ಅವಹೇಳನಾಕಾರಿ ಜಾಹೀರಾತು: ನಟ ಅಕ್ಷಯ್ ಕುಮಾರ್ ವಿರುದ್ಧ ಮರಾಠ ಸಂಘಟನೆ ದೂರು
ಔರಂಗಾಬಾದ್, ಜನವರಿ 11: ವಾಷಿಂಗ್ ಪೌಡರ್ನ ಜಾಹೀರಾತಿನಲ್ಲಿ ಮರಾಠ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಮಹಾರಾಷ್ಟ್ರದ ನಾಂಡೇದ್ನಲ್ಲಿ ಮರಾಠ ಸಂಘಟನೆಯೊಂದು ಜಿಲ್ಲಾ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿದೆ.
'ನಿರ್ಮಾ ವಾಷಿಂಗ್ ಪೌಡರ್' ಜಾಹೀರಾತಿನಲ್ಲಿ ಮರಾಠ ಯೋಧರಂತೆ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಈ ಜಾಹೀರಾತಿನ ಪ್ರಸ್ತುತಿಯು ಮರಾಠ ಸೈನಿಕರನ್ನು ಅವಮಾನಿಸಿದೆ ಎಂದು ನಾಂಡೇದ್ ಜಿಲ್ಲಾಧಿಕಾರಿ ಮತ್ತು ವಜಿರಾಬಾದ್ ಪೊಲೀಸರಿಗೆ ಗುರುವಾರ ಪತ್ರ ಸಲ್ಲಿಸಿರುವ ಸಂಭಾಜಿ ಬ್ರಿಗೇಡ್, ಅಕ್ಷಯ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದೆ.
ಜಾಮಿಯಾ ವಿವಿ ಪ್ರತಿಭಟನೆ ಲೈಕ್ ಮಾಡಿದ್ದು ಬೈ ಮಿಸ್ಟೇಕ್: ಅಕ್ಷಯ್ ಕುಮಾರ್
ಜಾಹೀರಾತಿನಲ್ಲಿ, ನಟ ಅಕ್ಷಯ್ ಕುಮಾರ್ ಮರಾಠಾ ರಾಜನ ಪಾತ್ರದಲ್ಲಿ ಕಾಣಿಸಿದ್ದಾರೆ. ಯುದ್ಧದಲ್ಲಿ ಗೆದ್ದು ತಮ್ಮ ಸೇನೆಯೊಂದಿಗೆ ಅರಮನೆಗೆ ಬರುವ ರಾಜನನ್ನು ಕೊಳೆ ಬಟ್ಟೆಯ ಬಗ್ಗೆ ರಾಣಿ ಲೇವಡಿ ಮಾಡುತ್ತಾಳೆ. ಬಳಿಕ ರಾಜ ಹಾಗೂ ಇತರೆ ಸೈನಿಕರು ನರ್ತಿಸುತ್ತಾ ತಮ್ಮ ಬಟ್ಟೆಗಳನ್ನು ತಾವೇ ಒಗೆಯುವ ದೃಶ್ಯವನ್ನು ತೋರಿಸಲಾಗಿದೆ.
ಈ ಜಾಹೀರಾತಿನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಂಭಾಜಿ ಬ್ರಿಗೇಡ್ ಸಲ್ಲಿಸಿರುವ ಪತ್ರವನ್ನು ವರಿಷ್ಠಾಧಿಕಾರಿಗಳ ಕಚೇರಿಗೆ ಕಳುಹಿಸಿರುವುದಾಗಿ ವಜಿರಾಬಾದ್ ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಈ ಜಾಹೀರಾತಿನಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಬಾಯ್ಕಾಟ್ ನಿರ್ಮಾ ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗುತ್ತಿದೆ.