ಮುಂಬೈ ಪೊಲೀಸರ ನೋಟಿಸ್ಗೆ ವಕೀಲರಿಂದ ಉತ್ತರ ನೀಡಿದ ಕಂಗನಾ
ಮುಂಬೈ, ಜುಲೈ 24: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಂಗನಾ ರಣಾವತ್ಗೆ ಮುಂಬೈ ಪೊಲೀಸರು ನೋಟಿಸ್ ನೀಡಿದ್ದರು. ಈ ನೋಟಿಸ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ, ತಮ್ಮ ವಕೀಲರ ಮೂಲಕ ಕೇಸ್ನ ತನಿಖೆಗೆ ಎಲ್ಲ ರೀತಿ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
Recommended Video
ಕಂಗನಾ ರಣಾವತ್ ಪ್ರಸ್ತುತ ಹಿಮಾಚಲ ಪ್ರದೇಶದ ಮನಾಲಿಯಲ್ಲಿದ್ದಾರೆ. ಲಾಕ್ಡೌನ್ ಆದ ಬಳಿಕ ಮಾರ್ಚ್ 17 ರಿಂದಲೂ ಸ್ವಗ್ರಾಮದಲ್ಲಿ ನೆಲೆಸಿದ್ದಾರೆ. ಅಗತ್ಯೆವನಿಸಿದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ನೀಡಲು ಕಂಗನಾ ಸಿದ್ದವಿದ್ದಾರೆ ಎಂದು ಕಂಗನಾ ವಕೀಲರ ಮೂಲಕ ಪತ್ರ ಬರೆದಿದ್ದಾರೆ.
ಸಿಬಿಐಗೆ ಸುಶಾಂತ್ ಕೇಸ್: ಅಮಿತ್ ಶಾಗೆ ಮನವಿ ಮಾಡಿದ ಗೆಳತಿ ರಿಯಾ
ಕಂಗನಾ ಅವರನ್ನು ಕೇಳ ಬಯಸುವ ಪ್ರಶ್ನೆಗಳನ್ನು ಇ-ಮೇಲ್ ಮೂಲಕ ಕಳುಹಿಸಿದರೆ, ಅದಕ್ಕೆ ವಿಡಿಯೋ ಮೂಲಕ ಉತ್ತರ ನೀಡಲು ಸಿದ್ಧರಿದ್ದಾರೆ ಅಥವಾ ಪೊಲೀಸ್ ಇಲಾಖೆಯ ಅಧಿಕಾರಿಗಳು ಯಾರಾದರೂ ಕಂಗನಾ ಊರಿಗೆ ಭೇಟಿ ನೀಡಿದರೆ ನೇರವಾಗಿ ಹೇಳಿಕೆ ಪಡೆಯಬಹುದು ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ ಭೀತಿಯಲ್ಲಿರುವ ಕಂಗನಾ ರಣಾವತ್ ಸದ್ಯ ಮನಾಲಿಯಿಂದ ಬಾಂದ್ರಾಗೆ ಪ್ರಯಾಣ ಮಾಡಲು ಸಾಧ್ಯವಿಲ್ಲ ಎಂದು ವಕೀಲರು ಮುಂಬೈ ಪೊಲೀಸರಿಗೆ ಹೇಳಿದ್ದಾರೆ.
ಈ ಮೊದಲು ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಕಂಗನಾ ಅವರ ಹೇಳಿಕೆ ಪಡೆಯಲು ಪೊಲೀಸರು ಮುಂದಾಗಿದ್ದು, ನಟಿಗೆ ಸಮನ್ಸ್ ನೀಡಿದ್ದರು ಎನ್ನಲಾಗಿತ್ತು. ಆದರೆ, ಕಂಗನಾ ಸಹೋದರಿ ರಂಗೋಲಿ ಈ ಸುದ್ದಿಯನ್ನು ನಿರಾಕರಿಸಿದ್ದರು. ಎರಡು ದಿನ ಬಳಿಕ ಸಮನ್ಸ್ ನೀಡಿರುವ ವಿಷಯ ತಿಳಿದಿದೆ.
ಅಂದ್ಹಾಗೆ, ಸುಶಾಂತ್ ಸಿಂಗ್ ರಜಪೂತ್ ಅವರ ಸಾವನ್ನು ನಟಿ ಕಂಗನಾ ಖಂಡಿಸಿದ್ದರು. ಸುಶಾಂತ್ ಅವರಿಗೆ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಅವರ ಸಾವಿಗೆ ಬಾಲಿವುಡ್ ಕಾರಣ ಎಂದು ಆರೋಪಿಸಿದ್ದರು. ಬಹಿರಂಗವಾಗಿ ಈ ಕುರಿತು ಮಾತನಾಡಿದ್ದ ಕಂಗನಾ ಕೆಲವು ನಿರ್ಮಾಪಕ, ನಿರ್ದೇಶಕರನ್ನು ದೂರಿದ್ದರು.