ಕಪಿಲ್ ವಾಧವನ್ ಫ್ಯಾಮಿಲಿ ಎಡವಟ್ಟು: 'ದಕ್ಷ' IPS ಅಧಿಕಾರಿಗೆ ಕಳಂಕ.!
ಮುಂಬೈ: ಯೆಸ್ ಬ್ಯಾಂಕ್ ಮತ್ತು ಪಿಎಂಸಿ ಬ್ಯಾಂಕ್ ಪ್ರಕರಣಗಳಲ್ಲಿ ಸಿಲುಕಿ, ದೇಶದಾದ್ಯಂತ ಸದ್ದು ಮಾಡಿದ್ದ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿ.ಎಚ್.ಎಫ್.ಎಲ್) ನ ಕಪಿಲ್ ವಾಧವನ್ ಇತ್ತೀಚೆಗಷ್ಟೇ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದರು.
ಮಾರಣಾಂತಿಕ ಕೋವಿಡ್-19 ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ವಿಧಿಸಿದ್ದರೂ, ಅದಕ್ಕೆ ಕಿಮ್ಮತ್ತು ಕೊಡದೆ ಕುಟುಂಬದ ಜೊತೆಗೆ ಪುಣೆ ಬಳಿಯ ಖಂಡಾಲಾದಿಂದ ಸತಾರಾ ಜಿಲ್ಲೆಯ ಮಹಾಭಲೇಶ್ವರ್ ಗೆ ಕಪಿಲ್ ವಾಧವನ್ ಜಾಲಿ ಟ್ರಿಪ್ ಕೈಗೊಂಡಿದ್ದರು. ಲಾಕ್ ಡೌನ್ ಮಧ್ಯೆ ಐದು ಕಾರುಗಳಲ್ಲಿ 250 ಕಿಲೋ ಮೀಟರ್ ಪ್ರಯಾಣಿಸಿದ್ದ ವಾಧವನ್ ಫ್ಯಾಮಿಲಿ ಸದಸ್ಯರ ವಿರುದ್ಧ ದೂರು ದಾಖಲಾಗಿದೆ.
ಈ ಮಧ್ಯೆ ಖಂಡಾಲಾದಿಂದ ಮಹಾಭಲೇಶ್ವರ್ ಗೆ ಪ್ರಯಾಣ ಮಾಡಲು ವಾಧವನ್ ಕುಟುಂಬಕ್ಕೆ ಅನುಮತಿ ಕೊಟ್ಟಿದ್ದು ಹಿರಿಯ ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ ಎಂಬ ಮಾತುಗಳು ಕೇಳಿಬರುತ್ತಿವೆ.
'ಫ್ಯಾಮಿಲಿ ಎಮರ್ಜೆನ್ಸಿ' ಎಂಬ ನೆಪವೊಡ್ಡಿ ಮಹಾರಾಷ್ಟ್ರ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಮಿತಾಬ್ ಗುಪ್ತಾ ಬಳಿ ಕಪಿಲ್ ವಾಧವನ್ ಕುಟುಂಬ ಪಾಸ್ ಪಡೆದಿದ್ದರಂತೆ. ಅಮಿತಾಬ್ ಗುಪ್ತಾ ನೀಡಿದ್ದ ಪರ್ಮಿಷನ್ ಲೆಟರ್ ನಲ್ಲಿ ವಾಧವನ್ ಫ್ಯಾಮಿಲಿ ಪ್ರಯಾಣಿಸುವ ಆರು ಕಾರುಗಳು ಮತ್ತು ಅದರಲ್ಲಿ ಪ್ರಯಾಣ ಮಾಡುವ 23 ಮಂದಿಯ ಪಟ್ಟಿಯೂ ಇತ್ತಂತೆ. ಅಲ್ಲದೇ, ಅಮಿತಾಬ್ ಗುಪ್ತಾ ನೀಡಿದ್ದ ಪರ್ಮಿಷನ್ ಲೆಟರ್ ನಲ್ಲಿ ''ವಾಧವನ್ ನಮ್ಮ ಕುಟುಂಬದ ಸ್ನೇಹಿತರು. ಹೀಗಾಗಿ ಪ್ರಯಾಣಿಸಲು ಅವರಿಗೆ ಅವಕಾಶ ನೀಡಿ'' ಅಂತ ಬರೆದಿದ್ದರು ಎಂದು ವರದಿ ಆಗಿದೆ.
