ರಂಗಭೂಮಿ, ಚಿತ್ರರಂಗ ಕಲಾವಿದ ಸದಾಶಿವ ಸಾಲ್ಯಾನ್ ಇನ್ನಿಲ್ಲ
ಮುಂಬೈ, ಜು.9: ನಾಟಕ ರಂಗದಲ್ಲಿ ಬೆಳೆದು ನಂತರ ಕನ್ನಡ, ತುಳು ಚಿತ್ರರಂಗದಲ್ಲಿ ಮಿಂಚಿದ ಧೀಮಂತ ಕಲಾವಿದ ಸದಾಶಿವ ಸಾಲ್ಯಾನ್ ಅವರು ಭಾನುವಾರದಂದು ಮುಂಬೈನ ಸ್ವಗೃಹದಲ್ಲಿ ನಿಧನರಾದರು ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.
ಡಾ. ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್ ಅವರ ಅಭಿನಯದ ಚಿತ್ರಗಳಲ್ಲಿ ಸದಾಶಿವ ಅವರು ನಟಿಸಿದ್ದರು.
ಸದಾಶಿವ ಅವರು ಬಹುಕಾಲದಿಂದ ಬಳಲುತ್ತಿದ್ದರು. ಸದಾಶಿವ ಅವರಿಗೆ 68 ವರ್ಷ ವಯಸ್ಸಾಗಿತ್ತು. ಮುಂಬೈನ ಮೀರಾ ರೋಡ್ನ ಸ್ವಗೃಹದಲ್ಲಿ ನಿಧನ ಹೊಂದಿದರು.
ಸುಮಾರು 50 ಚಿತ್ರಗಳಲ್ಲಿ ನಟಿಸಿದ ಏಕೈಕ ಮುಂಬೈ-ಕರ್ನಾಟಕ ಭಾಗದ ರಂಗ ಕಲಾವಿದನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಇವರು, ನಾವಿಂದು ಭಾಗ್ಯವಂತೆದಿ, ಬದ್ಕೆರೆ ಬುಡ್ಲೆ, ಪಟ್ಟಾಯಿ ಪಿಲಿ, ಸತ್ಯ ಓಲುಂಡು, ದಾರೆದ ಸೀರೆ, ಸಮರ ಸಿಂಹ, ಇವಳಂತ ಹೆಂಡ್ತಿ, ಅನಾಥ ರಕ್ಷಕ, ಸಿಡಿದೆದ್ದ ಪಾಂಡವರು, ಕಾಲೇಜು ರಂಗ, ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೂ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಮೃತರು ಪತ್ನಿ ಸುಶೀಲಾ, ಎರಡು ಹೆಣ್ಣು ಮಕ್ಕಳು ಶ್ವೇತಾ ಹಾಗೂ ವಿಜೇತಾ ಸೇರಿದಂತೆ ಬಂಧು ಬಳಗ, ಕಲಾಭಿಮಾನಿಗಳನ್ನು ಅಗಲಿದ್ದಾರೆ.
1950ರ ನವೆಂಬರ್ 17ರಂದು ಉಡುಪಿಯ ತೆಂಕ ಎರ್ಮಾಳ್ ನಿವಾಸಿಗಳಾದ ಪದ್ಮನಾಭ ಹಾಗೂ ಲಕ್ಷ್ಮಿ ಸಾಲ್ಯಾನ್ ದಂಪತಿಗಳ ಪುತ್ರನಾಗಿ ಸದಾಶಿವ ಅವರು ಜನಿಸಿದರು. ನಂತರ ಇವರ ಕುಟುಂಬ ಮುಂಬೈಗೆ ಶಿಫ್ಟ್ ಆಯಿತು. ಅಂಧೇರಿಯ ಚಿನ್ಮಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಸದಾಶಿವ ಅವರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾನ ಉದ್ಯೋಗಿಯಾಗಿದ್ದು, ಕಲಾ ಸೇವೆಯನ್ನು ಮುಂದುವರೆಸಿದರು.
ಸದಾಶಿವ ಸುವರ್ಣ, ಕೆಜೆ ರಾವ್, ಇಮ್ತಿಯಾಜ್ ಹುಸೇನ್ ಮುಂತಾದವರ ಸಂಪರ್ಕದಲ್ಲಿದ್ದ್ದು, ತುಳು, ಹಿಂದಿ, ಮರಾಠಿ, ಕನ್ನಡದಲ್ಲಿ 500ಕ್ಕೂ ಅಧಿಕ ರಂಗ ಪ್ರಯೋಗಗಳಲ್ಲಿ ಅಭಿನಯಿಸಿದರು.
1980ರಲ್ಲಿ ತುಳು ಚಿತ್ರರಂಗದ ನಟ ಟಿಎನ್ ಟೈಲರ್ ಅವರ ಕರ ಮೇರೆಗೆ ಭಾಗ್ಯವಂತೆದಿ ಚಿತ್ರದಲ್ಲಿ ನಟಿಸಿದರು. ನಂತರ ಸಾಲು ಸಾಲು ಉತ್ತಮ ಚಿತ್ರಗಳು ಹುಡುಕಿಕೊಂಡು ಬಂದವು. 2004ರಲ್ಲಿ ಆದ ಅಪಘಾತದಿಂದಾಗಿ ಕಾಲಿನ ಸ್ವಾದೀನ ಕಳೆದುಕೊಂಡು ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದರು.