ಕಂಗನಾ ರಣಾವತ್ ವಿವಾದ: ಶಿವಸೇನಾ-ಎನ್ಸಿಪಿ ನಡುವೆ ಅಸಮಾಧಾನ ಸ್ಫೋಟ?
ಮುಂಬೈ, ಸೆಪ್ಟೆಂಬರ್ 9: ಕಂಗನಾ ರಣಾವತ್ ಅವರನ್ನು ಗುರಿಯಾಗಿರಿಸಿಕೊಂಡು ಬುಧವಾರ ಬೆಳಗ್ಗೆ ಮುಂಬೈನಲ್ಲಿರುವ ಅವರ ಕಚೇರಿಯನ್ನು ಉರುಳಿಸಿದ ಘಟನೆ, ಮಹಾರಾಷ್ಟ್ರದ ಆಡಳಿತಾರೂಢ ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನ ಸ್ಫೋಟವಾಗಿದೆ. ಶಿವಸೇನಾದ ನಡೆಯ ಬಗ್ಗೆ ಸರ್ಕಾರದ ಮಿತ್ರ ಪಕ್ಷ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅಸಮ್ಮತಿ ಸೂಚಿಸಿದ್ದಾರೆ.
ದೇಶದಾದ್ಯಂತ ಸದ್ದು ಮಾಡಿದ ಕಂಗನಾ ರಣಾವತ್ ವಿರುದ್ಧದ ಶಿವಸೇನಾ ಸರ್ಕಾರದ ಕ್ರಮದ ಬಗ್ಗೆ ಶರದ್ ಪವಾರ್ ಅವರು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಶಿವಸೇನಾ ಸಂಸದ ಸಂಜಯ್ ರಾವತ್ ಜತೆ ಸಭೆ ನಡೆಸಿದರು. ಈ ಪ್ರಕರಣದಲ್ಲಿ ಬಿಎಂಸಿ ತೆಗೆದುಕೊಂಡ ನಿರ್ಧಾರ ಸೂಕ್ತವಾಗಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ.
ಮುಂಬೈಗೆ ಬಂದಿಳಿಯುತ್ತಿದ್ದಂತೆಯೇ ಸಿಎಂ ಉದ್ಧವ್ ಠಾಕ್ರೆಗೆ ಕಂಗನಾ ಬಹಿರಂಗ ಸವಾಲು
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್, ಶಿವಸೇನಾದ ನಿಯಂತ್ರಣದಲ್ಲಿರುವ ಬಿಎಂಸಿಯ ನಡೆಯು ಅಂತಿಮವಾಗಿ ಕಂಗನಾ ರಣಾವತ್ಗೆ ಅನಗತ್ಯ ಪ್ರಚಾರ ನೀಡಿದೆ ಎಂದು ಟೀಕಿಸಿದರು. ಪಕ್ಷದ ಮಿತ್ರ ಪಕ್ಷವಾದ ಎನ್ಸಿಪಿಯ ಹಿರಿಯ ನಾಯಕ ಸರ್ಕಾರದ ನಡೆಯನ್ನು ಖಂಡಿಸಿರುವುದು ಶಿವಸೇನಾಗೆ ಮುಜುಗರ ಉಂಟುಮಾಡಿದೆ.
ನಿಯಮಕ್ಕೆ ತಕ್ಕಂತೆ ನಡೆದಿದೆ
'ಮುಂಬೈನಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ಹೊಸ ಸಂಗತಿಯಲ್ಲ. ಆದರೆ ಈಗ ನಡೆಯುತ್ತಿರುವ ವಿವಾದದ ಮಧ್ಯೆ ತೆಗೆದುಕೊಂಡಿರುವ ಕ್ರಮ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಆದರೆ ಬಿಎಂಸಿ ಅವರದೇ ಕಾರಣ ಮತ್ತು ನಿಯಮಗಳನ್ನು ಹೊಂದಿದೆ. ಅವರು ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ' ಎಂದು ಶರದ್ ಪವಾರ್ ಹೇಳಿದರು.
ತಪ್ಪು ಸಂದೇಶ ರವಾನೆ
'ಮಾಧ್ಯಮಗಳ ಕವರೇಜ್ ಬಗ್ಗೆ ನನ್ನ ಆಕ್ಷೇಪವಿದೆ. ಮಾಧ್ಯಮಗಳು ಇದನ್ನು ದೊಡ್ಡದಾಗಿಸಿವೆ. ಇಂತಹ ಘಟನೆಗಳನ್ನು ನಾವು ನಿರ್ಲಕ್ಷಿಸಬೇಕು' ಎಂದ ಅವರು, ನಿಯಮಗಳಿಗೆ ಅನುಗುಣವಾಗಿಯೇ ಬಿಎಂಸಿ ಕ್ರಮ ತೆಗೆದುಕೊಂಡಿದ್ದರೂ, ಈ ತೆರವು ಕಾರ್ಯಾಚರಣೆಯ ಸಮಯವು ಜನರಿಗೆ ತಪ್ಪು ಸಂದೇಶ ರವಾನಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಲೆ ನಿಮಗೂ ಎದುರಾಗಬಹುದು
ಈ ಘಟನೆ ಬಳಿಕವೂ ಕಂಗನಾ ರಣಾವತ್ ತಮ್ಮ ನಿಲುವು ಬದಲಿಸಿಕೊಂಡಿಲ್ಲ. "ಇದೇ ಕಾರಣಕ್ಕೆ ನಾನು ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಹೇಳಿರುವುದು" ಎಂದು ಮತ್ತೆ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಇಂದು ನನ್ನ ಮನೆಯನ್ನು ನೆಲಸಮಗೊಳಿಸಿದ್ದಾರೆ. ನಾಳೆ ಇಂತಹ ಪರಿಸ್ಥಿತಿ ನಿಮಗೂ ಎದುರಾಗಬಹುದು. ನನಗಾದ ಪರಿಸ್ಥಿತಿ ಸಾವಿರಾರು ಜನರಿಗೆ ಬರಬಹುದು'' ಎಂದು ಕಂಗನಾ ಹೇಳಿದ್ದಾರೆ.
ಕಂಗನಾ ಬಗ್ಗೆ ವಿವಾದಿತ ಹೇಳಿಕೆ: ಮಹಾರಾಷ್ಟ್ರ ಗೃಹ ಸಚಿವರಿಗೆ ಬೆದರಿಕೆ ಕರೆ
ಬಹಿರಂಗಗೊಳಿಸದೆ ಬಿಡೊಲ್ಲ
''ಬನ್ನಿ ಉದ್ಧವ್ ಠಾಕ್ರೆ ಮತ್ತು ಕರಣ್ ಜೋಹರ್ ಗ್ಯಾಂಗ್. ನೀವು ನನ್ನ ಕಚೇರಿಯನ್ನು ನೆಲಸಮಗೊಳಿಸಿದಿರಿ. ಬನ್ನಿ ನನ್ನ ಮನೆ, ದೇಹವನ್ನೂ ನೆಲಸಮ ಮಾಡಿ. ಇಡೀ ಜಗತ್ತೇ ನೀವು ಮಾಡುತ್ತಿರುವುದನ್ನು ನೋಡಲಿ. ನಾನು ಸಾಯಲಿ ಅಥವಾ ಬದುಕಲಿ, ನಿಮ್ಮ ಎಲ್ಲಾ ವಿಷಯಗಳನ್ನು ಬಹಿರಂಗಗೊಳಿಸದೇ ಬಿಡುವುದಿಲ್ಲ" ಎಂದು ಕಂಗನಾ ಸವಾಲು ಹಾಕಿದ್ದಾರೆ.