ಟ್ರ ಗವರ್ನರ್ ಪತ್ರ ಸಮರ
ಮುಂಬೈ, ಸೆಪ್ಟೆಂಬರ್ 21: ಮುಂಬೈನಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಗವರ್ನರ್ ಭಗತ್ ಸಿಂಗ್ ಕೋಶಿಯಾರಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡುವೆ ಲೆಟರ್ ವಾರ್ ನಡೆಯುತ್ತಿದೆ.
ಮಹಾರಾಷ್ಟ್ರ ಗವರ್ನರ್ ಭಗತ್ ಸಿಂಗ್ ಕೋಶಿಯಾರಿ ಮುಂಬೈನಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉದ್ಧವ್ ಠಾಕ್ರೆ "ಮಹಿಳೆಯರ ರಕ್ಷಣೆ ಹಾಗೂ ಮಹಿಳೆಯ ಮೇಲೆ ನಡೆಯುತ್ತಿರುವ ದಾಳಿಗಳ ವಿಚಾರದಲ್ಲಿ ಕೇಂದ್ರ ಸರ್ಕಾರವು ಸಂಸತ್ತಿನ ಅಧಿವೇಶನ ಕರೆಯುವಂತೆ ಹೇಳಿ ಕೇಂದ್ರಕ್ಕೆ ಪತ್ರವನ್ನು ಬರೆಯಬೇಕು," ಎಂದು ಹೇಳಿದ್ದಾರೆ.
20 ಕೋಟಿಗಿಂತ ಅಧಿಕ ತೆರಿಗೆ ವಂಚನೆ ಮಾಡಿದ ಸೋನುಸೂದ್: ಐಟಿ ಇಲಾಖೆ
ಸೋಮವಾರ ಗವರ್ನರ್ಗೆ ಉದ್ಧವ್ ಠಾಕ್ರೆ ಬರೆದಿರುವ ಪತ್ರದಲ್ಲಿ, ಉದ್ಧವ್ ಠಾಕ್ರೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ನಡೆದಿರುವ ಅತ್ಯಾಚಾರ, ದೌರ್ಜನ್ಯಗಳ ಪಟ್ಟಿಯನ್ನು ಮಾಡಿದ್ದಾರೆ. ಹಾಗೆಯೇ ಗವರ್ನರ್ ಭಗತ್ ಸಿಂಗ್ ಕೋಶಿಯಾರಿಯ ಹುಟ್ಟು ರಾಜ್ಯ ಉತ್ತರಾಖಂಡದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳನ್ನು ಕೂಡಾ ಉದ್ಧವ್ ಠಾಕ್ರೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಹಾಗೆಯೇ "ಗವರ್ನರ್ ರಾಜಕೀಯ ಕಾರ್ಯಕರ್ತನ ಛಾಯೆ ಇದೆ," ಎಂದು ಉದ್ಧವ್ ಠಾಕ್ರೆ ಬರೆದಿದ್ದಾರೆ.
"ಗವರ್ನರ್ನಿಂದ ಇಂತಹ ನಿರ್ದೇಶನವು ಹೊಸ ವಿವಾದವನ್ನು ಹುಟ್ಟಿ ಹಾಕುತ್ತದೆ ಹಾಗೂ ಪ್ರಜಾಪ್ರಭುತ್ವದ ಸಂಸದೀಯ ಪ್ರಕ್ರಿಯೆಗಳಿಗೆ ಮಾಡುವ ಹಾನಿ," ಎಂದು ಹೇಳಿದ್ದಾರೆ. ಮುಂಬೈನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ಉದ್ಧವ್ ಠಾಕ್ರೆಗೆ ಗರ್ವನರ್ ಭಗತ್ ಸಿಂಗ್ ಕೋಶಿಯಾರಿ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಪತ್ರ ಬರೆದಿರುವ ಉದ್ದವ್ ಠಾಕ್ರೆ, "ಗವರ್ನರ್ ಭಗತ್ ಸಿಂಗ್ ಕೋಶಿಯಾರಿ ಮಹಿಳೆಯರ ಸುರಕ್ಷತೆಯ ಬಗ್ಗೆ ಅಧಿಕ ಕಾಳಜಿಯುತರಾಗಿದ್ದಾರೆ ಎಂದು ಈ ಪತ್ರದ ಮೂಲಕ ತಿಳಿದು ಬಂದಿದೆ," ಎಂದು ಕುಹಕವಾಡಿದ್ದಾರೆ.
"ಮುಂಬೈನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನೀವು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ಹೇಳಿರುವ ಭಾವನೆಯನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ನೀವು ರಾಜಕೀಯ ಕಾರ್ಯಕರ್ತರ ಆತ್ಮವನ್ನು ಹೊಂದಿದ್ದೀರಿ. ಆದರೆ ನೀವು ಕೊಟ್ಟ ಈ ನಿರ್ದೇಶನವು ಹೊಸ ವಿವಾದವನ್ನು ಹುಟ್ಟು ಹಾಕುತ್ತದೆ," ಎಂದು ತಿಳಿಸಿದ್ದಾರೆ.
