ರಾಮಮಂದಿರ ನಿರ್ಮಾಣ ಕೂಡಾ 'ಜೂಮ್ಲಾ' : ಉದ್ಧವ್ ಠಾಕ್ರೆ
ಮುಂಬೈ, ನವೆಂಬರ್ 20: "ಮೊದಲು ಮಂದಿರ, ನಂತರ ಸರ್ಕಾರ. ಇದು ಎಲ್ಲ ಹಿಂದುಗಳ ಬೇಡಿಕೆ. ಹಾಗಾಗಿ ಆದಷ್ಟು ಬೇಗ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಬೇಕು" ಎಂದು ಘೋಷಿಸಿದ್ದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಇಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಮೋದಿ ಭರವಸೆಗಳೆಲ್ಲವೂ ಚುನಾವಣೆ ಕಾಲದ ಪೊಳ್ಳು ಆಶ್ವಾಸನೆಗಳು ಎಂದು ಜೂಮ್ಲಾ ಎಂಬ ಪದದೊಂದಿಗೆ ಕೆಣಕುತ್ತಿದ್ದ ಕಾಂಗ್ರೆಸ್ಸಿಗರಂತೆ ಉದ್ಧವ್ ಠಾಕ್ರೆ ಕೂಡಾ ಬಿಜೆಪಿಯ ಕಾಲೆಳೆದಿದ್ದಾರೆ.
Just like Rs 15 lakh in everyone’s account,is Ram Mandir also a jumla? When we're taking up this issue, we aim to ensure that Ram Mandir is actually built.This issue comes up only during the elections &once elections are over it is forgotten: Uddhav Thackeray, Shiv Sena in Mumbai pic.twitter.com/XFlMCTDMUU
— ANI (@ANI) November 20, 2018
ಮುಂಬೈನಲ್ಲಿ ನಡೆದ ಶಿವಸೇನೆಯ ಸಮಾವೇಶವೊಂದರಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, "ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಬಂದು ಬೀಳುತ್ತದೆ ಎಂದಿದ್ದ ಕೇಂದ್ರ ಸರ್ಕಾರದ ಭರವಸೆ ಎಷ್ಟು ಸುಳ್ಳೋ, ರಾಮ ಮಂದಿರ ನಿರ್ಮಾಣವಾಗುತ್ತದೆ ಎಂಬ ಭರವಸೆಯೂ ಅಷ್ಟೇ ಸುಳ್ಳು ಇರಬಹುದು' ಎಂದು ಕಿಚಾಯಿಸಿದ್ದಾರೆ.
"ರಾಮ ಮಂದಿರದ ವಿಚಾರವನ್ನು ನಾವು ಕೈಗೆತ್ತಿಕೊಂಡಾಗ, ಮಂದಿರವನ್ನು ನಿಜವಾಗಿಯೂ ನಿರ್ಮಾಣ ಮಾಡುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಆದರೆ, ರಾಮ ಮಂದಿರದ ವಿಚಾರ ಪ್ರತಿ ಚುನಾವಣೆ ಹೊತ್ತಲ್ಲೂ ಚರ್ಚೆಗೆ ಬರುತ್ತದೆ. ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಎಲ್ಲರೂ ಮರೆತುಬಿಡುತ್ತಾರೆ' ಎಂದು ವಿಷಾದ ವ್ಯಕ್ತಪಡಿಸಿದರು.
ನವೆಂಬರ್ 25ರಂದು ಅಯೋಧ್ಯೆಗೆ ಭೇಟಿ ನೀಡಲಿರುವ ಉದ್ಧವ್ ಠಾಕ್ರೆ ಅವರು ವಿಶ್ವ ಹಿಂದೂ ಪರಿಷತ್ ಸಹಯೋಗದೊಂದಿಗೆ ಬೃಹತ್ ಸಮಾವೇಶ ಆಯೋಜಿಸಿದ್ದಾರೆ.