ಬಿಟ್ ಕಾಯಿನ್ ಸೀಕ್ರೆಟ್: ಅಂಬಾನಿಗೆ ಹಣದ ಬೇಡಿಕೆಯಿಟ್ಟ ಸಂಘಟನೆ ಹೆಸರು ಬಹಿರಂಗ
ಮುಂಬೈ, ಫೆಬ್ರವರಿ.28: ಮಹಾರಾಷ್ಟ್ರದಲ್ಲಿ ಉದ್ಯಮಿ ಮುಕೇಶ್ ಅಂಬಾನಿಯವರಿಗೆ ಸೇರಿದ ಮುಂಬೈನ ಅಂಟಿಲಿಯಾ ನಿವಾಸದ ಬಳಿ ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣದ ಹೊಣೆಯನ್ನು ಜೈಶ್-ಉಲ್ ಹಿಂದ್ ಸಂಘಟನೆ ಹೊತ್ತುಕೊಂಡಿದೆ.
ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಎದುರಿನಲ್ಲಿ ನಿಲ್ಲಿಸಿದ್ದ ಸ್ಕಾರ್ಪಿಯೋ ಕಾರಿನಲ್ಲಿ ಪತ್ತೆಯಾದ ಜಿಲೆಟಿನ್ ಸ್ಫೋಟಕದ ಕಡ್ಡಿಗಳು ಪತ್ತೆಯಾಗಿದ್ದವು. ಇದರ ಜೊತೆಗೆ ಒಂದು ಪತ್ರ ಸಿಕ್ಕಿದ್ದು, ಅದರಲ್ಲಿ ಎಚ್ಚರಿಕೆ ಸಂದೇಶವನ್ನು ಬರೆಯಲಾಗಿತ್ತು.
'ಇದು ಟ್ರೇಲರ್ ಅಷ್ಟೇ': ಮುಕೇಶ್ ಅಂಬಾನಿಗೆ ಎಚ್ಚರಿಕೆ ಪತ್ರ
"ಸಹೋದರ ಇಂದು ನೀವು ಸುರಕ್ಷಿತವಾಗಿ ಮನೆಗೆ ತಲುಪಿದ್ದೀರಿ. ಆದರೆ ಇದು ಟ್ರೇಲರ್ ಅಷ್ಟೇ. ಪಿಕ್ಚರ್ ಇನ್ನೂ ಬಾಕಿಯಿದೆ" ಎಂದು ಜೈಶ್ ಉಲ್ ಹಿಂದ್ ಸಂಘಟನೆಯು ಎಚ್ಚರಿಕೆ ನೀಡಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಬಿಟ್ ಕಾಯಿನ್ ರೂಪದಲ್ಲಿ ಹಣ ನೀಡಲು ಬೇಡಿಕೆ
ಟೆಲಿಗ್ರಾಮ್ ಮೂಲಕ ನೀಡಿರುವ ಸಂದೇಶದಲ್ಲಿ ಉದ್ಯಮಿ ಮುಕೇಶ್ ಅಂಬಾನಿಯವರಿಗೆ ಹಣ ನೀಡುವಂತೆ ಜೈಶ್-ಉಲ್ ಹಿಂದ್ ಸಂಘಟನೆಯು ಬೇಡಿಕೆ ಇಟ್ಟಿದೆ. ಬಿಟ್ ಕಾಯಿಲ್ ಮೂಲಕ ಹಣವನ್ನು ನೀಡುವಂತೆ ಕೇಳಿದೆ. ಇದರ ಜೊತೆಗೆ "ನಿಮ್ಮಿಂದ ಸಾಧ್ಯವಾದರೆ ನಮ್ಮನ್ನು ತಡೆಯಿರಿ" ಎಂದು ತನಿಖಾಧಿಕಾರಿಗಳಿಗೆ ಸಂಘಟನೆಯ ಸಂದೇಶದಲ್ಲಿ ಸವಾಲು ಹಾಕಲಾಗಿದೆ.
