ಕಂಗನಾ ರಣಾವತ್ ವಿರುದ್ಧದ ಜಾವೇದ್ ಬೇಡಿಕೆಯನ್ನು ತಿರಸ್ಕರಿಸಿದ ನ್ಯಾಯಾಲಯ
ಮುಂಬೈ ಜನವರಿ 04: ವಿವಾದಿತ ನಟಿ ಕಂಗನಾ ರಣಾವತ್ ವಿರುದ್ಧ ಖ್ಯಾತ ಬರಹಗಾರ ಜಾವೇದ್ ಅಖ್ತರ್ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ ಕಂಗನಾ ರಣಾವತ್ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಜಾವೇದ್ ಅಖ್ತರ್ಗೆ ಹಿನ್ನಡೆಯಾಗಿದೆ. ಜಾವೇದ್ ಅಖ್ತರ್ ಅವರು ಕಂಗನಾ ಅವರನ್ನು ಜಾಮೀನು ರಹಿತ ವಾರೆಂಟ್ ಮೇಲೆ ಬಂಧಿಸುವಂತೆ ಆದೇಶಿಸುವಂತೆ ಇತ್ತೀಚೆಗೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಜಾವೇದ್ ಅಖ್ತರ್ ಅವರಿಗೆ ಮಂಗಳವಾರ ಹಿನ್ನಡೆಯಾಗಿದೆ. ಕಂಗನಾ ರಣಾವತ್ ವಿರುದ್ಧದ ಮಾನನಷ್ಟ ಮೊಕದ್ದಮೆಯಲ್ಲಿ ಕಂಗನಾ ರಣಾವತ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಬೇಕೆಂಬ ಜಾವೇದ್ ಅಖ್ತರ್ ಅವರ ಬೇಡಿಕೆಯನ್ನು ಮುಂಬೈ ಕೋರ್ಟ್ ತಿರಸ್ಕರಿಸಿದೆ. ಮುಂದಿನ ವಿಚಾರಣೆ ಫೆಬ್ರವರಿ 1 ರಂದು ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ನಲ್ಲಿ ನಡೆಯಲಿದೆ. ಜಾವೇದ್ ಅಖ್ತರ್ ಪರ ವಕೀಲ ಜೈ ಭಾರದ್ವಾಜ್ ಈ ಮಾಹಿತಿ ನೀಡಿದ್ದಾರೆ.
ಏನಿದು ಕೇಸ್?
ದೂರದರ್ಶನ ಸಂದರ್ಶನವೊಂದರಲ್ಲಿ ಕಂಗನಾ ಅವರು ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು, ಇದು ಅವರ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ,ಅಖ್ತರ್ (76) ಕಳೆದ ವರ್ಷ ನವೆಂಬರ್ನಲ್ಲಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಈ ದೂರನ್ನು ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆ ನಡೆಸುತ್ತಿದೆ.ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಬಾಲಿವುಡ್ನಲ್ಲಿ ಅಸ್ತಿತ್ವದಲ್ಲಿರುವ ಗುಂಪುಗಾರಿಕೆ('coterie')ಯನ್ನು ಉಲ್ಲೇಖಿಸುವಾಗ ರಾಣಾವತ್, ತಮ್ಮ ಹೆಸರನ್ನು ಎಳೆದು ತಂದಿದ್ದಾರೆ ಎಂದು ಜಾವೇದ್ ಅಖ್ತರ್ ದೂರಿನಲ್ಲಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ "ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ" ಹಾಕಿದ್ದಾರೆ ಎಂದು ಆರೋಪಿಸಿ ಅಖ್ತರ್ ವಿರುದ್ಧ ಅಂಧೇರಿ ನ್ಯಾಯಾಲಯದಲ್ಲಿ ರಣಾವತ್ ಪ್ರತಿ ದೂರು ಸಲ್ಲಿಸಿದ್ದಾರೆ.
