ಟಿಕೆಟ್ ಸಿಗದಾಗ ಬೇಸರ ಆಗೋದು ಸಹಜ, ನಾವು ಸರಿ ಮಾಡ್ತೀವಿ: ಸಿಎಂ
Recommended Video
ಮೈಸೂರು, ಏಪ್ರಿಲ್ 17: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ ಆಗುತ್ತಿದ್ದಂತೆ ಹಲವೆಡೆ ಬಂಡಾಯಗಳು ಮೊದಲಾಗಿದ್ದು, ಪ್ರತಿಭಟನೆಗಳು ಅಸಮಾಧಾನಗಳು ಹೊಗೆ ಆಡುತ್ತಿವೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು 'ಅವೆಲ್ಲಾ ಸಹಜ ಕಣ್ರೀ' ಎಂದಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಚುನಾವಣೆ ಸಂದರ್ಭ ಟಿಕೆಟ್ ಸಿಗದಿದ್ದಕ್ಕೆ ಕೆಲವರು ಅಸಮಾಧಾನಗೊಂಡಿದ್ದಾರೆ. ಅದು ಸಹಜ, ಅದೆಲ್ಲವನ್ನು ನಾವು ಶಮನ ಮಾಡುತ್ತೇವೆ ಎಂದು ಅವರು ಹೇಳಿದರು.
ಕೋಲಾರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದ ವಿ.ಆರ್. ಸುದರ್ಶನ್ ಅವರು ಈಗಾಗಲೇ ಕೆಪಿಸಿಸಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಈ ಬಗ್ಗೆ ಮಾತನಾಡಿ 'ಸುದರ್ಶನ್ ಪಕ್ಷ ಬಿಡಲ್ಲ, ಟಿಕೆಟ್ ಸಿಗದೆ ಬೇಸರಗೊಂಡಿದ್ದಾರೆ, ಪಕ್ಷ ಬಿಡಲ್ಲ ಎಂಬ ವಿಶ್ವಾಸವಿದೆ' ಎಂದರು.
ಮೊಳಕಾಲ್ಮೂರಿನಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿರುವ ತಿಪ್ಪೇಸ್ವಾಮಿ ಕಾಂಗ್ರೆಸ್ ಸೇರಲು ಆಸಕ್ತಿವ್ಯಕ್ತಪಡಿಸಿದ್ದು, ಅವರು ಕಾಂಗ್ರೆಸ್ನಿಂದ ಟಿಕೆಟ್ ಕೇಳಿದ್ದಾರೆ, ಆದರೆ ಈಗಾಗಲೇ ತಡವಾಗಿದೆ' ಎಂದು ಹೇಳಿದ್ದಾಗಿ ಸಿದ್ದರಾಮಯ್ಯ ಹೇಳಿದರು.
ಮೊಳಕಾಲ್ಮೂರುವಿನಲ್ಲಿ ನ್ಯಾಸ ನಾಯಕರೇ ಹೆಚ್ಚಿಗಿದ್ದಾರೆ ಹಾಗಾಗಿ ಅವರ ಸಮುದಾಯದ ಮುಖಂಡರಿಗೇ ನಾವು ಟಿಕೆಟ್ ಕೊಟ್ಟಿದ್ದೇವೆ. ಅವರೇ ಗೆಲ್ತಾರೆ ಅನ್ನುವ ವಿಶ್ವಾಸವಿದೆ ಎಂದರು. ಮೊಳಕಾಲ್ಮೂರುವಿನಲ್ಲಿ ಡಾ.ಬಿ.ಯೋಗೇಶ್ ಬಾಬು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಕುಮಾರಸ್ವಾಮಿ ಅವರು 'ಸಿಎಂ ಅವರು ಚಾಮುಂಡೇಶ್ವರಿ ಕ್ಷೇತ್ರದ ಸಂಬಂಧ ಕಡಿದುಕೊಮಡು 15 ವರ್ಷವಾಗಿದೆ' ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ 'ಏನ್ರಿ ಅವರೇನು ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ರಾ..ಮುಖ್ಯಮಂತ್ರಿ ಯಾಗಿ ಇಳಿದ ಮೇಲೆ ಚಾಮುಂಡೇಶ್ವರಿ ಕಡೆ ತಲೆ ಹಾಕಿದ್ದಾರಾ' ಎಂದು ಪ್ರಶ್ನಿಸಿದರು.
ಸಿಎಂ ನನ್ನ ವಿರುದ್ಧವೇ ಸ್ಪರ್ಧಿಸಲಿ ಎಂದು ಕುಮಾರಸ್ವಾಮಿ ಹಾಕಿರುವ ಸವಾಲಿಗೆ ಉತ್ತರಿಸಿದ ಸಿದ್ದರಾಮಯ್ಯ 'ಅವರ ಹಂತಕ್ಕೆ ಇಳಿದು ನಾನು ಮಾತನಾಡಲಾರೆ, ಅಷ್ಟೊಂದು ಗೆಲ್ಲುವ ಛಲ ಇರುವವರು ಚಿಕ್ಕಬಳ್ಳಾಪುರದಲ್ಲಿ ಏಕೆ ಗೆಲ್ಲಲಿಲ್ಲ, ಕುಮಾರಸ್ವಾಮಿ ಅವರ ಪತ್ನಿ ಅನಿತಾ ಅವರು ಚನ್ನಪಟ್ಟಣದಲ್ಲಿ ಏಕೆ ಸೋತರು' ಎಂದು ಪ್ರಶ್ನಿಸಿದರು.