ಭಿಕ್ಷುಕನ ಬಳಿ ಲಕ್ಷಾಂತರ ಹಣ, ನಾಣ್ಯ ಎಣಿಸಲು ಬೇಕಾಯ್ತು ಎಂಟು ಗಂಟೆ!
ಮುಂಬೈ, ಅಕ್ಟೋಬರ್ 07: ಮುಂಬೈ ನಗರದಲ್ಲಿ ಭಿಕ್ಷೆ ಬೇಡುತ್ತಿದ್ದ ಬಿರ್ಬಿಚಂದ್ ಆಜಾದ್ ಬಳಿ 10 ಲಕ್ಷ ರೂಪಾಯಿಗೂ ಅಧಿಕ ಹಣ ಪತ್ತೆಯಾಗಿದೆ.
ಭಿಕ್ಷುಕ ಬಿರ್ಬಿಚಂದ್ ಶುಕ್ರವಾರ ರಾತ್ರಿ ರೈಲ್ವೆ ಹಳಿ ದಾಟುವ ಸಮಯ ರೈಲು ಢಿಕ್ಕಿ ಹೊಡೆದು ನಿಧನಹೊಂದಿದ್ದಾನೆ. ಪ್ರಕರಣ ಸಂಬಂಧ ರೈಲ್ವೆ ಪೊಲೀಸರು ಬಿರ್ಬಿಚಂದ್ ವಾಸವಿದ್ದ ಮನೆಗೆ ಭೇಟಿ ನೀಡಿದಾಗ ಅವರಿಗೆ ಆಶ್ಚರ್ಯವಾಗಿದೆ. ಅವರು ಕೈಇಟ್ಟಲ್ಲೆಲ್ಲಾ ಹಣವೇ ದೊರಕಿದೆ ಅವರಿಗೆ.
ಹೌದು ಭಿಕ್ಷಾಟನೆ ಮಾಡುತ್ತಿದ್ದ ಬಿರ್ಬಿಚಂದ್ ತನ್ನ ಸಣ್ಣ ಕೊಠಡಿಯಲ್ಲಿ ಸಿಕ್ಕ-ಸಿಕ್ಕಲ್ಲೆಲ್ಲಾ ನಾಣ್ಯಗಳನ್ನು ತುಂಬಿಸಿಟ್ಟಿದ್ದ. ಬಕೆಟ್ಗಳಲ್ಲಿ, ಪಾತ್ರೆಗಳಲ್ಲಿ, ಬ್ಯಾಗುಗಳಲ್ಲಿ, ಎಲ್ಲೆಂದರಲ್ಲಿ ಬರೀಯ ನಾಣ್ಯಗಳೇ ಸಿಕ್ಕವು ಪೊಲೀಸರಿಗೆ. ಇವನ್ನೆಲ್ಲಾ ಒಟ್ಟು ಮಾಡಿ ಎಣಿಸುವಷ್ಟರಲ್ಲಿ ಪೊಲೀಸರಿಗೆ ಸಾಕು-ಸಾಕಾಯಿತು.
ಬಿರ್ಬಿಚಂದ್ ಮನೆಯಲ್ಲಿ ಸಿಕ್ಕ ನಾಣ್ಯಗಳೇ 1.77 ಲಕ್ಷ ಮೌಲ್ಯದ್ದಾಗಿದ್ದವು. ನಾಣ್ಯಗಳ ಜೊತೆಗೆ ಕೆಲವು ಎಫ್ಡಿ ಸ್ಲಿಪ್ಗಳೂ ಸಿಕ್ಕಿದ್ದು, ಇವುಗಳ ಒಟ್ಟು ಮೌಲ್ಯ 8.70 ಲಕ್ಷ. ಒಟ್ಟು ಬರೋಬ್ಬರಿ 10.47 ಲಕ್ಷ ಹಣ ಭಿಕ್ಷುಕ ಬಿರ್ಬಿಚಂದ್ ಸಂಪಾದಿಸಿದ್ದರು.
ಮುಂಬೈನಲ್ಲಿ ಹಲವು ವರ್ಷಗಳಿಂದ ಬದುಕಿದ್ದ ಬಿರ್ಬಿಚಂದ್ ನ ಮೂಲ ರಾಜಸ್ಥಾನವೆಂಬುದು ಆತನ ಆಧಾರ್ ಗುರುತಿನ ಚೀಟಿಯಿಂದ ಗೊತ್ತಾಗಿದೆ. ಆತನಿಗೆ ಪ್ಯಾನ್ ಕಾರ್ಡ್ ಸಹ ಇದ್ದು, ಹಲವು ಬ್ಯಾಂಕ್ಗಳಲ್ಲಿ ಖಾತೆಗಳಿವೆ.
ಪೊಲೀಸರು ಬಿರ್ಬಿಚಂದ್ನ ಮೃತದೇಹದ ಅಂತಿಮಕಾರ್ಯ ಪೂರೈಸಿದ್ದು, ಬಿರ್ಬಿಚಂದ್ನ ಸಂಬಂಧಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ರಾಜಸ್ಥಾನ ಪೊಲೀಸರ ನೆರವನ್ನು ಈಗಾಗಲೇ ಮುಂಬೈ ಪೊಲೀಸರು ಕೇಳಿದ್ದು, ಬಿರ್ಬಿಚಂದ್ ಸಂಪಾದಿಸಿದ್ದ ಹಣ ನಿಯಮಪ್ರಕಾರ ಸೇರಬೇಕಾದವರಿಗೆ ಸೇರಿಸುವ ಕಾರ್ಯ ಮಾಡುತ್ತಿದ್ದಾರೆ.