ಬಂದವರಿಗೆಲ್ಲ Yes... ಆಯಿತು Yes Bank ಠುಸ್!
ಈ ಪ್ರಕರಣ ಸದ್ಯ ಮಹಾರಾಷ್ಟ್ರದಲ್ಲಿ ವಿವಾದಾತ್ಮಕ ತಿರುವು ಪಡೆದುಕೊಂಡಿದ್ದು, ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಅಮಿತಾಬ್ ಗುಪ್ತಾ ವಿರುದ್ಧ ಆರೋಪ ಕೇಳಿಬಂದಿರುವುದಕ್ಕೆ ಮುಂಬೈ ಪೊಲೀಸರೇ ಆಘಾತಗೊಂಡಿದ್ದಾರೆ.
1992 ಬ್ಯಾಚ್ ಐಪಿಎಸ್ ಆಫೀಸರ್
ಐಐಟಿ ಪದವೀಧರ ಅಮಿತಾಬ್ ಗುಪ್ತಾ 1992 ಬ್ಯಾಚ್ ನ ಐಪಿಎಸ್ ಅಧಿಕಾರಿ. ಇಲ್ಲಿಯವರೆಗೂ ಡೆಪ್ಯೂಟಿ ಇನ್ಸ್ ಪೆಕ್ಟರ್ ಜನರಲ್ (ಆಡಳಿತ), ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ ವಲಯ), ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾಗಿ ಹಲವು ಹುದ್ದೆಗಳಲ್ಲಿ ಅಮಿತಾಬ್ ಗುಪ್ತಾ ಕಾರ್ಯನಿರ್ವಹಿಸಿದ್ದಾರೆ. ಈವರೆಗೂ ಯಾವುದೇ ಕಾಂಟ್ರವರ್ಸಿಯಲ್ಲಿ ಸಿಲುಕದ ಅಮಿತಾಬ್ ಗುಪ್ತಾ ಹೆಸರು ಇದೀಗ 'ವಾಧವನ್ ಫ್ಯಾಮಿಲಿ ಟ್ರಿಪ್' ವಿವಾದದಲ್ಲಿ ತಳುಕು ಹಾಕಿಕೊಂಡಿದೆ.
ಬೇರೆಯವರ ಕೈವಾಡ ಇದೆ
''ಲಾಕ್ ಡೌನ್ ವೇಳೆ ಪ್ರಯಾಣ ಮಾಡಲು ವಾಧವನ್ ಕುಟುಂಬಕ್ಕೆ ಗುಪ್ತಾ ಸರ್ ಪರ್ಮಿಷನ್ ಕೊಡಲು ಸಾಧ್ಯವೇ ಇಲ್ಲ. ಇದರ ಹಿಂದೆ ಬೇರೆಯವರ ಕೈವಾಡ ಖಂಡಿತ ಇದೆ'' ಎನ್ನುತ್ತಾರೆ ಮುಂಬೈನ ಓರ್ವ ಪೊಲೀಸ್ ಅಧಿಕಾರಿ.
ಹಲವು ಪ್ರಕರಣಗಳು ರೀ-ಓಪನ್
ಉತ್ತರ ಪ್ರದೇಶ ಮೂಲದ ಅಮಿತಾಬ್ ಗುಪ್ತಾ ಮುಂಬೈ ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದಾಗ ರವಿ ಪೂಜಾರಿ ಸೇರಿದಂತೆ ಹಲವು ಭೂಗತ ಪಾತಕಿಗಳನ್ನು ಒಳಗೊಂಡಿದ್ದ ಸುಮಾರು 20 ಪ್ರಕರಣಗಳನ್ನು ರೀ-ಓಪನ್ ಮಾಡಿಸಿದ್ದರು. ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.
