ಡಿ ಗ್ಯಾಂಗಿನ ಮಿರ್ಚಿ ಜೊತೆ ಸಂಪರ್ಕ, ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ಸಮನ್ಸ್
ಮುಂಬೈ, ಅಕ್ಟೋಬರ್ 28: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಇಕ್ಬಾಲ್ ಮಿರ್ಚಿಯ ಆರ್ಥಿಕ ಅವ್ಯವಹಾರದ ಜೊತೆ ನಂಟು ಹೊಂದಿರುವ ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯ ಚುರುಕು ಮುಟ್ಟಿಸುತ್ತಿದೆ. ಮಾಜಿ ಸಚಿವ ಪ್ರಫುಲ್ ಪಟೇಲ್ ವಿಚಾರಣೆ ಬಳಿಕ ಸ್ಟಾರ್ ದಂಪತಿಗಳಿಗೆ ಸೋಮವಾರದಂದು ಸಮನ್ಸ್ ಜಾರಿಗೊಳಿಸಲಾಗಿದೆ.
ಡಿ ಗ್ಯಾಂಗ್ ಮನಿ ಲಾಂಡ್ರಿಂಗ್ ಗೂ ಬೆಂಗಳೂರಿನ ಮಹಿಳೆಗೂ ಲಿಂಕ್: ಇಡಿ
ಡಿ ಗ್ಯಾಂಗಿನ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ಉದ್ಯಮಿ ರಾಜ್ ಕುಂದ್ರಾಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ನೀಡಿದೆ. ದಾವೂದ್ ಇಬ್ರಾಹಿಂ ಗ್ಯಾಂಗಿನ ಇಕ್ಬಾಲ್ ಮಿರ್ಚಿ ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ನ.04ರಂದು ಮುಂಬೈನ ಜಾರಿ ನಿರ್ದೇಶಾನಲಯ ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ. ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗಿನ ಆಸ್ತಿ ಪಾಸ್ತಿ ಕಾಯುತ್ತಿದ್ದ ಇಕ್ಬಾಲ್ ಮಿರ್ಚಿಗಾಗಿ ಕೆಲಸ ಮಾಡುತ್ತಿದ್ದ ಆರೋಪಿತ ವ್ಯಕ್ತಿಯೊಬ್ಬರು ರಾಜ್ ಕುಂದ್ರಾ ಅವರ ಬಿಸಿನೆಸ್ ಪಾರ್ಟ್ನರ್ ಆಗಿದ್ದಾರೆ. ಐಪಿಎಲ್ ಮ್ಯಾಚ್ ಫಿಕ್ಸಿಂಗ್, ಬಿಟ್ ಕಾಯಿನ್ ಅವ್ಯವಹಾರಗಳಲ್ಲಿ ಈ ದಂಪತಿ ಸಿಲುಕಿದ್ದನ್ನು ಇಲ್ಲಿ ಸ್ಮರಿಸಬಹುದು.
ತೀವ್ರಗೊಂಡ ತನಿಖೆ: ಇತ್ತೀಚೆಗೆ ಇಕ್ಬಾಲ್ ಮಿರ್ಚಿ ಆಪ್ತ ಹುಮಾಯುನ್ ಮರ್ಚಂಟ್ ನನ್ನು ಬಂಧಿಸಲಾಗಿತ್ತು. ನಂತರ ಬೆಂಗಳೂರು ಮೂಲದ 45 ವರ್ಷ ವಯಸ್ಸಿನ ರಿಂಕು ದೇಶಪಾಂಡೆ ಎಂಬ ಮಹಿಳೆಯನ್ನು ಮನಿಲಾಂಡ್ರಿಂಗ್ (ಪಿಎಂಎಲ್ ಎ) ಪ್ರಕರಣದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
ಬಿಟ್ ಕಾಯಿನ್ ಹಗರಣ : ರಾಜ್ ಕುಂದ್ರಾಗೆ 'ಇಡಿ' ಸಮನ್ಸ್
ಇದಕ್ಕೂ ಮುನ್ನ ಹರೂನ್ ಅಲೀಂ ಯೂಸುಫ್ ಹಾಗೂ ರಂಜೀತ್ ಸಿಂಗ್ ಬಿಂದ್ರಾ ಅವರನ್ನು ಬಂಧಿಸಲಾಗಿದೆ. ಎನ್ಸಿಪಿಯ ಹಿರಿಯ ಮುಖಂಡ ಪ್ರಫುಲ್ ಪಟೇಲ್ ಅವರನ್ನು ಕಳೆದ ವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೊಳಪಡಿಸಲಾಗಿತ್ತು.
2013ರಲ್ಲಿ ಲಂಡನ್ನಿನಲ್ಲಿ ಹೃದಯಾಘಾತಕ್ಕೊಳಗಾಗಿ ಇಕ್ಬಾಲ್ ಮಿರ್ಚಿ ಮೃತಪಟ್ಟಿದ್ದು, ದಾವೂದ್ ಇಬ್ರಾಹಿಂನ ಬಲಗೈ ಬಂಟರ ಪೈಕಿ ಒಬ್ಬನೆನಿಸಿದ್ದ. ಮಾದಕ ದ್ರವ್ಯ ಸಾಗಣೆ, ಬೆದರಿಕೆ, ಆಸ್ತಿ ಕಬಳಿಕೆ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ. ಮುಂಬೈನ ಅನೇಕ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಕಾಲ ಕಾಲಕ್ಕೆ ಬೆದರಿಕೆ ಕರೆ ಮಾಡಿ ಹಫ್ತಾ ವಸೂಲಿ ಈತನ ಕಸುಬಾಗಿತ್ತು.