ಉದ್ಯಮಿಗೆ ಬೆದರಿಕೆ ಹಾಕಿರುವ ಜೈಶ್-ಉಲ್ ಹಿಂದ್
ಉದ್ಯಮಿ ಮುಕೇಶ್ ಅಂಬಾನಿಗೆ ನೀಡಿರುವ ಸಂದೇಶದಲ್ಲಿ ಜೈಶ್-ಉಲ್ ಹಿಂದ್ಸಂಘಟನೆಯು ಮತ್ತೊಂದು ರೀತಿ ಎಚ್ಚರಿಕೆ ನೀಡಿದೆ. ಈ ಬಾರಿ ನೀವು ಹಣ ನೀಡುವುದಕ್ಕೆ ಒಪ್ಪದಿದ್ದರೆ ಮುಂದಿನ ಬಾರಿ ನಿಮ್ಮ ಮಕ್ಕಳ ಕಾರಿನಲ್ಲಿ ಸ್ಫೋಟಕಗಳನ್ನು ಇರಿಸಲಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ. ಅಲ್ಲದೇ, ಸದ್ಯದ ಮಟ್ಟಿಗೆ ನೀವು ಏನು ಮಾಡಬೇಕು ಎನ್ನುವುದು ನಿಮಗೆ ಸರಿಯಾಗಿ ಗೊತ್ತಿದೆ. ಸುಮ್ಮನೆ ನಾವು ಹೇಳಿದಂತೆ ಹಣವನ್ನು ನೀಡಿರಿ ಎಂದು ಸಂದೇಶದಲ್ಲಿ ಬರೆಯಲಾಗಿದೆ.
ಮುಕೇಶ್ ಅಂಬಾನಿ ನಿವಾಸದ ಬಳಿ ಜಿಲೆಟಿನ್ ಕಡ್ಡಿ
ಮಹಾರಾಷ್ಟ್ರ ಮುಂಬೈನಲ್ಲಿರುವ ಉದ್ಯಮಿ ಮುಕೇಶ್ ಅಂಬಾನಿಯವರಿಗೆ ಸೇರಿದ ಅಂಟಿಲಿಯಾ ನಿವಾಸದ ಮುಂಭಾಗದಲ್ಲಿ 20 ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಎಸ್ಯುವಿಯೊಂದು ಫೆಬ್ರವರಿ.25ರ ಸಂಜೆ ಸಮಯದಲ್ಲಿ ಪತ್ತೆಯಾಗಿತ್ತು. ಪೆಡ್ಡರ್ ರಸ್ತೆಯ ಅಂಬಾನಿ ನಿವಾಸದ ಸಮೀಪದಲ್ಲಿ ಸ್ಕಾರ್ಪಿಯೋ ಕಾರ್ನಲ್ಲಿ ಈ ಸ್ಫೋಟಕಗಳು ಪತ್ತೆಯಾಗಿದ್ದವು. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ, ಬಾಂಬ್ ನಿಷ್ಕ್ರಿಯ ದಳ, ಶ್ವಾನಪಡೆ, ಕ್ರೈಂ ಬ್ರಾಂಚ್ ಮುಂತಾದ ಪಡೆಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದವು.
ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸ್ಫೋಟಕ ಪತ್ತೆ ಘಟನೆ
ಕೆಲವೇ ಕೆಲವು ದಿನಗಳ ಹಿಂದೆ ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸಂಭವಿಸಿದ ಸ್ಫೋಟದ ಹೊಣೆಯನ್ನು ಸಹ ಇದೇ ಜೈಶ್-ಉಲ್ ಹಿಂದ್ ಸಂಘಟನೆ ವಹಿಸಿಕೊಂಡಿತ್ತು. ಈ ಹಿಂದಿನ ಸಂದೇಶದಲ್ಲಿ "ನಮ್ಮನ್ನು ತಡೆಯುವ ಶಕ್ತಿ ನಿಮಗಿದೆಯೇ? ದೆಹಲಿಯಲ್ಲಿ ನಿಮ್ಮ ಮೂಗಿಗೆ ಹೊಡೆದ ಸಂದರ್ಭದಲ್ಲಿಯೇ ನೀವು ನಮ್ಮನ್ನು ಏನೂ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಅಲ್ಲಾಹ್ ಆಶೀರ್ವಾದದಿಂದ ನೀವು ಮತ್ತೆ ಮತ್ತೆ ಬೀಳುತ್ತಿದ್ದೀರಿ" ಎಂದು ಬರೆಯಲಾಗಿದೆ.