ಮುಂಬೈನ ಸಾಕಿನಾಕದಲ್ಲಿ ಈ ತಿಂಗಳ ಆರಂಭದಲ್ಲಿ 34 ವರ್ಷದ ಮಹಿಳೆಯೊಬ್ಬರ ಮೇಲೆ ಮಾರ್ಗ ಬದಿಯಲ್ಲಿ ನಿಂತಿದ್ದ ಟೆಂಪೋ ಒಳಗಡೆ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪಿ 45 ವರ್ಷದ ವ್ಯಕ್ತಿಯೂ ಮಹಿಳೆಗೆ ರಾಡ್ನಿಂದ ಚಿತ್ರಹಿಂಸೆ ನೀಡಿದ್ದಾನೆ ಎಂದು ಹೇಳಲಾಗಿದೆ. ಮಹಿಳೆಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ.
ಈ ಹಿಂದೆ ಹೊಗಳುತ್ತಿದ್ದ ಬಿಜೆಪಿಗೆ ಈಗ ಸೋನು ಸೂದ್ ತೆರಿಗೆ ವಂಚಕ: ಶಿವಸೇನೆ
ಗವರ್ನರ್ ಪತ್ರದ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, "ರಾಜ್ಯ ಸರ್ಕಾರವನ್ನು ವಿರೋಧ ಮಾಡುವ ವಿರೋಧ ಪಕ್ಷದವರು ಯಾವ ಬೇಡಿಕೆಯನ್ನು ಮಾಡುತ್ತಾರೋ, ಅದೇ ಬೇಡಿಕೆಯನ್ನು ಗವರ್ನರ್ ನೀಡಿರುವುದು ಸಂಸದೀಯ ಪ್ರಜಾಪ್ರಭುತ್ವದ ಕಾರ್ಯವಿಧಾನಗಳ ಮೇಲೆ ಮಾಡುವ ಹಾನಿ. ರಾಜ್ಯವು ಇಂತಹ ಮಹಿಳಾ ವಿರೋಧಿ ಚಟುವಟಿಕೆಗಳ ವಿರುದ್ದ ಕ್ರಮಕೈಗೊಳ್ಳುತ್ತದೆ," ಎಂದು ಹೇಳಿದ್ದಾರೆ.
ಇನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಆಗಿರುವ ಅತ್ಯಾಚಾರ ಪ್ರಕರಣಗಳನ್ನು, ಹಾಗೆಯೇ ಕೇಂದ್ರ ಸರ್ಕಾರ ಪೊಲೀಸ್ ನಿಯಂತ್ರಣ ಮಾಡುವ ದೆಹಲಿಯಲ್ಲಿ ಆಗಿರುವ ಅತ್ಯಾಚಾರ ಪ್ರಕರಣಗಳ ಉಲ್ಲೇಖವನ್ನು ಮಾಡಿದ್ದಾರೆ. "ಉತ್ತರಾಖಂಡ ನಿಮ್ಮ ಹುಟ್ಟೂರು ಆಗಿದೆ. ಇದನ್ನು ದೇವ ಭೂಮಿ ಎಂದು ಕೂಡಾ ಕರೆಯಲಾಗುತ್ತದೆ. ಆದರೆ ಸರ್ಕಾರದ ಅಧಿಕೃತ ಮಾಹಿತಿಯು ಈ ರಾಜ್ಯದಲ್ಲಿ ಮಹಿಳೆಯರ ಮೇಲಿಕ ದೌರ್ಜನ್ಯ ಪ್ರಕರಣಗಳು ಶೇಕಡ 150 ಪಟ್ಟು ಅಧಿಕವಾಗಿದೆ ಎಂದು ತೋರಿಸುತ್ತದೆ. ಅಲ್ಲಿ ವಿಶೇಷ ಅಧಿವೇಶನವನ್ನು ಕರೆಯಬಹುದೇ?," ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಆಡಳಿತದಲ್ಲಿರುವ ನೆರೆಯ ಗುಜರಾತ್ನಲ್ಲಿ ಕಳೆದ ಎರಡು ವರ್ಷಗಳಲ್ಲಿ 14,229 ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಬರೆದಿದ್ದಾರೆ. "ಗುಜರಾತ್ ಪೋಲಿಸ್ ವರದಿಯು ಕನಿಷ್ಠ 14 ಮಹಿಳೆಯರು ಪ್ರತಿನಿತ್ಯ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯವನ್ನು ಎದುರಿಸುತ್ತಿದೆ ಎಂದು ಹೇಳುತ್ತದೆ. ಹೀಗೆ ಮುಂದುವರಿದರೆ, ಗುಜರಾತ್ನಲ್ಲಿ ಕನಿಷ್ಠ ಒಂದು ತಿಂಗಳ ಅವಧಿಯ ಅಧಿವೇಶನ ನಡೆಸಬೇಕಾಗುತ್ತದೆ. ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಅನೇಕ ದಾಳಿಗಳ ಹೊರತಾಗಿಯೂ, ಬಿಜೆಪಿ ವಿಶೇಷ ಅಧಿವೇಶನಕ್ಕೆ ಯಾವುದೇ ಬೇಡಿಕೆ ಇಟ್ಟಿಲ್ಲ," ಎಂದು ಪತ್ರದಲ್ಲಿ ಹೇಳಿದ್ದಾರೆ.
(ಒನ್ ಇಂಡಿಯಾ ಸುದ್ದಿ)