ಮೃದು ಸ್ವಭಾವದ ವ್ಯಕ್ತಿ
''ಮನಸ್ಸಿನಲ್ಲಿ ಅಂದುಕೊಂಡಿದ್ದನ್ನ ನೇರವಾಗಿ ಹೇಳುತ್ತಿದ್ದ ಅಮಿತಾಬ್ ಗುಪ್ತಾ ಯಾರನ್ನೂ ನೋಯಿಸಿದವರಲ್ಲ. ಅವರು ಮೃದು ಸ್ವಭಾವದ ವ್ಯಕ್ತಿ. ಹೆಚ್ಚಾಗಿ ಕೋಪ ಮಾಡಿಕೊಳ್ಳುತ್ತಿರಲಿಲ್ಲ. ಎಷ್ಟೇ ಬಿಜಿಯಿದ್ದರೂ, ದಿನದ ಅಂತ್ಯಕ್ಕೆ ಎಲ್ಲಾ ಫೈಲ್ ಗಳನ್ನು ಕ್ಲಿಯರ್ ಮಾಡುತ್ತಿದ್ದರು'' ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಾರ್ಯದಕ್ಷತೆ ಮೆಚ್ಚಿ
ಅಮಿತಾಬ್ ಗುಪ್ತಾ ಅವರ ಕಾರ್ಯದಕ್ಷತೆಯನ್ನು ಮೆಚ್ಚಿ, ಅವರನ್ನು ಆಗಸ್ಟ್ 2018 ರಲ್ಲಿ ಮಹಾರಾಷ್ಟ್ರ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಅಂದಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇಮಕ ಮಾಡಿದ್ದರು. ಅಮಿತಾಬ್ ಗುಪ್ತಾ ಅವರ ಪ್ರಾಮಾಣಿಕತೆಯಿಂದಾಗಿ ಅದೇ ಹುದ್ದೆಯಲ್ಲಿ ಮುಂದುವರೆಯುವಂತೆ ಮಹಾರಾಷ್ಟ್ರದ ಪ್ರಸ್ತುತ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೂಚಿಸಿದ್ದರು.
|
ದೇವೇಂದ್ರ ಫಡ್ನವಿಸ್ ಟ್ವೀಟ್
ಇದೀಗ ವಾಧವನ್ ಕುಟುಂಬದ ವಿವಾದದ ಬಗ್ಗೆ ಅಮಿತಾಬ್ ಗುಪ್ತಾ ಅವರನ್ನು ಸಮರ್ಥಿಸಿಕೊಂಡು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಟ್ವೀಟ್ ಕೂಡ ಮಾಡಿದ್ದಾರೆ.
ಕಡ್ಡಾಯ ರಜೆ ಮೇಲೆ ತೆರಳಲು ಸೂಚನೆ
ಲಾಕ್ ಡೌನ್ ವೇಳೆ ವಾಧವನ್ ಕುಟುಂಬ ಕೈಗೊಂಡಿದ್ದ ಜಾಲಿ ಟ್ರಿಪ್ ಮಹಾರಾಷ್ಟ್ರದಲ್ಲಿ ವಿವಾದದ ಕಿಡಿ ಹೊತ್ತಿಸಿದ್ದರೂ, ಇಲ್ಲಿಯವರೆಗೂ ಅಮಿತಾಬ್ ಗುಪ್ತಾ ಮೌನ ಮುರಿದಿಲ್ಲ. ಆದ್ರೆ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತ್ರ ಅಮಿತಾಬ್ ಗುಪ್ತಾ ಮೇಲೆ ಮುನಿಸಿಕೊಂಡು ಕಡ್ಡಾಯ ರಜೆ ಮೇಲೆ ತೆರಳಲು ಆದೇಶ ನೀಡಿದ್ದಾರೆ. ಸಾಲದಕ್ಕೆ ಘಟನೆ ಕುರಿತಂತೆ ತನಿಖೆ ನಡೆಸಿ, ವರದಿ ನೀಡುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಫೈನಾನ್ಸ್) ಮನೋಜ್ ಸೌನಿಕ್ ರನ್ನು ನೇಮಕ ಮಾಡಿದ್ದಾರೆ.