ಥಾಣೆ ಪಾಲಿಕೆಯಲ್ಲಿ ಕನ್ನಡತಿ ಮೀನಾಕ್ಷಿ ಪೂಜಾರಿ ದರ್ಬಾರ್
ಬೆಳಗಾವಿ ಮೇಯರ್ ಹುದ್ದೆ ಕನ್ನಡಿಗರ ಕೈತಪ್ಪಿ ಮರಾಠಿಗರ ಪಾಲಾಗಿದೆ. ಆದರೆ ಅಚ್ಚರಿಯ ವಿಷಯ ಅಂದ್ರೆ ಮರಾಠಿಗರೇ ತುಂಬಿರುವ ಥಾಣೆ ಮೇಯರ್ ಹುದ್ದೆ ಕನ್ನಡತಿಯ ಪಾಲಾಗಿದೆ.
ಬೆಂಗಳೂರು. ಮಾರ್ಚ್ 6: ಬೆಳಗಾವಿ ಮೇಯರ್ ಹುದ್ದೆ ಕನ್ನಡಿಗರ ಕೈತಪ್ಪಿ ಮರಾಠಿಗರ ಪಾಲಾಗಿದೆ. ಆದರೆ ಅಚ್ಚರಿಯ ವಿಷಯ ಅಂದ್ರೆ ಮರಾಠಿಗರೇ ತುಂಬಿರುವ ಥಾಣೆ ಮೇಯರ್ ಹುದ್ದೆ ಕನ್ನಡತಿಯ ಪಾಲಾಗಿದೆ.
ಪ್ರತಿಷ್ಠಿತ ಮುಂಬಯಿ ಉಪನಗರದ ಥಾಣೆ ಮಹಾನಗರ ಪಾಲಿಕೆ (ಟಿಎಂಸಿ) ಮೇಯರ್ ಆಗಿ ಉಡುಪಿ ಮೂಲದ ಬಿಲ್ಲವ ಸಮುದಾಯಕ್ಕೆ ಸೇರಿದ ಮೀನಾಕ್ಷಿ ಶಿಂಧೆ (ಪೂಜಾರಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.[ಮುಂಬೈ ಪಾಲಿಕೆ ಗದ್ದುಗೆ ಹಿಡಿಯಲಿದೆಯಾ ಕಾಂಗ್ರೆಸ್-ಶಿವಸೇನೆ?]
ಸತತ ಮೂರನೇ ಬಾರಿಗೆ ಆಯ್ಕೆ
ಮೀನಾಕ್ಷಿ ಥಾಣೆಯ ಮಾನ್ಪಾಡ ಮನೋರಮಾ ನಗರದ 3ಸಿ ವಾರ್ಡ್ನಿಂದ ಶಿವಸೇನಾ ಪಕ್ಷದ ಅಭ್ಯರ್ಥಿಯಾಗಿ ಸತತ ಮೂರನೇ ಬಾರಿಗೆ ಸ್ಪರ್ಧಿಸಿ ವಿಜೇತರಾಗಿದ್ದರು. ಮೀನಾಕ್ಷಿಯವರ ವಾರ್ಡ್ನಲ್ಲಿ ಈ ಬಾರಿ ಬಿಜೆಪಿ, ಕಾಂಗ್ರೆಸ್, ಎನ್ಸಿಪಿ, ಎಂಎನ್ಎಸ್ ಸೇರಿದಂತೆ ಐದು ಪಕ್ಷಗಳ ಅಭ್ಯರ್ಥಿಗಳಿಂದ ಪಂಚಕೋನ ಸ್ಪರ್ಧೆ ಏರ್ಪಾಡಿತ್ತು. ಈ ಪೈಕಿ ಮೀನಾಕ್ಷಿ ಪೂಜಾರಿ ದಾಖಲೆ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದರು.
ಉಡುಪಿಯಿಂದ ಥಾಣೆಗೆ
ಮೀನಾಕ್ಷಿ ಉಡುಪಿ ಜಿಲ್ಲೆಯ ಕಟಪಾಡಿ ಎಣಗುಡ್ಡೆ ನಿವಾಸಿ ದಿ| ಗುರುವ ಕಾಂತಪ್ಪ ಪೂಜಾರಿಯವರ ಪುತ್ರಿಯಾಗಿದ್ದಾರೆ. ಇವರನ್ನು ಥಾಣೆಯ ರಾಜೇಂದ್ರ ಶಿಂಧೆಯವರಿಗೆ ಮದುವೆ ಮಾಡಿ ಕೊಡಲಾಗಿತ್ತು. ನಂತರ ಅವರ ಹೆಸರು ಮೀನಾಕ್ಷಿ ಶಿಂಧೆಯಾಗಿ ಬದಲಾಗಿತ್ತು. ಅವರನ್ನು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಮೇಯರ್ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದು ಆಯ್ಕೆ ಮಾಡಿದ್ದರು.[ಮುಂಬೈ ಮೇಯರ್ ಗಾದಿಗೆ ಬಿಜೆಪಿ-ಶಿವಸೇನೆ ಮಧ್ಯೆ ಬಿಗ್ ಫೈಟ್]
ಶಿವಸೇನೆಗೆ ಸರಳ ಬಹುಮತ
ಥಾಣೆ ಮಹಾನಗರ ಪಾಲಿಕೆಯ ಒಟ್ಟು 131 ಸ್ಥಾನಗಳಲ್ಲಿ ಶಿವಸೇನೆ ಪಕ್ಷವು 67 ಸ್ಥಾನಗಳಲ್ಲಿ ಜಯಗಳಿತ್ತು. ಎನ್ಸಿಪಿ 34, ಬಿಜೆಪಿ 23, ಕಾಂಗ್ರೆಸ್ 03, ಪಕ್ಷೇತರರು 04 ಸ್ಥಾನಗಳಲ್ಲಿ ಗೆದ್ದಿದ್ದರು. 67 ಸ್ಥಾನಗಳಲ್ಲಿ ಗೆದ್ದು ಶಿವಸೇನೆ ಇಲ್ಲಿ ಸರಳ ಬಹುಮತ ಗಳಿಸಿತ್ತು.
ಮೀನಾಕ್ಷಿ ಅವಿರೋಧ ಆಯ್ಕೆ
ಮಾರ್ಚ್ 2ರಂದೇ ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದ ಮೀನಾಕ್ಷಿ ಪೂಜಾರಿ ಅಂದೇ ಮೇಯರ್ ಆಗಿ ಆಯ್ಕೆ ಆಗಿದ್ದರು. ಆದರೆ ಚುನಾವಣಾ ಆಯೋಗದ ನಿಯಮಾನುಸಾರ ಅಧಿಕೃತವಾಗಿ ಸೋಮವಾರ ಮೀನಾಕ್ಷಿ ಪೂಜಾರಿ ಅವರನ್ನು ಥಾಣೆ ಮೇಯರ್ ಎಂದು ಪ್ರಕಟಿಸಿತು.
ಅಭಿನಂದನಾ ಸಂಭ್ರಮಾಚರಣೆ
ಥಾಣೆ ಮೇಯರ್ ಪಟ್ಟವನ್ನಲಂಕರಿಸಿದ ಮೀನಾಕ್ಷಿ ಪೂಜಾರಿ ಅವರನ್ನು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಸರ್ವ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.