ಈ ಹಿಂದೆ ಕೇಸ್ ವಿಚಾರಣೆ ನಡೆಸುತ್ತಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು, ತಮ್ಮ ವಿರುದ್ಧ ಸಾಹಿತಿ ಜಾವೇದ್ ಅಖ್ತರ್ ದಾಖಲಾಸಿರುವ ಮಾನನಷ್ಟ ಮೊಕದ್ದಮೆಯನ್ನು ವರ್ಗಾಯಿಸುವಂತೆ ಕೋರಿ ಬಾಲಿವುಡ್ ನಟಿ ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಅಕ್ಟೋಬರ್ 21 ಗುರುವಾರ ತಿರಸ್ಕರಿಸಿತ್ತು. ಈ ಬಗ್ಗೆ ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ ಕಂಗನಾ ರಣಾವತ್ ಅರ್ಜಿಯನ್ನು ತಿರಸ್ಕರಿಸಿತ್ತು.
ವಿವಾದಿತ ನಟಿ
ಸಿಕ್ಕ-ಸಿಕ್ಕವರ ವಿರುದ್ಧವೆಲ್ಲಾ ಟ್ವೀಟ್ ಮೂಲಕ ನಾಲಗೆ ಹರಿಬಿಡುವ ಕಂಗನಾಗೆ ಸಹಜವಾಗಿಯೇ ಸ್ನೇಹಿತರಿಗಿಂತಲೂ ವಿರೋಧಿಗಳು ಹೆಚ್ಚಾಗಿದ್ದಾರೆ. ಹೃತಿಕ್ ರೋಷನ್ ಇಂದ ಆರಂಭಿಸಿ ದೀಪಿಕಾ ಪಡುಕೋಣೆ, ತಾಪ್ಸಿ ಪನ್ನು, ಊರ್ಮಿಳಾ ಮತೋಡ್ಕರ್, ಮಹೇಶ್ ಭಟ್, ಸೋನು ಸೂದ್, ತಾಪ್ಸಿ ಪನ್ನು, ಸ್ವರಾ ಭಾಸ್ಕರ್, ಕರೀನಾ ಕಪೂರ್, ರಿಯಾ ಚಕ್ರವರ್ತಿ, ಅನು ಮಲ್ಲಿಕ್, ಶಿಲ್ಪಾ ಶೆಟ್ಟಿ, ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್ ಇನ್ನೂ ಹಲವಾರು ಟಾಪ್ ಸೆಲೆಬ್ರಿಟಿಗಳ ವಿರುದ್ಧ ಕಂಗನಾ ಟ್ವೀಟ್ ಮಾಡಿದ್ದಾರೆ. ಬಾಲಿವುಡ್ನ ಹಿರಿಯ ಜಾವೇದ್ ಅಖ್ತರ್ ಅನ್ನೂ ಕಂಗನಾ ಬಿಟ್ಟಿಲ್ಲ.
ನ್ಯಾಯಾಧೀಶರ ತನಿಖೆ ಆದೇಶಕ್ಕೆ ವಿರುದ್ಧ ಕಂಗನಾ
ನಟಿ ಕಂಗನಾ ಟಿವಿ ಸಂದರ್ಶನವೊಂದರಲ್ಲಿ ಜಾವೇದ್ ಅಖ್ತರ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಲ್ಲದೆ ಅಪಮಾನಕರ ರೀತಿಯಲ್ಲಿ ಮಾತನಾಡಿದ್ದರು. ಇದರಿಂದ ಕೆರಳಿದ್ದ ಜಾವೇದ್ ಅಖ್ತರ್ ಕಂಗನಾ ವಿರುದ್ಧ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದಾವೆ ಹೂಡಿದ್ದರು. ಇದಕ್ಕೆ ಪ್ರತಿಯಾಗಿ ಕಂಗನಾ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶಿಸಿತ್ತು. ಇದರ ವಿರುದ್ಧ ನಟಿ ಕಂಗನಾ ಹೈಕೋರ್ಟ್ ಮೆಟ್ಟಿಲೇರಿ ತಮ್ಮ ವಿರುದ್ಧ ತನಿಖೆಯನ್ನು ರದ್ದು ಮಾಡುವಂತೆ ಕೋರಿದ್ದರು ಅದಕ್ಕೆ ಬಾಂಬೆ ಹೈಕೋರ್ಟ್ ಒಪ್ಪಿರಲಿಲ್ಲ. ಬಳಿಕ ಅಖ್ತರ್ ಅವರು ಹೊಸ ಅಫಿಡವಿಟ್ ಅನ್ನು ಸಲ್ಲಿಸಿ ಕಂಗನಾ ರನೌತ್ ಉದ್ದೇಶಪೂರ್ವಕವಾಗಿ ಕಾನೂನು ಪ್ರಕ್ರಿಯೆ ತಡವಾಗುವಂತೆ ಮಾಡುತ್ತಿದ್ದಾರೆ. ಕಂಗನಾಗೆ ಕಠಿಣ ಸಂದೇಶವನ್ನು ನ್ಯಾಯಾಲಯವು ರವಾನಿಸಬೇಕು ಎಂದು ಒತ್ತಾಯಿಸಿದ್ದರು.
ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ತನಿಖೆ ಆದೇಶಕ್ಕೆ ವಿರುದ್ಧವಾಗಿ ಉತ್ತರ ನೀಡಿದ್ದ ಕಂಗನಾ ರನೌತ್, ''ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಿನಾಕಾರಣ ಪೊಲೀಸ್ ತನಿಖೆಗೆ ಆದೇಶ ನೀಡಿದೆ. ಪೊಲೀಸರು ಯಾವುದೇ ತನಿಖೆ ನಡೆಸದೆ ಕೇವಲ ಹೇಳಿಕೆಗಳನ್ನು ಸಹ ದಾಖಲಿಸಿ ಸಹಿ ಪಡೆದುಕೊಳ್ಳುತ್ತಿದ್ದಾರೆ. ಸಾಕ್ಷಿಧಾರರ ಮೇಲೆ ಪೊಲೀಸರು ಪ್ರಭಾವ ಬಳಿಸಿದ್ದಾರೆ'' ಎಂದಿದ್ದರು. ಅಲ್ಲದೆ ಹಲವು ಬಾರಿ ನ್ಯಾಯಾಲಯವು ನೊಟೀಸ್ ನೀಡಿದಾಗಲೂ ಕಂಗನಾ ಕಾರಣಗಳನ್ನು ನೀಡಿ ತಪ್ಪಿಸಿಕೊಂಡಿದ್ದರು.
ಮಹತ್ಮಾ ಗಾಂಧಿಜಿ ವಿರುದ್ಧ ಹೇಳಿಕೆ
ನಟಿ ಕಂಗನಾ ರನೌತ್ಗೆ ಈ ರೀತಿಯ ಪ್ರಕರಣಗಳು ಹೊಸದೇನೂ ಅಲ್ಲ. ಈ ಹಿಂದೆ ಕಂಗನಾ ರನೌತ್ ರೈತರ ಪ್ರತಿಭಟನೆ ವಿರುದ್ಧ ಮಾಡಿದ್ದ ಟ್ವೀಟ್ ಭಾರಿ ವಿರೋಧಕ್ಕೆ ಕಾರಣವಾಗಿತ್ತು. ಕರ್ನಾಟಕದ ತುಮಕೂರು, ಬೆಳಗಾವಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕಂಗನಾ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಶಿವಸೇನಾ ಪಕ್ಷ ಹಾಗೂ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಮಾಡಿರುವ ಆರೋಪಗಳಿಗೆ ವಿರುದ್ಧವಾಗಿಯೂ ಕೆಲವು ಪ್ರಕರಣಗಳು ದಾಖಲಾಗಿವೆ. ಮಾತ್ರವಲ್ಲದೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹತ್ಮಾ ಗಾಂಧಿ ಬಗ್ಗೆ ಕಂಗನಾ ಹೇಳಿಕೆ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು.
Recommended Video